ಕಡೂರು ಸಮೀಪ ಕತ್ತು ಸೀಳಿ ಯುವಕನ ಬರ್ಬರ ಹತ್ಯೆ ಮಾಡಿದ ನಾಲ್ವರು ಆರೋಪಿಗಳನ್ನು ಘಟನೆ ನಡೆದು 24 ಗಂಟೆಯೊಳಗೆ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಮಂಡ್ಯ ನಾಗಮಂಗಲದ ಮನೋಜ್, ಕೌಶಿಕ್, ಬೆಂಗಳೂರು ಆರ್.ಆರ್ . ನಗರದ ಕೃಷ್ಣ ಮತ್ತು ಕೆಂಗೇರಿಯ ರಾಜಬಾಬು ಬಂಧಿತ ಆರೋಪಿಗಳು.
ಘಟನೆ ಹಿನ್ನೆಲೆಯಲ್ಲಿ ತನಿಖೆಗೆ ತರೀಕೆರೆ ಡಿವೈಎಸ್ಪಿ ನೇತೃತ್ವದಲ್ಲಿ ನಾಲ್ವರನ್ನು ಒಳಗೊಂಡ ತಂಡವನ್ನು ರಚಿಸಿದ್ದು, 24 ಗಂಟೆ ಒಳಗೆ ಆರೋಪಿಗಳನ್ನು ಬಂಧಿಸಿದ್ದು ತನಿಖಾ ತಂಡಕ್ಕೆ ಜಿಲ್ಲಾ ರಕ್ಷಣಾಧಿಕಾರಿಗಳು ಬಹುಮಾನ ಘೋಷಿಸಿದ್ದಾರೆ.
ಘಟನೆಯ ಹಿನ್ನಲೆ : ಕತ್ತು ಸೀಳಿ ಯುವಕನನ್ನು ಬರ್ಬರವಾಗಿ ಕೊಲೆಗೈದಿರುವ ಘಟನೆ ಕಡೂರು ತಾಲೂಕಿನ ಹುಲಿಗೊಂದಿ ಹೊಸೂರು ಬಳಿ ಗುರುವಾರ ರಾತ್ರಿ ನಡೆದಿತ್ತು. ಸ್ನೇಹಿತರ ಜತೆ ಮನೆಯಿಂದ ಹೊರಗೆ ಹೋಗಿದ್ದ ಯುವಕ ಶವವಾಗಿ ಪತ್ತೆಯಾಗಿದ್ದ.
ತುಮಕೂರು ಜಿಲ್ಲೆ ಮಧುಗಿರಿ ಮೂಲದ ದರ್ಶನ್ (21) ನನ್ನು ಕತ್ತು ಸೀಳಿ ಕೊಲೆ ಮಾಡಲಾಗಿತ್ತು. ದರ್ಶನ್ ಬೆಂಗಳೂರಿನಲ್ಲಿ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ. ಕೊಲೆ ಯತ್ನ ಕೇಸ್ನಲ್ಲಿ ಜೈಲು ಸೇರಿದ್ದ ದರ್ಶನ್ ಇತ್ತೀಚೆಗೆ ಬೇಲ್ ಪಡೆದ ಬಳಿಕ ಇಬ್ಬರು ಸ್ನೇಹಿತರ ಜತೆ ಕಡೂರು ತಾಲೂಕಿನ ಮಾಡಾಳು ಗ್ರಾಮದ ತಾತನ ಮನೆಗೆ ಬಂದಿದ್ದ. ವಾರದ ಹಿಂದೆ ಮೃತ ದರ್ಶನ್ ಸ್ನೇಹಿತರು ಬೆಂಗಳೂರಿಗೆ ವಾಪಸ್ ಹೋಗಿದ್ದರು.
ಗುರುವಾರ ರಾತ್ರಿ ಕಾರಿನಲ್ಲಿ ಬಂದ ಸ್ನೇಹಿತರ ಜತೆ ದರ್ಶನ್ ಹೋಗಿದ್ದ. ಫ್ರೆಂಡ್ಸ್ ಬಂದಿದ್ದಾರೆ, ಹೊಲದ ಶೆಡ್ನಲ್ಲಿ ಮಲಗುತ್ತೇನೆ ಎಂದು ತಾತನಿಗೆ ಹೇಳಿ ಹೋಗಿದ್ದ. ದರ್ಶನ್ ಕಾರಿನಲ್ಲಿ ಹೋಗಿದ್ದನ್ನು ಆತನ ತಾತ ಕೂಡ ನೋಡಿದ್ದರು. ರಾತ್ರಿ ಹೊಲಕ್ಕೆ ಹೋಗಿ ನೋಡಿದಾಗ ಶೆಡ್ನಲ್ಲಿ ದರ್ಶನ್ ಇರಲಿಲ್ಲ. ಸ್ನೇಹಿತರ ಜತೆ ಎಲ್ಲೋ ಹೋಗಿರಬಹುದು ಎಂದು ತಾತ ಮನೆಗೆ ಬಂದಿದ್ದರು.
ಬೆಳಗ್ಗೆ ಮಾಡಾಳು ಗ್ರಾಮದ ತುಸು ದೂರದಲ್ಲಿ ದರ್ಶನ್ ಮೃತದೇಹ ಪತ್ತೆಯಾಗಿತ್ತು. ಕಿಡಿಗೇಡಿಗಳು ಕತ್ತು ಸೀಳಿ ಬರ್ಬರವಾಗಿ ಹತ್ಯೆಗೈದು ಪರಾರಿಯಾಗಿದ್ದರು.
ಈ ಪ್ರಕರಣವನ್ನು ಬೆನ್ನುಹತ್ತಿದ್ದ ಕಡೂರು ಪೊಲೀಸರು ಘಟನೆ ನಡೆದ 24 ಗಂಟೆ ಒಳಗೆ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹಳೇ ದ್ವೇಷದ ಹಿನ್ನಲೆಯಲ್ಲಿ ಕೊಲೆ ನಡೆಸಿರುವ ಬಗ್ಗೆ ಶಂಕೆ ವ್ಯಕ್ತಪಡಿಸಲಾಗಿದೆ.