ಚಿಕ್ಕಮಗಳೂರು ಶ್ರೀ ಪಾರ್ವತಿ ಮಹಿಳಾ ಮಂಡಳಿ ವತಿಯಿಂದ ಶಿವರಾತ್ರಿಯನ್ನು ಆಚರಿಸಲಾಯಿತು.
ಶಿವನ ಪ್ರತಿಮೆ ಪ್ರತಿಷ್ಠಾಪಿಸಿ, ಬಿಲ್ವಪತ್ರೆ-ತುಂಬೆ ನಾನಾವಿಧದ ಹೂಗಳಿಂದ ಪೂಜಿಸಿ, ವಿಭೂತಿ, ರುದ್ರಾಕ್ಷಿಯಿಂದ ಅಲಂಕರಿಸಿ ಸಾಮೂಹಿಕ ಅಷ್ಟೋತ್ತರ-ಜಪ, ಶಿವಸ್ತೋತ್ರ-ಭಕ್ತಿಗೀತೆಗಳ ಗಾಯನ, ಶಿವರಾತ್ರಿ ಉಂಡೆ ವಿತರಿಸುವ ಮೂಲಕ ಶಿವರಾತ್ರಿಯನ್ನು ಶ್ರೀಪಾರ್ವತಿ ಮಹಿಳಾಮಂಡಳಿ ಸಂಭ್ರಮಿಸಿತು.
ಚಿಕ್ಕೊಳಲೆ ಸದಾಶಿವಶಾಸ್ತ್ರಿ ಸಭಾಂಗಣದಲ್ಲಿ ನಿನ್ನೆ ಶುಕ್ರವಾರ ಶಿವನ ಸುಂದರ ಪ್ರತಿಮೆ ಪ್ರತಿಷ್ಠಾಪಿಸಿ ಶಿವಮಹಿಮೆಯನ್ನು ಕೊಂಡಾಡಲಾಯಿತು. ಬಗ್ಗವಳ್ಳಿಯ ಕನ್ನಡಶಿಕ್ಷಕಿ ಮಂಜುಳಾರೇಣುಕ ಸಮಾರಂಭ ಉದ್ಘಾಟಿಸಿ ಮಾತನಾಡಿ ಸಾಂಪ್ರದಾಯಕ ಶಿವರಾತ್ರಿ ವೈಜ್ಞಾನಿಕ ಅಂಶಗಳನ್ನು ಒಳಗೊಂಡಿದೆ ಎಂದರು.
ಚಳಿಗಾಲ ಮುಗಿದು ಬೇಸಿಗೆ ಪ್ರಾರಂಭದ ದಿನಗಳಲ್ಲಿ ಮಿತ ಆಹಾರ, ಬಿಲ್ವಪತ್ರೆ ಹೃದಯಾಕಾರದಲ್ಲಿದ್ದು ಮಧುಮೇಹ, ರಕ್ತದೊತ್ತಡ ಸೇರಿದಂತೆ ಹಲವು ರೋಗಗಳಿಗೆ ಮದ್ದು. ಅಭಿಷೇಕದಿಂದ ತಂಪು. ಹಸಿಕಾಳುಗಳ ಸೇವನೆ ಸೇರಿದಂತೆ ಸಾತ್ವಿಕ ಬದುಕಿನ ಎಚ್ಚರಿಕೆ ನೀಡುವ ಹಬ್ಬವಿದು. ತುಂಬೆ ಹೊರತುಪಡಿಸಿ ಬಹುತೇಕ ಹೂವುಗಳು ಉದುರಿ ಹೋಗುವ ಸಂದರ್ಭ ವೈರಾಗ್ಯದ ಸಂಕೇತ. ಬೇಡರಕಣ್ಣಪ್ಪನ ಕಥೆಯಿಂದ ಶಿವರಾತ್ರಿ ಹೆಚ್ಚು ಪ್ರಚಲಿತ ಎಂದರು.
