ಹೇಮಾವತಿ ನದಿ ಮೂಲದ ಮೂಡಿಗೆರೆ ತಾಲ್ಲೂಕು ಬಾಳೂರು ಹೋಬಳಿಯ ಜಾವಳಿ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಸಂಭ್ರಮದ ವಾರ್ಷಿಕ ಜಾತ್ರಾ ಮಹೋತ್ಸವ ಮಂಗಳವಾರ ವಿಶೇಷ ಪೂಜೆಯೊಂದಿಗೆ ನೆರವೇರಿತು.
ವಿದ್ಯುತ್ ದೀಪಗಳಿಂದ ದೇಗುಲವು ಸೋಮವಾರ ರಾತ್ರಿಯೇ ಕಂಗೊಳಿಸುವಂತೆ ಅಲಂಕರಿಸಲಾಗಿತ್ತು. ದೇವಸ್ಥಾನದ ಸಮಿತಿ ಅಧ್ಯಕ್ಷ ಪ್ರವೀಣ್ ಎ.ಗುರ್ಜರ್ ಹಾಗೂ ಯಶವಂತ್ ಆರ್.ಗುರ್ಜರ್ , ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಬಿ.ಎಂ.ಸುರೇಶ್, ಕಾರ್ಯದರ್ಶಿ ಎಂ.ವಿ.ಜಗದೀಶ್ ಮತ್ತು ಸಮಿತಿಯ ಸದಸ್ಯರ ನೇತೃತ್ವದಲ್ಲಿ ಪಲ್ಲಕ್ಕಿ ಉತ್ಸವವು ಅದ್ದೂರಿಯಿಂದ ನಡೆಯಿತು. ಶ್ರೀ ಮಹಾಗಣಪತಿಗೆ ಹೂವಿನಿಂದ ವಿಶೇಷ ಅಲಂಕಾರ ಮಾಡಲಾಗಿತ್ತು.
ಬೆಳಿಗ್ಗೆಯೇ ದೇವಸ್ಥಾನದಲ್ಲಿ ವಿಶೇಷ ಹೋಮ ಹವನಗಳು ನಡೆದವು.ಭಕ್ತರು ಸಹಸ್ರ ಸಂಖ್ಯೆಯಲ್ಲಿ ಜಮಾಯಿಸಿ ಮಹಾಗಣಪನಿಗೆ ವಿಶೇಷ ಪೂಜೆ ಸಲ್ಲಿಸಿದರು.ಮಧ್ಯಾಹ್ನ ಮಹಾಮಂಗಳಾರತಿ ನಡೆದು ಪಲ್ಲಕ್ಕಿಯನ್ನು ದೇವಸ್ಥಾನದ ದ್ವಾರದಿಂದ ಮಂಜಿನಕಟ್ಟೆವರೆಗೆ ವಾದ್ಯದೊಂದಿಗೆ ಪಲ್ಲಕ್ಕಿಯನ್ನು ಮೆರವಣಿಗೆಯಲ್ಲಿ ಹೊತ್ತು ಸಾಗಿ ಮಂಜಿನಕಟ್ಟೆಯಲ್ಲಿ ವಿಶೇಷ ಪೂಜೆ ನೆರವೇರಿಸಿ ನಂತರ ಯಥಾ ಸ್ಥಳಕ್ಕೆ ಪಲ್ಲಕ್ಕಿಯನ್ನು ತರಲಾಯಿತು.ದೇವಸ್ಥಾನದ ಆಸುಪಾಸಿನಲ್ಲಿ ಅಂಗಡಿ, ತಿನಿಸುಗಳು ರಾರಾಜಿಸುತ್ತಿದ್ದವು.
ಉತ್ಸವಕ್ಕೆ ಬಂದ ಭಕ್ತರಿಗೆ ದೇವಸ್ಥಾನದ ವತಿಯಿಂದ ಅನ್ನ ಸಂತರ್ಪಣೆ ನಡೆಯಿತು.ಜಾತ್ರಾ ಮಹೋತ್ಸವದಲ್ಲಿ ಜಾವಳಿ, ಬಾಳೂರು ಸುತ್ತಮುತ್ತಲಿನ ಸಾವಿರಾರು ಗ್ರಾಮಸ್ಥರು ಸಂಭ್ರಮದಿಂದ ಭಾಗವಹಿಸಿದ್ದರು.