ಬಾಲ್ ಬ್ಯಾಡ್ಮಿಂಟನ್ ಕ್ರೀಡೆಯಲ್ಲಿ ರಾಷ್ಟ್ರಮಟ್ಟದ ಪಂದ್ಯಾವಳಿಗೆ ಯುವ ಪ್ರತಿಭೆ ಕೆ.ಜಿ. ನಂದಿನಿ ಆಯ್ಕೆಯಾಗಿದ್ದಾರೆ.
ಬಿಹಾರ ರಾಜ್ಯದ ಪಾಟ್ನಾದಲ್ಲಿ ನಡೆಯುವ ರಾಷ್ಟ್ರೀಯ ಬಾಲ್ ಬ್ಯಾಡ್ಮಿಂಟನ್ ಟೂರ್ನಮೆಂಟ್ ನಲ್ಲಿ ಕರ್ನಾಟಕ ತಂಡದ ಸದಸ್ಯೆಯಾಗಿ ರಾಜ್ಯವನ್ನು ಪ್ರತಿನಿಧಿಸುತ್ತಿದ್ದಾರೆ.
ನಂದಿನಿ ಅವರು ಚಿಕ್ಕಮಗಳೂರು ತಾಲ್ಲೂಕಿನ ಕಳಸಾಪುರ ಗ್ರಾಮದ ಕೆ.ಆರ್. ಗಣೇಶ್ ಶ್ರೀಮತಿ ಸುಮಾ ಅವರ ಪುತ್ರಿ. ನಂದಿನಿ ಪ್ರಸ್ತುತ ಮಲೆನಾಡು ವಿದ್ಯಾಸಂಸ್ಥೆ, ಕಳಸಾಪುರ ಇಲ್ಲಿ ಪ್ರಥಮ ಪಿ.ಯು.ಸಿ. ಪೂರ್ಣಗೊಳಿಸಿದ್ದು, ಬಾಲ್ ಬ್ಯಾಡ್ಮಿಂಟನ್ ಕ್ರೀಡೆಯಲ್ಲಿ ಸಾಧನೆ ಮಾಡುತ್ತಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯಿಂದ ರಾಷ್ಟ್ರಮಟ್ಟ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುವ ನಂದಿನಿ ಅವರಿಗೆ ಚಿಕ್ಕಮಗಳೂರು ಜಿಲ್ಲಾ ಬಾಲ್ ಬ್ಯಾಡ್ಮಿಂಟನ್ ಅಸೋಷಿಯೇಷನ್ ಅಧ್ಯಕ್ಷ ಡಿ.ಕೆ. ಲಕ್ಷ್ಮಣಗೌಡ, ಕಾರ್ಯದರ್ಶಿ ಹೆಚ್.ಕೆ. ಶಿವಕುಮಾರ್ ಮತ್ತು ಫ್ರೆಂಡ್ಸ್ ಯೂನಿಯನ್ ಬಾಲ್ ಬ್ಯಾಡ್ಮಿಂಟನ್ ಕ್ಲಬ್ ಮೂಡಿಗೆರೆ ಇದರ ಅಧ್ಯಕ್ಷ ಕೆ.ಜೆ. ಪ್ರಸನ್ನ ಕುಂದೂರು, ಕಾರ್ಯದರ್ಶಿ ಜೆ.ಬಿ. ಶಂಕರ್ ಜಕ್ಕಳಿ ಹಾಗೂ ಪದಾಧಿಕಾರಿಗಳು ಶುಭ ಹಾರೈಸಿದ್ದಾರೆ.
ನಂದಿನಿ ಅವರಿಗೆ ತರಬೇತುದಾರರಾಗಿ ಸುಂದರೇಶ್ ಕಣತಿ ಇವರು ಉತ್ತಮ ತರಬೇತಿ ನೀಡಿ ರಾಷ್ಟ್ರಮಟ್ಟದವರೆಗೆ ಸಾಧನೆ ಮಾಡಲು ಪ್ರೋತ್ಸಾಹ ನೀಡಿದ್ದಾರೆ.
ಗ್ರಾಮೀಣ ಪ್ರದೇಶದ ರೈತ ಕುಟುಂಬದ ಪ್ರತಿಭೆ ಈಗ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದು, ಭವಿಷ್ಯದಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡಲಿ ಎಂದು ಶುಭ ಹಾರೈಸೋಣ