ಅಪಹರಣಕಾರರು ಎಂದು ತಪ್ಪು ಗ್ರಹಿಕೆಯಿಂದ ಸಕಲೇಶಪುರ ಗ್ರಾಮಾಂತರ ಠಾಣೆ ಪೊಲೀಸರು ಆಂಧ್ರ ಪ್ರದೇಶದ ಪೊಲೀಸ್ ಅಧಿಕಾರಿಗಳನ್ನೇ ವಶಕ್ಕೆ ಪಡೆದು ವಿಚಾರಣೆ ನಡೆಸಿದ ಘಟನೆ ನಡೆದಿದೆ. ಸಕಲೇಶಪುರ ತಾಲೂಕಿನ ಬಾಳ್ಳುಪೇಟೆ ಗ್ರಾಮದ ಬಳಿ ಈ ಘಟನೆ ನಡೆದಿದೆ. ವ್ಯಕ್ತಿಯೊಬ್ಬನನ್ನು ರೌಡಿಗಳು ಅಪಹರಿಸಿದ್ದಾರೆ ಎಂಬ ಸ್ಥಳೀಯರ ಮಾಹಿತಿ ಮೇರೆಗೆ ಸಕಲೇಶಪುರ ಗ್ರಾಮಾಂತರ ಪೊಲೀಸರು ಆಂಧ್ರಪ್ರದೇಶದ ಅನ್ನಮಯ್ಯ ಜಿಲ್ಲೆಯ ಕೆವಿ ಪಲ್ಲಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ಮತ್ತು ಸಿಬ್ಬಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ಘಟನೆ ಮಂಗಳವಾರ ಸಂಜೆ ವರದಿಯಾಗಿದೆ.
ಹಾಸನ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜೀತಾ ಅವರ ಪ್ರಕಾರ, ಆರೋಪಿ ಸುರೇಶ್ ಎಂಬಾತ ಕೆವಿ ಪಲ್ಲಿ ಪೊಲೀಸ್ ಮಿತಿಯ ಬಳಿ ಕೆಂಪು ಚಂದನದ ಕಳ್ಳಸಾಗಣೆ ಮಾಡಿದಾಗ ಸಿಕ್ಕಿಬಿದ್ದಿದ್ದ. ಈ ಸಂದರ್ಭದಲ್ಲಿ ಆತ ಮೋಟಾರು ಸೈಕಲ್ಗೆ ಡಿಕ್ಕಿ ಹೊಡೆದು ಪೊಲೀಸರನ್ನೆ ಕೊಲೆ ಮಾಡಲು ಯತ್ನಿಸಿ ಪರಾರಿಯಾಗಿದ್ದ.
ಆತನ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದರು. ಆತ ಆಂಧ್ರಪ್ರದೇಶದಿಂದ ತಲೆಮರೆಸಿಕೊಂಡು ಬಂದು ಸಕಲೇಶಪುರ ತಾಲೂಕಿನ ವಳಲಹಳ್ಳಿ ಎಂಬಲ್ಲಿ ಕಾಫಿ ಎಸ್ಟೇಟ್ನಲ್ಲಿ ಸೇರಿಕೊಂಡಿದ್ದ. ಈ ಮಾಹಿತಿ ಸಂಗ್ರಹಿಸಿದ ಆಂಧ್ರಪ್ರದೇಶ ಪೊಲೀಸರು ಆರೋಪಿ ಸುರೇಶ್ನನ್ನು ಹುಡುಕಿಕೊಂಡು ಮಂಗಳವಾರ ವಳಲಹಳ್ಳಿಗೆ ಬಂದಿದ್ದರು. ಆರೋಪಿ ಸುರೇಶ್ ನನ್ನು ವಶಕ್ಕೆ ಪಡೆದು ಕರೆದೊಯ್ದಿದ್ದರು.