ಶಿವಪುರಾಣದಲ್ಲಿ ಶಿವರಾತ್ರಿಯನ್ನು ಭಗೀರಥ ಗಂಗೆಯನ್ನು ಭೂಮಿಗೆ ತಂದ ದಿನ. ದಾಕ್ಷಾಯಣಿಯನ್ನು ಶಿವ ವಿವಾಹವಾದ, ಸಮುದ್ರಮಥನದಲ್ಲಿ ಹಲಾಹಲ ಹೊರಬಂದಾಗ ವಿಷವನ್ನೆಲ್ಲ ಕುಡಿದು ನೀಲಕಂಠನಾದ ಶಿವನನ್ನು ದೇವ-ದಾನವರು ಪೂಜಿಸಿದ ದಿನವೆಂದು ಉಲ್ಲೇಖಿಸಲಾಗಿದೆ ಎಂದರು.
ಶಿಲೆ ಸಂಸ್ಕಾರ ಪಡೆದು ಶಿಲ್ಪವಾಗುತ್ತದೆ. ಮಣ್ಣು ಮಡಿಕೆಯಾಗುತ್ತದೆ. ಹಾಲು ತುಪ್ಪವಾಗುತ್ತದೆ. ಅಂತೆಯೇ ಸಂಸ್ಕಾರ ಪಡೆದ ಮಗು ಮಹಾಯೋಗಿಯಾಗುತ್ತಾನೆ. ಹಬ್ಬ-ಆಚರಣೆಗಳು ಸಂಸ್ಕಾರ-ಸಂಸ್ಕøತಿಯನ್ನು ಮುಂದುವರೆಸಲು ಸಹಕಾರಿ ಎಂದ ಮಂಜುಳಾ, ನಿರ್ವಿಕಾರ ಶಿವ ಕೆಟ್ಟವರಲ್ಲೂ ಇರುವ ಭಕ್ತಿಯನ್ನು ಗಮನಿಸುವ ಉದಾರತೆ ಹೊಂದುವ ಮೂಲಕ ಸಾಮರಸ್ಯವನ್ನು ಸಾರುತ್ತಾನೆ ಎಂದರು.
ವಿಭೂತಿ, ರುದ್ರಾಕ್ಷಿ ವೈರಾಗ್ಯದ ಸಂಕೇತವಾದ ಪರಶಿವ ಲಿಂಗರೂಪಿ. ಪರಿಸರ ಪ್ರೇಮಿಯೂ ಹೌದು. ಕೊರಳಲ್ಲೆ ಹಾವು ಹಾನಿಕಾರಕವಾದರೂ ಜೊತೆಯಲ್ಲೆ ಇಟ್ಟುಕೊಳ್ಳುವುದನ್ನು ಸೂಚಿಸಿದರೆ, ನೆತ್ತಿಯಲ್ಲಿ ಗಂಗೆ ತಂಪನ್ನು ಪ್ರತಿನಿಧಿಸುತ್ತದೆ. ತಲೆಯಲ್ಲಿ ಧರಿಸಿದ ಅರ್ಧಚಂದ್ರ ಇನ್ನಷ್ಟು ಕಲಿಯಬೇಕೆಂಬುದನ್ನು ಸಂಕೇತಿಸುತ್ತದೆ. ವೈರಾಗ್ಯವೆಂದರೆ ಆಕರ್ಷಣೆಗೆ ಒಳಗಾಗದಿರುವುದು ಹೊರತು ಎಲ್ಲವನ್ನೂ ಬಿಟ್ಟು ಕೊಡು ಎನ್ನುವುದಲ್ಲ ಎಂದ ಮಂಜುಳಾ, ಅರ್ಧನಾರೇಶ್ವರನಾಗಿ ಮಹಿಳಾ ಸಂಕುಲಕ್ಕೆ ಪ್ರಾಮುಖ್ಯತೆ ತಂದುಕೊಟ್ಟವನೆಂದು ಬಣ್ಣಿಸಿದರು.
