ಮಾಜಿ ಸಭಾಪತಿ, ಹಿರಿಯ ಕಾಂಗ್ರೇಸ್ ಮುಖಂಡರಾದ ಬಿ.ಎಲ್. ಶಂಕರ್ ಅವರ ತಾಯಿ ಶ್ರೀಮತಿ ಶಾರದಮ್ಮ ಲೋಕಪ್ಪಗೌಡ ನಮ್ಮನ್ನಗಲಿದ್ದಾರೆ. ಅವರಿಗೆ 95 ವರ್ಷ ವಯಸ್ಸಾಗಿತ್ತು.
ದಿವಂಗತ ಬೆಳಗೋಡು ಲೋಕಪ್ಪಗೌಡ ಅವರ ಧರ್ಮಪತ್ನಿಯಾಗಿದ್ದ ಶಾರದಮ್ಮ ಅವರು ಹಿರಿಯ ಕಾಫಿ ಬೆಳೆಗಾರರಾಗಿದ್ದರು. ಜನರ ಪ್ರೀತಿ ವಿಶ್ವಾಸಗಳಿಗೆ ಪಾತ್ರರಾಗಿದ್ದ ಶಾರದಮ್ಮ ತುಂಬು ಜೀವನ ನಡೆಸಿ ವಯೋಸಹಜ ಅನಾರೋಗ್ಯದಿಂದ ನಿಧನರಾಗಿದ್ದಾರೆ.
ಶಾರದಮ್ಮ ಅವರು ತಮ್ಮ ಮಕ್ಕಳಾದ ಬಿ.ಎಲ್. ಶಂಕರ್, ಬಿ.ಎಲ್. ದಿವಾಕರ್, ಬಿ.ಎಲ್. ಪ್ರಭಾಕರ್, ಬಿ.ಎಲ್. ಕೃಪಾ ವೆಂಕಟೇಶ್, ಮೊಮ್ಮಕ್ಕಳು ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ.
ಅವರ ಪಾರ್ಥೀವ ಶರೀರವನ್ನು ಬಣಕಲ್ ಸಮೀಪದ ಕಾಡಗದ್ದೆ ಎಸ್ಟೇಟ್ ನಲ್ಲಿ ಸಾರ್ವಜನಿಕ ದರ್ಶನಕ್ಕೆ ಇರಿಸಲಾಗಿದ್ದು, ಇಂದು(ಶುಕ್ರವಾರ) ಸಂಜೆ 4 ಗಂಟೆಗೆ ಅಂತಿಮ ಸಂಸ್ಕಾರ ನೆರವೇರಿಸಲಾಗುತ್ತದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
ಶಾರದಮ್ಮ ಅವರ ನಿಧನಕ್ಕೆ ಮೂಡಿಗೆರೆ ಶಾಸಕಿ ನಯನಾ ಮೋಟಮ್ಮ, ವಿಧಾನ ಪರಿಷತ್ ಉಪಸಭಾಪತಿ ಎಂ.ಕೆ. ಪ್ರಾಣೇಶ್ ಸೇರಿದಂತೆ ವಿವಿಧ ಪಕ್ಷದ ಮುಖಂಡರು, ಮೂಡಿಗೆರೆ ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಆರ್. ಬಾಲಕೃಷ್ಣ ಹಾಗೂ ಬೆಳೆಗಾರರ ಸಂಘದ ಪದಾಧಿಕಾರಿಗಳು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.