ಮೂಡಿಗೆರೆ ತಾಲ್ಲೂಕಿನ ಬಣಕಲ್ ಪಟ್ಟಣದ ಸಂತೆಗೆ ಸಾಗುವ ರಸ್ತೆಯು ಅನೇಕ ವರ್ಷಗಳಿಂದ ದುರಸ್ತಿ ಕಾಣದೇ ಇರುವುದರಿಂದ ಸಾರ್ವಜನಿಕರು ಆಕ್ರೋಶಭರಿತರಾಗಿ ಹದಗೆಟ್ಟ ರಸ್ತೆಗೆ ಟೇಪ್ ಕತ್ತರಿಸಿ, ಹೂಮಳೆ ಸುರಿಸಿ ಉದ್ಘಾಟನೆ ಮಾಡುವ ಮೂಲಕ ವಿಭಿನ್ನ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಲ್ಲಿ ಮುಖಂಡರಾದ ಬಿ.ಎಸ್.ವಿಕ್ರಂ ಮಾತನಾಡಿ ‘ಬಣಕಲ್ ನಿಂದ ಸಂತೆಗೆ ಸಾಗುವ ರಸ್ತೆಯು ದುರಸ್ತಿ ಕಾಣದೇ ಹಲವು ವರ್ಷ ಕಳೆದಿವೆ. ಈ ರಸ್ತೆ ಗುಡ್ಡಹಟ್ಟಿ, ಕುವೆಂಪುನಗರ, ಸುಭಾಷನಗರ ಮತ್ತಿತರ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯಾಗಿದ್ದು ಗ್ರಾ.ಪಂ.ಅಧಿಕಾರಿಗಳು, ಪ್ರತಿನಿಧಿಗಳು ಕಣ್ಮುಚ್ಚಿ ಕುಳಿತುಕೊಂಡಿದ್ದಾರೆ. ಅಧಿಕಾರದಲ್ಲಿರುವ ಕಾಂಗ್ರೆಸ್ ನಾಯಕರು ಕೂಡ ರಸ್ತೆ ಕಾಮಗಾರಿ ಬಗ್ಗೆ ನಿರ್ಲಕ್ಷ್ಯ ತೋರಿದ್ದಾರೆ ಎಂದು ಆರೋಪಿಸಿದರು. ಪ್ರಜಾಪ್ರತಿನಿಧಿಗಳು ಕೂಡಲೇ ಎಚ್ಚೆತ್ತು ರಸ್ತೆ ದುರಸ್ತಿ ಬಗ್ಗೆ ಮುಂದಾಗಬೇಕು ಎಂದು ಒತ್ತಾಯಿಸಿದರು.
ಜಗದೀಶ್ ಟೈಲರ್ ಮಾತನಾಡಿ ‘ ಕಳೆದ ಬಾರಿ ಈ ರಸ್ತೆ ಕಾಮಗಾರಿಗೆ ಶಾಸಕ ಎಂ.ಪಿ.ಕುಮಾರಸ್ವಾಮಿ ಅವರು ಗುದ್ದಲಿ ಪೂಜೆ ನೆರವೇರಿಸಿದ್ದರು. ಆದರೆ ಸಂತೆ ರಸ್ತೆ ಬರೀ ಗುದ್ದಲಿ ಪೂಜೆಗೆ ಸೀಮಿತವಾಗಿದೆ. ಸಂತೆ ರಸ್ತೆ ಬಿಟ್ಟು ಸುಭಾಷನಗರದ ಬಳಿ ರಸ್ತೆ ಕಾಮಗಾರಿ ನಡೆಸಿದ್ದಾರೆ. ಸಂತೆ ರಸ್ತೆ ದುರಸ್ತಿಗೆ ನಿರ್ಲಕ್ಷ್ಯ ತೋರಿರುವುದರಿಂದ ಜನರು ಪರದಾಡುತ್ತಿದ್ದಾರೆ’ ಎಂದರು.
ಯೋಗೇಶ್ ಶೆಟ್ಟಿ ಮಾತನಾಡಿ ‘ಸಂತೆ ರಸ್ತೆ ಡಾಮಾರು ಕಾಣದೇ ಇಪ್ಪತ್ತು ವರ್ಷ ಕಳೆದಿದೆ.ಜನರು ದೂಳುಮಯ ರಸ್ತೆಯಲ್ಲಿ ಸಂತೆಗೆ ಹೋಗಬೇಕಿದೆ.ಸಂಬಂಧಿಸಿದ ಅಧಿಕಾರಿಗಳು ಸಂತೆ ರಸ್ತೆ ಕಾಮಗಾರಿ ಬಗ್ಗೆ ಗಮನ ಹರಿಸಬೇಕು’ ಎಂದು ಆಗ್ರಹಿಸಿದರು.
ಬಣಕಲ್ ನ ಸುಭಾಷನಗರ ರಸ್ತೆ,ಸಂತೆ ರಸ್ತೆ,ಸೊಸೈಟಿ ರಸ್ತೆ,ವಿದ್ಯಾಭಾರತಿ ಶಾಲೆ ರಸ್ತೆ ಹಾಗೂ ನಾಡಾ ಕಚೇರಿ ರಸ್ತೆ ದುರಸ್ತಿಗೆ ಶಾಸಕರಿಗೆ ಮನವಿ ಸಲ್ಲಿಸಿದ್ದೇವೆ. ಅವರು ಇದರ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದು, ಮಂಜೂರಾತಿಗೆ ಕಾಯುತ್ತಿದ್ದೇವೆ. ಮಂಜೂರಾದ ಕೂಡಲೇ ಹದಗೆಟ್ಟ ರಸ್ತೆಗಳ ಕಾಮಗಾರಿ ನಡೆಸಲಾಗುವುದು ಎಂದು ಬಣಕಲ್ ಗ್ರಾ.ಪಂ.ಅಧ್ಯಕ್ಷೆ ಅತಿಕಾಭಾನು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಅರುಣ್ ಪೂಜಾರಿ, ರಂಗನಾಥ್, ಸಿದ್ದಿಕ್, ಸಂದೇಶ್, ಅರುಣ್ ರೊಡ್ರಿಗಸ್, ಪ್ರದೀಪ್, ಅಭಿ, ಅನಿಲ್ ದೊಡ್ಡನಂದಿ, ಗೋಪಾಲ್ ಟೈಲರ್, ರಾಜೇಶ್ ಮತ್ತಿಕಟ್ಟೆ ಮತ್ತಿತರರು ಇದ್ದರು.
ಹದಗೆಟ್ಟ ರಸ್ತೆದುರಸ್ಥಿಗೆ ಆಗ್ರಹಿಸಿ ಅಣಕು ಉದ್ಘಾಟನೆ ನೆರವೇರಿಸಿದ ನಂತರ ಸಾರ್ವಜನಿಕರಿಗೆ ಪಾನಕ ವಿತರಿಸಿ ಗಮನ ಸೆಳೆಯಲಾಯಿತು.