ಶ್ರೀಪಾರ್ವತಿ ಮಹಿಳಾ ಮಂಡಳಿಯ ಅಧ್ಯಕ್ಷೆ ಸುಮಿತ್ರಾಶಾಸ್ತ್ರಿ ಅಧ್ಯಕ್ಷತೆವಹಿಸಿ ಮಾತನಾಡಿ ಲಿಂಗರೂಪಿಯಾದ ಶಿವನನ್ನು ವೀರಶೈವ ಸಂಸ್ಕøತಿಯಲ್ಲಿ ಸದಾ ಧಾರಣೆ ಮಾಡಲಾಗುತ್ತದೆ. ಶಿವ ಅಭಿಷೇಕ ಪ್ರಿಯ. ಜಪ, ತಪ, ಧ್ಯಾನ, ಭಜನೆ, ಸಂಕೀರ್ತನೆಗಳ ಮೂಲಕ ಶಿವನನ್ನು ಸುಲಭವಾಗಿ ಒಲಿಸಿಕೊಳ್ಳಬಹುದೆಂದರು.
ಕಾರ್ಯದರ್ಶಿ ಭವಾನಿವಿಜಯಾನಂದ ಪ್ರಾಸ್ತಾವಿಸಿ ಜಾಗರಣೆ ಮತ್ತು ಉಪವಾಸ ಶಿವರಾತ್ರಿಯ ಮಹತ್ವದ ಸಂಗತಿ. ರಾತ್ರಿ ನಿದ್ದೆಗೆಟ್ಟು ಶಿವನ್ನು ಆರಾಧಿಸುವುದು ಜಾಗರಣೆಯಾದರೆ, ಭಕ್ತಿ ಧ್ಯಾನದ ಮೂಲಕ ದೇವರಿಗೆ ಹತ್ತಿರವಾಗುವುದೇ ಉಪವಾಸ ಎಂದರು.
ಮುಖ್ಯಅತಿಥಿಗಳಾದ ಮಂಜುಳಾರೇಣುಕ ಅವರನ್ನು ಸನ್ಮಾನಿಸಲಾಯಿತು. ಉಪಾಧ್ಯಕ್ಷೆ ಶೈಲಾಬಸವರಾಜು ರೇಣುಕಗೀತೆ ಹಾಡಿದರು. ಸಹಕಾರ್ಯದರ್ಶಿ ಪಾರ್ವತಿಬಸವರಾಜ್ ಕಾರ್ಯಕ್ರಮ ನಿರೂಪಿಸಿ, ಮಹಾದೇವಿ ಸ್ವಾಗತಿಸಿದರು, ಕಮಲಾಸೋಮಶೇಖರ್ ವಂದಿಸಿ, ಚಂಪಕಾ ಅತಿಥಿ ಪರಿಚಯಿಸಿದರು. ನಾಗಮಣಿ ಮತ್ತು ಶ್ಯಾಮಲಾ ಪ್ರಾರ್ಥಿಸಿ, ಸುಶೀಲಮ್ಮ ಮತ್ತು ಸರೋಜಮ್ಮ ವೇದಘೋಷ ಮಾಡಿದರು.
ಶಿವ ಭಕ್ತಿಗೀತೆ ಸ್ಪರ್ಧೆ ಆಯೋಜಿಸಿದ್ದು 12ಜನ ಭಾಗವಹಿಸಿದ್ದರು. ಶ್ಯಾಮಲಾ ಪ್ರಥಮ, ಪುಷ್ಪಾ ಮತ್ತು ಭವಾನಿ ದ್ವಿತೀಯ, ಅನಿತಾ ತೃತೀಯ ಬಹುಮಾನ ಪಡೆದರು. ಶಿಕ್ಷಕಿ ಭಾರತಿ ತೀರ್ಪುಗಾರರಾಗಿದ್ದರು. ಪದಾಧಿಕಾರಿಗಳಾದ ಮಂಜುಳಾಮಹೇಶ್, ಸೌಭಾಗ್ಯಜಯಣ್ಣ ವೇದಿಕೆಯಲ್ಲಿದ್ದರು.
ಆಟೋಟಸ್ಪರ್ಧೆಗಳನ್ನು ಆಯೋಜಿಸಿದ್ದು ಮಹಾದೇವಿ ಬಹುಮಾನ ವಿತರಿಸಿದರು.