ಮಾರುತಿ ಓಮ್ನಿ ಕಾರಿನಲ್ಲಿ ಬರೋಬ್ಬರಿ 51.2 ಕೆ.ಜಿ. ಗಾಂಜಾವನ್ನು ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಪೊಲೀಸರು ಪತ್ತೆಹಚ್ಚಿದ್ದು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ. ಮತ್ತೋರ್ವನ ಬಂಧನಕ್ಕೆ ಬಲೆ ಬೀಸಿದ್ದಾರೆ.
ಮೂಡಿಗೆರೆ ತಾಲ್ಲೂಕಿನ ಗೋಣಿಬೀಡು ಠಾಣಾ ವ್ಯಾಪ್ತಿಯ ಕಸ್ಕೇಬೈಲ್ ಗ್ರಾಮದ ಸಮೀಪ ಗಾಂಜಾ ಸಾಗಾಟ ಮಾಡುತ್ತಿದ್ದ ವಾಹನವನ್ನು ತಡೆದು ವಾಹನದಲ್ಲಿದ್ದ ಗಾಂಜಾವನ್ನು ವಶಪಡಿಸಿಕೊಂಡು ಓರ್ವ ಆರೋಪಿಯನ್ನು ಬಂಧಿಸಲಾಗಿದೆ.
ದಿನಾಂಕ:08/03/2024 ರಂದು ರಾತ್ರಿ ಗೋಣಿಬೀಡು ಠಾಣಾ ಸರಹದ್ದಿನ ಕಸ್ಕೆಬೈಲು ಗ್ರಾಮದ ಬಳಿ ಎಂ.ಹೆಚ್.-11-ಬಿವಿ-3426 ನೊಂದಣಿಯ ಮಾರುತಿ ಓಮಿನಿ ವಾಹನದಲ್ಲಿ ಅಕ್ರಮವಾಗಿ ಗಾಂಜಾವನ್ನು ಸಾಗಾಣಿಕೆ ಮಾಡುತ್ತಿದ್ದ ವೇಳೆ ಪೊಲೀಸರು ವಾಹನವನ್ನು ಅಡ್ಡಗಟ್ಟಿ ಕಾರಿನಲ್ಲಿದ್ದ ಕೇರಳ ರಾಜ್ಯದ ಕಾಸರಗೋಡು ಕೈಕಂಬ ನಿವಾಸಿ ಮುನೀರ್ ಬಿನ್ ಅಬ್ದುಲ್ಲಾ ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ. ಮತ್ತೋರ್ವ ಆರೋಪಿ ಶಾಹಿದ್ ತಪ್ಪಿಸಿಕೊಂಡಿರುತ್ತಾನೆ.
ಅರೋಪಿತನು ಅಕ್ರಮವಾಗಿ ಹೊಂದಿದ್ದ 51 ಕೆ.ಜಿ 200 ಗ್ರಾಂ ಗಾಂಜಾವನ್ನು ಮತ್ತು ಮದ್ಯ ಮಾರಾಟದಿಂದ ಸಂಗ್ರಹಿಸಿದ 660 ರೂ ನಗದು ಹಣವನ್ನು ಅಮಾನತ್ತುಪಡಿಸಿಕೊಂಡು ಬಂದು ಆರೋಪಿತನ ವಿರುದ್ದ ಗೋಣಿಬೀಡು ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.
ಮೂಡಿಗೆರೆ ಸರ್ಕಲ್ ಇನ್ಸ್ ಪೆಕ್ಟರ್ ಸೋಮೇಗೌಡ ಮಾರ್ಗದರ್ಶನದಲ್ಲಿ ಗೋಣಿಬೀಡು ಪಿ.ಎಸ್.ಐ. ಹರ್ಷವರ್ಧನ್ ಹೆಚ್.ಕೆ. ಮತ್ತು ಸಿಬ್ಬಂದಿಯವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.