60ವರ್ಷ ಪೂರ್ಣಗೊಳಿಸಿರುವ ನಾಡಿನ ಹೆಸರಾಂತ ವಾಗ್ಮಿ-ಸಾಹಿತಿ ಚಟ್ನಳ್ಳಿಮಹೇಶ್ ಅವರ ವಜ್ರಮಹೋತ್ಸವ ಸಮಾರಂಭವನ್ನು ಆಯೋಜಿಸಿದ್ದು ಮಾರ್ಚ್ 7ರಂದು ಅವರ ತೋಟದಮನೆಯಂಗಳದಲ್ಲೆ ಸನ್ಮಾನಿಸಿ ಅಭಿನಂದನಾ ಗ್ರಂಥ ಸಮರ್ಪಿಸಲಾಗುವುದು.
ಸುತ್ತೂರು ಶ್ರೀ ಶಿವರಾತ್ರಿ ದೇಶೀಕೇಂದ್ರಸ್ವಾಮೀಜಿ, ಸಾಣೇಹಳ್ಳಿಯ ಶ್ರೀಪಂಡಿತಾರಾಧ್ಯ ಶಿವಾಚಾರ್ಯರು ಮತ್ತು ಆನಂದಪುರಂನ ಶ್ರೀಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳ ದಿವ್ಯಸಾನಿಧ್ಯದಲ್ಲಿ ಆಯೋಜಿಸಿರುವ ಅಭಿನಂದನಾ ಸಮಾರಂಭದ ಅಧ್ಯಕ್ಷತೆಯನ್ನು ಶಾಸಕ ಎಚ್.ಡಿ.ತಮ್ಮಯ್ಯ ವಹಿಸುವರು.
ಗುರುವಾರ ಬೆಳಗ್ಗೆ 10.30ರಿಂದ ರಾತ್ರಿ 8.30ರವರೆಗೆ ಸಖರಾಯಪಟ್ಟಣ ಹೋಬಳಿ ಹಳ್ಳಿಕೆರೆ ಕಾವಲಿನ ಚಟ್ನಳ್ಳಿಮಹೇಶ್ ತೋಟದಮನೆಯ ನಿಸರ್ಗದ ಅಂಗಳದಲ್ಲಿ ಅಭಿನಂದನಾ ಸಮಾರಂಭ ವೈಶಿಷ್ಟ್ಯಪೂರ್ಣವಾಗಿ ಆಯೋಜಿಸಲಾಗಿದೆ.
ಚಟ್ನಳ್ಳಿಮಹೇಶ್ ಅವರ ಬದುಕನ್ನು ಪರಿಚಯಿಸುವ ಅಭಿನಂದನಾ ಗ್ರಂಥ ‘ಹಳ್ಳಿವಜ್ರ’ವನ್ನು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಿಡುಗಡೆ ಮಾಡುವರು. ಅಖಿಲ ಭಾರತ ವೀರಶೈವ ಮಹಾಸಭಾದ ಉಪಾಧ್ಯಕ್ಷ ದಾವಣಗೆರೆ ಅಣಬೇರುರಾಜಣ್ಣ ಪ್ರಾಸ್ತಾವಿಕ ಭಾಷಣ ಮಾಡುವರು. ಜಿಲ್ಲೆಯ ಶಾಸಕರುಗಳೊಂದಿಗೆ ವಿಧಾನಪರಿಷತ್ತು ಸದಸ್ಯ ರುದ್ರೇಗೌಡ, ಬೇಲೂರು ಶಾಸಕ ಹುಲ್ಲಳ್ಳಿಸುರೇಶ್, ಸಂಗಮೇಶ್, ಶಿವಲಿಂಗೇಗೌಡ ಮುಖ್ಯಅತಿಥಿಗಳಾಗಿ ಪಾಲ್ಗೊಳ್ಳುವರು.
ಮಧ್ಯಾಹ್ನ 3ಗಂಟೆಗೆ ಧರ್ಮ ಸಮನ್ವಯ ಸಭೆಯು ಕೋಡಿಮಠಾಧ್ಯಕ್ಷ ಡಾ.ಶಿವಾನಂದ ಶಿವಯೋಗಿರಾಜೇಂದ್ರ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದಾರೆ. ನಾಡಿನ ಖ್ಯಾತಮಠಾಧೀಶರಾದ ಶ್ರೀಬಸವಮೂರ್ತಿ ಮಾದರಚನ್ನಯ್ಯ ಸ್ವಾಮೀಜಿ, ಶ್ರೀಬಸವಮರುಳಸಿದ್ದ ಸ್ವಾಮೀಜಿ, ಶ್ರೀಈಶ್ವರಾನಂದಪುರಿ ಸ್ವಾಮೀಜಿ, ಶ್ರೀಪುರುಷೋತ್ತಮಾನಂದ ಸ್ವಾಮೀಜಿ, ಶ್ರೀಬಸವಶಾಂತವೀರ ಸ್ವಾಮೀಜಿ, ಶ್ರೀಅಭಿನವಮಲ್ಲಿಕಾರ್ಜುನ ಸ್ವಾಮೀಜಿ, ಶ್ರೀನಟರಾಜ ಸ್ವಾಮೀಜಿ ಧರ್ಮೋಪದೇಶ ನೀಡುವರು ಎಂದು ಅಭಿನಂದನಾ ಸಮಿತಿ ಪ್ರಧಾನ ಕಾರ್ಯದರ್ಶಿ ಪ್ರಭುಲಿಂಗಶಾಸ್ತ್ರಿ ತಿಳಿಸಿದ್ದಾರೆ.
ಸಂಜೆ 6.30ರಿಂದ ಅಂತರರಾಷ್ಟ್ರೀಯ ಖ್ಯಾತಿಯ ವಾಯಲಿನ್ ವಾದಕ ಮೈಸೂರು ಸುಮಂತ ಮಂಜುನಾಥ್ ತಂಡದಿಂದ ಸಂಗೀತ ರಸಧಾರೆ ಆಯೋಜಿಸಿದ್ದು ಮಹೇಶ್ ಅಭಿಮಾನಿಗಳು, ಸ್ನೇಹಿತರು ಪಾಲ್ಗೊಳ್ಳಬೇಕೆಂದು ಅಭಿನಂದನಾ ಸಮಿತಿ ವಿನಂತಿಸಿದೆ.