ಮೂಡಿಗೆರೆ ಜೇಸಿಐ ಸಂಸ್ಥೆ ವತಿಯಿಂದ ತೋಟಗಾರಿಕಾ ಮಹಾವಿದ್ಯಾಲಯದಲ್ಲಿ ಇತ್ತೀಚೆಗೆ ನೂತನ ಜೆಸಿಐ ವಿದ್ಯಾರ್ಥಿ ಘಟಕವನ್ನು ಜೆಸಿಐ ಯುವ ಮಾಣಿಕ್ಯ ಎಂಬ ಹೆಸರಿನೊಂದಿಗೆ ಪದಗ್ರಹಣ ನಡೆಸಲಾಯಿತು.
ನೂತನ ಘಟಕದ ಅಧ್ಯಕ್ಷರಾಗಿ ಜೇಸಿ ಮಹಮ್ಮದ್ ಇರ್ಷಾದ್ ಅಧಿಕಾರ ಸ್ವೀಕರಿಸಿದರು. ಕಾಲೇಜಿನ 20 ವಿದ್ಯಾರ್ಥಿಗಳು ಘಟಕದ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಜೇಸಿಐ ವಲಯ ಅಧ್ಯಕ್ಷೆ ಆಶಾ ಜೈನ್ ಅವರು ಮಾತನಾಡಿ ಜೇಸಿಐ ಸಂಸ್ಥೆಯು ವಿಶ್ವದಲ್ಲಿ 150ಕ್ಕೂ ಅಧಿಕ ರಾಷ್ಟ್ರಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಯುವಜನರು ಮತ್ತು ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ ಬೆಳೆಸುವುದು, ವಿವಿಧ ತರಬೇತಿಗಳನ್ನು ನೀಡುವುದು, ಸಮಾಜಸೇವಾ ಕಾರ್ಯಗಳನ್ನು ಹಮ್ಮಿಕೊಳ್ಳುವುದು, ಶೈಕ್ಷಣಿಕ ಉನ್ನತಿಗಾಗಿ ಶ್ರಮಿಸುವುದು ಹೀಗೆ ವಿವಿಧ ರೀತಿಯಲ್ಲಿ ಸಮಾಜಮುಖಿಯಾಗಿ ತೊಡಗಿಸಿಕೊಂಡಿದೆ. ವಿಶೇಷವಾಗಿ ಜೇಸಿಐ ವಿದ್ಯಾರ್ಥಿ ಘಟಕಗಳನ್ನು ಪ್ರಾರಂಭಿಸುತ್ತಿದ್ದು ಇದರಿಂದ ವಿದ್ಯಾರ್ಥಿಗಳಲ್ಲಿ ಸಭಾ ಕಂಪನ, ಕೀಳರಿಮೆಯನ್ನು ತೊಡೆದುಹಾಕುವುದು, ನಾಯಕತ್ವ ಗುಣ ಬೆಳೆಸುವುದು, ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳುವುದು ಹೀಗೆ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದ ಕಾರ್ಯ ನಡೆಸುತ್ತಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೂಡಿಗೆರೆ ಜೆಸಿಐ ಅಧ್ಯಕ್ಷ ಸುಪ್ರೀತ್ ಕಾರ ಬೈಲ್ ವಹಿಸಿದ್ದರು.
ವಲಯ ಉಪಾಧ್ಯಕ್ಷೆ ವಿದ್ಯಾ ರಾಜು, ಕಾಲೇಜಿನ ಪ್ರಾಧ್ಯಾಪಕ ಶ್ರೀನಿವಾಸ್, ಸಹಾಯಕ ಪ್ರಾಧ್ಯಾಪಕ ಭರತ್, ನಾಗರಾಜ್, ವಲಯ ಅಭಿವೃದ್ಧಿ ಮತ್ತು ಬೆಳವಣಿಗೆ ವಿಭಾಗದ ವಿಶೇಷ ಅಧಿಕಾರಿ ರಾಜು, ಜೆಸಿ ಕಾರ್ಯದರ್ಶಿ ದೀಕ್ಷಿತ್ ಕಣಚೂರು, ಲೇಡಿ ಜೆಸಿ ಅಧ್ಯಕ್ಷೆ ದಿವ್ಯ ಸುಪ್ರೀತ್, ಕಾರ್ಯದರ್ಶಿ ಶೃತಿ ದೀಕ್ಷಿತ್ ಸೇರಿದಂತೆ ಜೇಸಿ ಪೂರ್ವಾಧ್ಯಕ್ಷರು ಹಾಗೂ ಸದಸ್ಯರು ಉಪಸ್ಥಿತರಿದ್ದರು.