ಕೊಡಗು ಜಿಲ್ಲೆಯಲ್ಲಿ ಕಾಡಾನೆ ದಾಳಿಗೆ ವ್ಯಕ್ತಿಯೋರ್ವರು ಬಲಿಯಾಗಿದ್ದಾರೆ. ಕಾಡಾನೆ ದಾಳಿಯ ಸರಣಿ ಸಾವುಗಳು ಮುಂದುವರಿದಿದ್ದು, ಮಡಿಕೇರಿ ತಾಲೂಕಿನ ಗಾಳಿಬೀಡು ಗ್ರಾಮದ ನಿಶಾನಿ ಬೆಟ್ಟದಲ್ಲಿ ಆನೆ ದಾಳಿಗೆ ವ್ಯಕ್ತಿಯೊಬ್ಬರು ಬಲಿಯಾಗಿರುವ ಘಟನೆ ಭಾನುವಾರ ವರದಿಯಾಗಿದೆ.
ಅಪ್ಪಚ್ಚು (60) ಆನೆ ದಾಳಿಗೆ ಬಲಿಯಾಗಿರುವ ವ್ಯಕ್ತಿ. ಬೆಟ್ಟಪ್ರದೇಶದಲ್ಲಿ ಕಾಡಾನೆ ದಾಳಿಗೆ ಅಪ್ಪಚ್ಚು ಅವರು ಬಲಿಯಾಗಿದ್ದರು. ಹಾಗಾಗಿ ವಿಷಯ ಯಾರಿಗೂ ತಿಳಿದಿರಲಿಲ್ಲ. ಆದರೆ ಭಾನುವಾರ ಚಾರಣಿಗರು ಮೃತದೇಹವನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಅಪ್ಪಚ್ಚು ಅವರು ಶನಿವಾರ ಕೆಲಸಕ್ಕೆ ಹೋದವರು ಮರಳಿ ಬಂದಿರಲಿಲ್ಲ ಎನ್ನಲಾಗಿದೆ. ಮುಂಜಾನೆ ನಿಶಾನಿ ಬೆಟ್ಟಕ್ಕೆ ಪ್ರವಾಸಿಗರು ಚಾರಣಕ್ಕೆ ತೆರಳುವ ವೇಳೆ ಪ್ರಕರಣ ಬೆಳಕಿಗೆ ಬಂದಿದೆ.ಶವ ಪತ್ತೆಯಾದ ಸಮೀಪದ ಪ್ರದೇಶದಲ್ಲಿ ದಾಳಿ ನಡೆಸಿರುವ ಆನೆ ಮರಗಳನ್ನು ಧರೆಗುರುಳಿಸಿರುವುದು ಕಂಡು ಬಂದಿದೆ. ಸ್ಥಳದಲ್ಲಿ ಆನೆ ಹಾಗೂ ಮರಿಗಳ ಹೆಜ್ಜೆಗುರುತುಗಳೂ ಪತ್ತೆಯಾಗಿವೆ.
ಈ ಕುರಿತು ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.