ಆದರೆ ಪೊಲೀಸರು ಮುಪ್ತಿ ವೇಷದಲ್ಲಿ ಇದ್ದುದ್ದರಿಂದ ಮತ್ತು ಇನ್ನೋವಾ ಕಾರಿನಲ್ಲಿ ಬಂದಿದ್ದರಿಂದ ತೋಟದ ಸಹಕಾರ್ಮಿಕರು ಇವರನ್ನು ಅಪಹರಣಕಾರರು ಎಂದು ಭಾವಿಸಿದ್ದಾರೆ. ಕೂಡಲೇ ತೋಟದ ಮ್ಯಾನೇಜರ್ ಗೆ ಕರೆಮಾಡಿ ತಿಳಿಸಿದ್ದಾರೆ. ತೋಟದ ಮ್ಯಾನೇಜರ್ ಸಕಲೇಶಪುರ ಗ್ರಾಮಾಂತರ ಪೊಲೀಸರಿಗೆ ಕರೆ ಮಾಡಿ ತಮ್ಮ ತೋಟದ ಕಾರ್ಮಿಕನನ್ನು ಅಪಹರಣ ಮಾಡಿದ್ದಾರೆ ಎಂದು ದೂರು ನೀಡಿದ್ದಾರೆ.
ಈ ಮಾಹಿತಿಯನ್ನು ಆಧರಿಸಿ ಆಂಧ್ರ ಪೊಲೀಸರು ಮತ್ತು ಸಿಬ್ಬಂದಿ ಹೋಗುತ್ತಿದ್ದ ಇನ್ನೋವಾ ಕಾರನ್ನು ಸಕಲೇಶಪುರ ಪೊಲೀಸ್ ಸಿಬ್ಬಂದಿ ಹಿಂಬಾಲಿಸಿದ್ದಾರೆ. ಬಾಳ್ಳುಪೇಟೆ ಸಮೀಪ ಸಾಗುತ್ತಿದ್ದ ಇನ್ನೋವಾ ಕಾರನ್ನು ತಡೆದು ನಿಲ್ಲಿಸಿದ್ದಾರೆ. ಅಲ್ಲಿ ಅವರು ನೀಡಿದ ವಿವರಣೆಯಿಂದ ತೃಪ್ತರಾಗದೇ ವಶಕ್ಕೆ ಪಡೆದು ಸಕಲೇಶಪುರ ಠಾಣೆಗೆ ಕರೆತಂದಿದ್ದಾರೆ
ಆಂಧ್ರಪ್ರದೇಶ ಪೊಲೀಸರು ಕೆವಿ ಪಲ್ಲಿ ಪೊಲೀಸ್ ಠಾಣೆಯಲ್ಲಿ ಸುರೇಶನ ವಿರುದ್ಧ ಎಫ್ಐಆರ್ ಸಂಖ್ಯೆ 16/24 ಸುರೇಶ್ ವಿರುದ್ಧ ದಾಖಲಾಗಿರುವುದನ್ನು ದಾಖಲೆ ಸಮೇತ ವಿವರಿಸಿದ್ದಾರೆ. ಸಕೇಶಪುರ ಪೊಲೀಸರು ಎಫ್ಐಆರ್ ಪರಿಶೀಲಿಸಿದ ನಂತರ ಕೆವಿ ಪಲ್ಲಿ ಪೊಲೀಸರಿಗೆ ಸುರೇಶ್ ಅವರನ್ನು ಕರೆದೊಯ್ಯಲು ಅವಕಾಶ ಮಾಡಿಕೊಟ್ಟರು ಮತ್ತು ಡೈರಿಯಲ್ಲಿರುವ ಪೊಲೀಸರ ವಿಳಾಸ ಮತ್ತು ಸಂಬಂಧಿತ ಮಾಹಿತಿಯನ್ನು ದಾಖಲಿಸಿದ್ದಾರೆ.
ಒಟ್ಟಾರೆ ಪೊಲೀಸರು ಮುಪ್ತಿ ಡ್ರಸ್ ನಲ್ಲಿ ಇದ್ದುದ್ದರಿಂದ ಉಂಟಾದ ಗೊಂದಲದಿಂದ ಮಂಗಳವಾರ ಸಕಲೇಶಪುರ ಠಾಣಾ ವ್ಯಾಪ್ತಿಯಲ್ಲಿ ಹೈಡ್ರಾಮಾವೇ ನಡೆದುಹೋಗಿದೆ.