ಕಣ್ಣು ಮಾನವನ ದೇಹಕ್ಕೆ ಅತ್ಯಂತ ಪ್ರಮುಖವಾದ ಅಂಗ. ಅವುಗಳ ಸಂರಕ್ಷಣೆ ಮಾಡಿಕೊಳ್ಳುವ ಜತೆಗೆ ಕಣ್ಣುಗಳ ದಾನ ಮಾಡುವಂತಹ ಶ್ರೇಷ್ಟ ಕಾರ್ಯಕ್ಕೆ ಎಲ್ಲರೂ ಮುಂದಾಗಬೇಕೆಂದು ನೇತ್ರಾಧಿಕಾರಿ ಬಿ.ಎಲ್.ರಂಗನಾಥ್ಗೌಡ ಹೇಳಿದರು.
ಅವರು ಭಾನುವಾರ ಪಟ್ಟಣದ ಜೇಸಿ ಭವನದಲ್ಲಿ ಜೇಸಿ ಸಂಸ್ಥೆ ವತಿಯಿಂದ ಸಾರ್ವಜನಿಕರಿಗೆ ಉಚಿತ ನೇತ್ರ ತಪಾಸಣೆ, ನೇತ್ರ ಪೊರೆ ಶಸ್ತ್ರ ಚಿಕಿತ್ಸೆ ಮತ್ತು ಮಸೂರ ಅಳವಡಿಕೆ ಶಿಬಿರ ಉದ್ಘಾಟಿಸಿ ಮಾತನಾಡಿದರು. ದೇಶದಲ್ಲಿ ಸುಮಾರು 45 ಲಕ್ಷಕ್ಕೂ ಹೆಚ್ಚು ಅಂದತ್ವ ಹೊಂದಿರುವವರು ಇದ್ದಾರೆ. ಸಾವಿನ ನಂತರ ಕಣ್ಣುಗಳು ಮಣ್ಣುಪಾಲಾಗುವ ಬದಲು, ಅವುಗಳನ್ನು ದಾನ ಮಾಡುವದರಿಂದ ಅಂದತ್ವದಿಂದ ಬಳಲುತ್ತಿರುವವರಿಗೆ ಬೆಳಕು ನೀಡಿದಂತಾಗುತ್ತದೆ ಎಂದು ಹೇಳಿದರು.
ಉಡುಪಿಯ ಪ್ರಸಾದ್ ನೇತ್ರಾಲಯದ ಸಂಪರ್ಕ ಅಧಿಕಾರಿ ಮೋಹನ್ ದಾಸ್ ಮಾತನಾಡಿ, ತಂತ್ರಜ್ಞಾನ ಮುಂದುವರೆದಂತೆ ಮೊಬೈಲ್, ಕಂಪ್ಯೂಟರ್ ಬಳಕೆಯಿಂದ ಕಣ್ಣುಗಳ ಆರೋಗ್ಯಕ್ಕೆ ತೊಡಕುಂಟಾಗುತ್ತಿದೆ. ಹಾಗಾಗಿ ಇಂತಹ ಶಿಬಿರಗಳ ಸದುಪಯೋಗಪಡಿಸಿಕೊಳ್ಳುವ ಜತೆಗೆ ಕಣ್ಣಿನ ವೈದ್ಯರಿಂದ ಹಾಗಾಗ ತಪಾಸಣೆ ಮಾಡಿಸಿಕೊಂಡು ಕಣ್ಣುಗಳನ್ನು ರಕ್ಷಿಸಿಕೊಳ್ಳಬೇಕೆಂದು ಸಲಹೆ ನಿಡಿದರು.
ಶಿಬಿರದಲ್ಲಿ ನೂರಾರು ಮಂದಿ ಪಾಲ್ಗೊಂಡು ಕಣ್ಣಿನ ತಪಾಸಣೆ ಮಾಡಿಸಿಕೊಂಡರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೇಸಿ ಅಧ್ಯಕ್ಷ ಸುಪ್ರೀತ್ ಕಾರ್ಬೈಲ್ ವಹಿಸಿದ್ದರು.
ಕಾರ್ಯದರ್ಶಿ ದೀಕ್ಷಿತ್ ಕಣಚೂರು, ಲೇಡಿ ಜೇಸಿ ಅಧ್ಯಕ್ಷೆ ದಿವ್ಯಾ ಸುಪ್ರೀತ್, ಕಾರ್ಯದರ್ಶಿ ಶೃತಿ ದೀಕ್ಷಿತ್ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.