ಮೂಡಿಗೆರೆ ತಾಲೂಕಿನ ದಾರದಹಳ್ಳಿ ಗ್ರಾ.ಪಂ. ಅಧ್ಯಕ್ಷರು ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಂಡು 2013ರಲ್ಲಿ ಅರ್ಜಿ ಸಲ್ಲಿಸಿದ್ದ ನಿವೇಶನ ರಹಿತರ ಪಟ್ಟಯನ್ನು ಮೂಲೆಗಿಟ್ಟು ತಮಗೆ ಬೇಕಾದವರಿಗೆ ನಿವೇಶನ ಮಂಜೂರು ಮಾಡಿದ್ದಾರೆಂದು ಕೃಷ್ಣಾಪುರದ ನಿವೇಶನ ರಹಿತರು ಗುರುವಾರ ತಾ.ಪಂ. ಎದುರು ಪ್ರತಿಭಟನೆ ನಡೆಸಿ ತಾ.ಪಂ. ಇಒ ದಯಾವತಿ ಅವರಿಗೆ ಮನವಿ ಸಲ್ಲಿಸಿದರು.
ವಿಕಲಚೇತನ ಮಹಮ್ಮದ್ ಶರೀಫ್ ಮಾತನಾಡಿ, ನಾವು ಸುಮಾರು 20 ವರ್ಷದಿಂದ ಕೂಲಿ ಕೆಲಸ ಮಾಡಿಕೊಂಡು ಬಾಡಿಗೆ ಮನೆಯಲ್ಲಿ ವಾಸವಿದ್ದೇವೆ. 2013ರಲ್ಲಿ ಕಿತ್ತಲೆಗಂಡಿ ಗ್ರಾಮದಲ್ಲಿ ನಿವೇಶನ ನೀಡುವುದಾಗಿ 48 ನಿವೇಶನ ರಹಿತರಿಂದ ಅರ್ಜಿ ಪಡೆಯಲಾಗಿತ್ತು. ಆ ಪಟ್ಟಿಯನ್ನು ಮೂಲೆಗಿಟ್ಟು, ನಮಗೆ ಮಾಹಿತಿ ಕೂಡ ನೀಡದೇ ಇತ್ತೀಚೆಗೆ ಪಂಚಾಯಿತಿಯಲ್ಲಿ ಅಧ್ಯಕ್ಷರು ಗುಪ್ತ ಸಭೆ ನಡೆಸಿ, ಹೊಸ ಪಟ್ಟಿ ತಯಾರಿಸಿ ಮೆಣಸಮಕ್ಕಿ ಗ್ರಾಮದಲ್ಲಿ ತಮಗೆ ಬೇಕಾದ ಓರ್ವ ವಿಕಲಚೇತನ ಸೇರಿದಂತೆ 8 ಮಂದಿಗೆ ನಿವೇಶನ ಮಂಜೂರು ಮಾಡಿದ್ದಾರೆ. ಅದರಲ್ಲಿ 4 ಮಂದಿ ಅವರ ಕುಟುಂಬದವರೆ ಇದ್ದಾರೆ. ಅಲ್ಲದೇ ಬಹುತೇಕ ಮಂದಿಗೆ ಜಾಗ ಉಳ್ಳವರಾಗಿದ್ದಾರೆಂದು ದೂರಿದರು.
ಈ ಬಗ್ಗೆ ಪಂಚಾಯಿತಿ ಅಧ್ಯಕ್ಷರನ್ನು ಪ್ರಶ್ನಿಸಿದಾಗ ಅವರಿಂದ ಸಮಂಜಸ ಉತ್ತರ ಕೊಡದೇ ನಮಗೆ ಬೇಸರವನ್ನುಂಟು ಮಾಡಿದ್ದಾರೆ. ಅಲ್ಲದೇ ಈಗ ಮಂಜೂರು ಮಾಡಿರುವ ನಿವೇಶನದಲ್ಲಿ 8 ಫಲಾನುಭಗಳ ಪೈಕಿ ಓರ್ವ ವಿಕಲಚೇತನರಿಗೆ ನೀಡುವ ಅವಕಾಶವಿದ್ದು, ಅದನ್ನು ಉಳ್ಳವರಿಗೆ ನೀಡಿದ್ದಾರೆ. ಹಾಗಾಗಿ ಈ ಬಗ್ಗೆ ಪರಿಶೀಲನೆ ನಡೆಸಿ ಹಿಂದೆ ನೀಡಿದ್ದ ಅರ್ಜಿಯಲ್ಲಿರುವ ಫಲಾನುಭವಿಗಳಿಗೆ ನಿವೇಶನ ನೀಡಬೇಕೆಂದು ಒತ್ತಾಯಿಸಿದರು.
ಹರೀಶ್, ಅಬೀಬ್ ಶರೀಫ್, ರಾಮರಾವ್, ಅಲ್ತಾಫ್, ಪ್ರಕಾಶ್, ಮನ್ಸೂರ್ ಅಲಿ, ಜೋಸೆಫ್, ಕೆ.ಎಂ.ಮುಸ್ತಾಕ್, ಸಾಯಿರಾ, ಕುಸುಮಾ, ಜ್ಯೋತಿ, ಕಮಲಾಕ್ಷಿ, ಜುಬೇಧ, ಶರೀಫಾ, ತಸ್ಲೀಮಾ, ಮಂಜುಳ, ಸುಮಯ್ಯ, ಜಮೀಲಾ ಮತ್ತಿತರರಿದ್ದರು.