ಹತ್ತು ದೇವಸ್ಥಾನ ಕಟ್ಟುವ ಬದಲು ಒಂದು ಶಾಲೆ ನಿರ್ಮಿಸಿದರೆ ಇದರಿಂದ ಸಾವಿರಾರು ವಿದ್ಯಾರ್ಥಿಗಳಿಗೆ ದಾರಿದೀಪವಾಗುತ್ತದೆ ಎಂದು ಮಾಜಿ ಸಚಿವ ಬಿ.ಬಿ.ನಿಂಗಯ್ಯ ಹೇಳಿದರು.
ಅವರು ಬುಧವಾರ ತಾಲೂಕಿನ ಕಡಿದಾಳು ಗ್ರಾಮದಲ್ಲಿ ನಿರ್ಮಿಸಿರುವ ನೂತನ ಶಾಲೆ ಕಟ್ಟಡದ ಉದ್ಘಾಟನಾ ಕಾರ್ಯಕ್ರಮ ವಹಿಸಿ ಮಾತನಾಡಿದರು. ಶಾಲೆ ವಿದ್ಯಾರ್ಥಿಯ ಭವಿಷ್ಯ ರೂಪಿಸುವ ತಾಣವಾಗಿದೆ. ಆದರೆ ಪ್ರಸ್ತುತ ಕಲಾಘಟ್ಟದಲ್ಲಿ ಸರಕಾರಿ ಶಾಲೆ ಮುಚ್ಚುತ್ತಿರುವ ಸಂದರ್ಭದಲ್ಲಿ ಹಳೆ ಶಾಲೆಯನ್ನು ಉಳಿಸಿಕೊಂಡು ನೂತನ ಕಟ್ಟಡ ನಿರ್ಮಿಸಿರುವುದು ಪ್ರಶಂಸನೀಯ ಎಂದು ತಿಳಿಸಿದರು.
ಯುರೇಕಾ ಅಕಾಡೆಮಿ ಸಂಸ್ಥಾಪಕ ದೀಪಕ್ ದೊಡ್ಡಯ್ಯ ಮಾತನಾಡಿ, ಸರ್ಕಾರ ಸರಕಾರಿ ಶಾಲೆ ಅಭಿವೃದ್ಧಿಪಡಿಸಿ ಒಳ್ಳೆ ಶಿಕ್ಷಣ ನೀಡಿದರೆ ಯಾವ ಶಾಲೆಯೂ ಮುಚ್ಚು ಪರಿಸ್ಥಿತಿಗೆ ತಲುಪುಪುವುದಿಲ್ಲ.ಉತ್ತಮ ಶಿಕ್ಷಣ, ಮೂಲಭೂತ ಸೌಕರ್ಯ, ಸುಂದರ ಪರಿಸರವಿದ್ದಲ್ಲಿ ಪೋಷಕರು ಖಾಸಗಿ ಶಾಲೆಯತ್ತ ಮುಖ ಮಾಡುವ ಪರಿಸ್ತಿತಿ ಉದ್ಭವಿಸುವುದಿಲ್ಲ ಎಂದು ತಿಳಿಸಿದರು.
ತಾ.ಪಂ. ಮಾಜಿ ಅಧ್ಯಕ್ಷ ಜಿಲ್ಲಾಧ್ಯಕ್ಷ ರಂಜನ್ ಅಜಿತ್ ಕುಮಾರ್ ಮಾತನಾಡಿ, ಈ ಶಾಲೆ ಶಿಥಿಲಾವ್ಯಸ್ಥೆಗೆ ಬಂದಿದ್ದರಿಂದ 2018ರಲ್ಲಿ ಹೆಚ್.ಡಿ.ರೇವಣ್ಣ ಅವರ ಗಮನಕ್ಕೆ ತಂದು ಹೊಸ ಕಟ್ಟಡಕ್ಕೆ ಅವಕಾಶ ಮಾಡಿಕೊಟ್ಟ ಹಿನ್ನಲೆಯಲ್ಲಿ ಉತ್ತಮ ಕಟ್ಟಡ ನಿರ್ಮಾಣವಾಗಿದೆ. ಮುಖ್ಯವಾಗಿ ಶಾಲೆ ನಿರ್ಮಾಣಕ್ಕೆ ಜಾಗದ ಕೊರತೆ ಇದಿದ್ದರಿಂದ ಗ್ರಾಮದ ವಸಂತೇಗೌಡ ಅವರು ಜಾಗ ನೀಡಿ ಸಹಾಯ ಮಾಡಿದ್ದಾರೆಂದು ಕೃತಜ್ಞತೆ ಸಲ್ಲಿಸಿದರು.
ಈ ವೇಳೆ ದಾರದಹಳ್ಳಿ ಗ್ರಾ.ಪಂ. ಅಧ್ಯಕ್ಷೆ ಸಂಜೀದಾ, ಸದಸ್ಯರಾದ ಸಂಪತ್, ವಿಕ್ರಂ, ಸಿದ್ದೇಶ್, ಮಂಜುನಾಥ್. ಸಾಧನ ಮನೀಶ್, ಎಸ್ಡಿಎಂಸಿ ಅಧ್ಯಕ್ಷ ವೆಂಕಟೇಶ್, ಗ್ರಾಮದ ಮುಖಂಡ ಮಲ್ಲೇಗೌಡ, ಮನೋಜ್ ಹಳೇಕೋಟೆ, ಬ್ರಿಜೇಶ್, .ಸುದರ್ಶನ್, ಮುಖ್ಯ ಶಿಕ್ಷಕಿ ವೀಣಾ ಮತ್ತಿತರರಿದ್ದರು.