ಶಿಕ್ಷಣ ಕೂಡ ಸಾಮಾಜಿಕ ನ್ಯಾಯದ ಹಕ್ಕಾಗಿದೆ. ಪ್ರತಿಯೊಬ್ಬರೂ ಶಿಕ್ಷಣ ಹಾಗೂ ಕಾನೂನಿನ ಅರಿವು ಪಡೆದಾಗ ಬದುಕಿನಲ್ಲಿ ಎಲ್ಲಾ ರೀತಿಯ ಸಾಮಾಜಿಕ ನ್ಯಾಯ ಮತ್ತು ಹಕ್ಕು ಪಡೆಯಲು ಸಾಧ್ಯವಿದೆ ಎಂದು ಮೂಡಿಗೆರೆ ಜೆಎಂಎಫ್ಸಿ ಅಪರ ಸಿವಿಲ್ ನ್ಯಾಯಾಧೀಶ ಎ.ವಿಶ್ವನಾಥ್ ಹೇಳಿದರು.
ಅವರು ಮಂಗಳವಾರ ಮೂಡಿಗೆರೆ ತೋಟಗಾರಿಕಾ ಮಹಾ ವಿದ್ಯಾಲಯದ ಸಭಾಂಗಣದಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ಅಭಿಯೋಜನೆ ಇಲಾಖೆ, ಜೇಸಿ ಸಂಸ್ಥೆ ಹಾಗೂ ತೋಟಗಾರಿಕೆ ಮಹಾ ವಿದ್ಯಾಲಯ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ವಿಶ್ವ ಸಾಮಾಜಿಕ ನ್ಯಾಯ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಈ ಸಮಾಜದಲ್ಲಿ ಪ್ರತಿಯೊಬ್ಬರೂ ಸಮಾನತೆ ಹಾಗೂ ಗೌರವದಿಂದ ಬದುಕಬೇಕು. ಈ ನಿಟ್ಟಿನಲ್ಲಿ ವಿಶ್ವ ಸಾಮಾಜಿಕ ನ್ಯಾಯ ದಿನಾಚರಣೆ ಆಚರಿಸುತ್ತಿದ್ದು, ಇದರ ಮಹತ್ವ ಪ್ರತಿಯೊಬ್ಬರೂ ಅರಿತುಕೊಳ್ಳಬೇಕಿದೆ ಎಂದು ಹೇಳಿದರು.
ಜೇಸಿ ಅಧ್ಯಕ್ಷ ಸುಪ್ರಿತ್ ಕಾರ್ಬೈಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಾಮಾಜಿಕ ನ್ಯಾಯವು ವ್ಯಕ್ತಿ ಮತ್ತು ಸಮಾಜದ ನಡುವಿನ ನ್ಯಾಯಯುತ ಬಂಧಗಳನ್ನು ವ್ಯಾಖ್ಯಾನಿಸುವ ಪರಿಕಲ್ಪನೆಯಾಗಿದೆ. ಬಡತನ, ಅನಕ್ಷರತೆ, ಲಿಂಗ, ಧಾರ್ಮಿಕ ಮತ್ತು ದೈಹಿಕ ತಾರತಮ್ಯದಂತಹ ತಡೆಗಳನ್ನು ತೆಗೆದುಹಾಕುವುದೇ ಸಮಾಜಿಕ ನ್ಯಾಯದ ಉದ್ದೇಶವಾಗಿದೆ. ಹಾಗಾಗಿ ಅಸಮಾನತೆ ಎತ್ತಿ ತೋರಿಸಲು ಹಾಗೂ ಸಾಮಾಜಿಕ ಅಭಿವೃದ್ಧಿಯನ್ನು ಉತ್ತೇಜಿಸಲು ಮಾನವ ಘನತೆಯನ್ನು ಉಳಿಸಿಕೊಳ್ಳಲು ಸಾಮಾಜಿಕ ನ್ಯಾಯ ಅತ್ಯಗತ್ಯವಾಗಿದೆ ಎಂದು ಹೇಳಿದರು.
ವಕೀಲರ ಸಂಘದ ಅಧ್ಯಕ್ಷ ಡಿ.ಸಿದ್ದಯ್ಯ, ಉಪಾಧ್ಯಕ್ಷ ಬಿ.ಟಿ.ನಟರಾಜ್, ಕಾರ್ಯದರ್ಶಿ ಎಚ್.ಜಿ.ಆದರ್ಶ್, ಹಿರಿಯ ವಕೀಲ ಎಂ.ಎಸ್.ಗೋಪಾಲಗೌಡ, ಸಹಾಯಕ ಸರಕಾರಿ ಅಭಿಯೋಜಕಿ ಆರ್.ರೇಣುಕಾ, ಜೇಸಿ ಕಾರ್ಯದರ್ಶಿ ದೀಕ್ಷಿತ್ ಕಣಚೂರು, ಪ್ರಾಧ್ಯಾಪಕ ಶಿವಕುಮಾರ್ ಉಪಸ್ಥಿತರಿದ್ದರು.