ಮೂಡಿಗೆರೆ ತಾಲೂಕಿನಲ್ಲಿ ವಿದ್ಯುತ್ ಸಮಸ್ಯೆಗೆ ಶಾಶ್ವತವಾಗಿ ಪರಿಹಾರ ಕಂಡುಕೊಳ್ಳಲು ಒತ್ತಾಯಿಸಿ ವಿವಿಧ ಸಂಘಟನೆಯಿಂದ ಮಾ.15ರಂದು ಶುಕ್ರವಾರ ಮೂಡಿಗೆರೆ ಮೆಸ್ಕಾಂ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ರೈತ ಸಂಘದ ರಾಜ್ಯ ಉಪಾಧ್ಯಕ್ಷ ಮುಖಂಡ ಮಂಜುನಾಥ್ಗೌಡ ಹೇಳಿದರು.
ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತಾಲೂಕಿನಲ್ಲಿ ಕಳೆದ 15 ವರ್ಷದಿಂದ ವಿದ್ಯುತ್ ಸಮಸ್ಯೆಯಿದೆ. ಆದರೆ ಇದೂವರೆಗೂ ಪರಿಹಾರ ದೊರಕಿಲ್ಲ. ಗುಣಮಟ್ಟದ ವಿದ್ಯುತ್ ಇಲ್ಲದೇ ಕೃಷಿ ಚಟುವಟಿಕೆಗೆ ತೊಂದರೆ ಉಂಟಾಗಿದೆ. ಮೋಟಾರು ಸುಟ್ಟು ಹೋಗುತ್ತಲೇ ಇದೆ. ಈ ಬಗ್ಗೆ ಕಳೆದ 15 ವರ್ಷದಿಂದ ಮೆಸ್ಕಾಂ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಇಲ್ಲಿಗೆ ಬರುವ ಮೆಸ್ಕಾಂ ಕಚೇರಿ ಅಧಿಕಾರಿಗಳಿಗೆ ರೈತರ ಸಂಕಷ್ಟ ಅರಿವಿಲ್ಲ. ಸ್ಥಳೀಯ ಜನಪ್ರತಿನಿಧಿಗಳು ತಲೆ ಕೆಡಿಸಿಕೊಳ್ಳುತ್ತಿಲ್ಲ. ಅಲ್ಲದೇ ಜಿಲ್ಲಾ ಉಸ್ತುವಾರಿ ಸಚಿವರೆ ವಿದ್ಯುತ್ ಮಂತ್ರಿಯಾಗಿದ್ದಾರೆ. ಆದರೆ ವಿದ್ಯುತ್ ಸಮಸ್ಯೆ ಬಗೆಹರಿಸಲು ಮುಂದಾಗುತ್ತಿಲ್ಲ. ಹಾಗಾಗಿ ರೈತ ಸಂಘ, ನೀರಾವರಿ ವಿದ್ಯುತ್ ಬಳಕೆದಾರ ವೇದಿಕೆ, ಕರವೇ ಸೇರಿದಂತೆ ವಿವಿಧ ಸಂಘಟನೆಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ನೀರಾವರಿ ವಿದ್ಯುತ್ ಬಳಕೆದಾರ ವೇದಿಕೆ ಅಧ್ಯಕ್ಷ ಭರತ್ ಮಡ್ಡಿಕೆರೆ ಮಾತನಾಡಿ, ಕಾರ್ಮಿಕರ ಸಮಸ್ಯೆ ಒಂದು ಕಡೆಯಾದರೆ, ಮತ್ತೊಂದೆಡೆ ವಿದ್ಯುತ್ ಸಮಸ್ಯೆ ಎದುರಾಗಿದೆ. ಕಾಫಿ ಸ್ಪಿಂಕ್ಲರ್ ಮಾಡುವ ಸಮಯವಿದು. ಇಂತಹ ಸಂದರ್ಭದಲ್ಲಿ ಗುಣಮಟ್ಟದ ವಿದ್ಯುತ್ ಸಿಗುತ್ತಿಲ್ಲ. ಇವರ ಬೇಜವಾಬ್ದಾರಿಯಿಂದಾಗಿ ರೈತರು ಲಕ್ಷಾಂತರ ರೂ ನಷ್ಟ ಅನುಭವಿಸುವಂತಾಗಿದೆ. ಪ್ರತಿ ವರ್ಷ ಮೆಸ್ಕಾಂ ಅಧಿಕಾರಿಗಳ ಭರವಸೆ ಮಾತು ಹೇಳಿ ವಾಪಾಸು ತೆರಳುತ್ತಿದ್ದೆವು. ಆದರೆ ಮೆಸ್ಕಾಂ ಇಲಾಖೆ ಸತ್ತು ಹೋಗಿದ್ದರಿಂದ ಯಾವುದೇ ಪ್ರಯೋಜನವಿಲ್ಲವೆಂಬುದು ಅರಿವಾಗಿದೆ. ಹಾಗಾಗಿ ಮೆಸ್ಕಾಂ ಇಲಾಖೆಗೆ ಸಂಜೀವಿನಿ ತಂದು ಜೀವ ಕೊಡುವ ಕೆಲಸ ಮಾಡಬೇಕಿದೆ. ಹಾಗಾಗಿ ವಿದ್ಯುತ್ ಸಮಸ್ಯೆಗೆ ಶಾಶ್ವತ ಪರಿಹಾರಕ್ಕಾಗಿ ನಡೆಸುವ ಪ್ರತಿಭಟನೆಗೆ ತಾಲೂಕಿನ ಎಲ್ಲಾ ಪ್ರಗತಿಪರ ಸಂಘಟನೆಗಳು ಹಾಗೂ ಸಾರ್ವಜನಿಕರು ಆಗಮಿಸಬೇಕೆಂದು ಮನವಿ ಮಾಡಿದರು.
ರೈತ ಸಂಘದ ತಾಲೂಕು ಅಧ್ಯಕ್ಷ ಪುಟ್ಟಸ್ವಾಮಿಗೌಡ, ರಾಜ್ಯ ಉಪಾಧ್ಯಕ್ಷೆ ಜಿ.ಆರ್.ವನಶ್ರೀ, ಮುಖಂಡರಾದ ಎಂ.ಎನ್.ಚಂದ್ರೇಗೌಡ, ಎಚ್.ಎಸ್.ನಾಗೇಶ್ಗೌಡ ಉಪಸ್ಥಿತರಿದ್ದರು.