ಮಂಗಳೂರು ಮೂಲದ ನಾಲ್ವರು ಯುವಕರಿಂದ ಕಾಫಿ ಎಸ್ಟೇಟ್ ನಲ್ಲಿ ದರೋಡೆ ನಡೆಸಲಾಗಿದೆ.
ಮನೆಯಲ್ಲಿದ್ದವರಿಗೆ ಖಾರದ ಪುಡಿ ಎರಚಿ ಹಣ ಮತ್ತು ಆಭರಣ ದರೋಡೆ ನಡೆಸಿದ್ದು, ಓರ್ವ ದರೋಡೆಕೋರ ಸ್ಥಳೀಯರ ಕೈಗೆ ಸಿಕ್ಕಿಬಿದ್ದಿದ್ದು, ಮೂವರು ಪರಾರಿಯಾಗಿದ್ದಾರೆ.
ಮೂಡಿಗೆರೆ ತಾಲೂಕಿನ ಬಾಳೂರು ಹೋಬಳಿ ಮಾಳೀಗನಾಡು ಎಂಬಲ್ಲಿ ಗುರುವಾರ ರಾತ್ರಿ 8 ಗಂಟೆಗೆ ಈ ಘಟನೆ ನಡೆದಿದೆ. ಮಾರಕಾಸ್ತ್ರಗಳ ಸಮೇತ ಮನೆಗೆ ನುಗ್ಗಿರುವ ಡಕಾಯಿತರ ತಂಡ.
ಮಾಳಿಗನಾಡು ಹೆಬ್ಬಾರಟ್ಟಿಯ ಅನಂತ ಹೆಬ್ಬಾರ್ ಎಂಬುವರ ಮನೆಯಲ್ಲಿ ದರೋಡೆ ಕೃತ್ಯ ನಡೆಸಲಾಗಿದೆ. ಕಾರಿನಲ್ಲಿ ಬಂದಿದ್ದ ದರೋಡೆಕೋರರು ಕಾರನ್ನು ಮನೆಯಿಂದ ಕೊಂಚ ದೂರದಲ್ಲಿ ನಿಲ್ಲಿಸಿ ಮನೆಗೆ ಏಕಾಏಕಿ ನುಗ್ಗಿ ಮನೆಯವರನ್ನು ಬೆದರಿಸಿ ಚಿನ್ನಾಭರಣ ದೋಚಿದ್ದಾರೆ.
ದರೋಡೆಕೋರರು 5 ಲಕ್ಷ ನಗದು, 30 ಗ್ರಾಂ ಮಾಂಗಲ್ಯ ಸರವನ್ನ ಹೊತ್ತೊಯ್ದಿದ್ದಾರೆ ಎಂದು ಮನೆಯವರು ಪೊಲೀಸರಿಗೆ ದೂರು ನೀಡಿದ್ದಾರೆ.
ಮನೆ ಮಾಲೀಕನ ಕುತ್ತಿಗೆಗೆ ಲಾಂಗ್ ಇಟ್ಟಿದ್ದು, ಮಾಲೀಕನನ್ನ ಬಿಡಿಸಲು ಬಂದ ಕಾರ್ಮಿಕ ಮಾಣಿ ಭಟ್ಟ ಎಂಬುವರ ಕೈ ಕಡಿದಿದ್ದಾರೆ. ಹಾಗೆಯೇ ಅನಂತ ಹೆಬ್ಬಾರ್ ಅವರ ಪುತ್ರನ ಬೆನ್ನಿಗೂ ಮಚ್ಚಿನ ಏಟು ಬಿದ್ದಿದೆ.
ಗಲಭೆ ಕೇಳಿ ಅಕ್ಕಪಕ್ಕದ ಜನ ಸೇರುತ್ತಿದ್ದಂತೆ ಮೂವರು ಕಾರಿನಲ್ಲಿ ಎಸ್ಕೇಪ್ ಆಗಿದ್ದು, ಕತ್ತಲಲ್ಲಿ ದಾರಿತಪ್ಪಿದ್ದ ಓರ್ವ ಅರಮನೆ ತಲಗೂರು ಗ್ರಾಮದಲ್ಲಿ ಅರಣ್ಯದಲ್ಲಿ ಅವಿತು ಕೂತಿದ್ದ. ಅರಣ್ಯದಲ್ಲಿ ಅವಿತು ಕೂತಿದ್ದ ದರೋಡೆಕೋರನನ್ನು ಸ್ಥಳಿಯರು ಸೆರೆಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಮನೆಯ ತುಂಬಾ ನೆಲದಲ್ಲಿ ರಕ್ತದ ಕಲೆಗಳಾಗಿವೆ. ಸ್ಥಳೀಯರ ಸಕಾಲಿಕ ಮಧ್ಯಪ್ರವೇಶದಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಇನ್ನುಳಿದ ಆರೋಪಿಗಳಿಗಾಗಿ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಸ್ಥಳಕ್ಕೆ ಬಾಳೂರು ಪೊಲೀಸರು ಮತ್ತು ಮೂಡಿಗೆರೆ ಸರ್ಕಲ್ ಇನ್ಸ್ ಪೆಕ್ಟರ್ ಸೋಮೇಗೌಡ ಭೇಟಿ ಪರಿಶೀಲನೆ ನಡೆಸಿದ್ದಾರೆ.
ಅನಂತ ಹೆಬ್ಬಾರ್ ಅವರು ಈ ಭಾಗದಲ್ಲಿ ಪ್ರಸಿದ್ಧ ಕೃಷಿಕರಾಗಿದ್ದಾರೆ. ಕಾಫಿ ಮತ್ತು ಅಡಿಕೆ ಬೆಳೆಗಾರರಾಗಿದ್ದಾರೆ. ಇವರ ಮನೆಯಲ್ಲಿ ಕಾಫಿ ಮತ್ತು ಅಡಿಕೆ ಕೊಯ್ಲು ಮಾಡಿದ ಮೂಟೆಗಳನ್ನು ಸಂಗ್ರಹಿಸಿಡಲಾಗಿದೆ.
ಈ ಪ್ರಕರಣವು ಕಾಫಿನಾಡಿನಲ್ಲಿ ಆತಂಕ ಮೂಡಿಸಿದೆ. ಮಲೆನಾಡಿನ ಒಂಟಿ ಮನೆಯನ್ನು ಟಾರ್ಗೇಟ್ ಮಾಡಿರುವ ದರೋಡೆಕೋರರಿಗೆ ಸ್ಥಳೀಯರು ಯಾರಾದರೂ ಮಾಹಿತಿ ಮತ್ತು ಸಾಥ್ ನೀಡಿರುವ ಸಾಧ್ಯತೆ ಇದೆ. ಪೊಲೀಸರು ಈ ನಿಟ್ಟಿನಲ್ಲಿ ತನಿಖೆ ಕೈಗೊಂಡು ಆರೋಪಿಗಳನ್ನು ಆದಷ್ಟು ಬೇಗ ಬಂಧಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.