ಪ್ರೀತಿಸಿ ಮದುವೆಯಾದ ಪತ್ನಿ ತಿಂಗಳು ತುಂಬುವುದರೊಳಗೆ ಮನೆಬಿಟ್ಟು ಹೋದಳೆಂದು ನೊಂದು ಕಬ್ಬಡ್ಡಿ ಆಟಗಾರ ಆತ್ಮಹತ್ಯೆಗೆ ಶರಣಾಗಿದ್ದಾರೆ.
ರಾಷ್ಟ್ರಮಟ್ಟದ ವರೆಗೆ ಕಬ್ಬಡ್ಡಿಯಲ್ಲಿ ಸಾಧನೆ ಮಾಡಿದ್ದ ಚಿಕ್ಕಮಗಳೂರು ಸಮೀಪದ ತೇಗೂರು ಗ್ರಾಮದ ವಿನೋದ್ ರಾಜ್ ಅರಸ್ ಆತ್ಮಹತ್ಯೆ ಮಾಡಿಕೊಂಡ ಯುವಕ. ತೇಗೂರು ಗ್ರಾಮದ ಪರಮೇಶ್ ರಾಜ್ ಅರಸ್ ಮತ್ತು ಶೋಭ ದಂಪತಿಗಳ ಪುತ್ರ ವಿನೋದ್ ರಾಜ್ ಅರಸ್ ಮೃತ ದುರ್ದೈವಿ.
ಮದುವೆಯಾದ ಕೆಲ ದಿನಗಳಲ್ಲಿಯೇ ಪತ್ನಿ ಬಿಟ್ಟಹೋದ ಹಿನ್ನೆಲೆಯಲ್ಲಿ ವಿನೋದ್ ರಾಜ್ ನೊಂದಿದ್ದ ಎನ್ನಲಾಗಿದೆ. ಕಳೆದ ಶುಕ್ರವಾರ ಆತ್ಮಹತ್ಯೆಗೆ ಯತ್ನಿಸಿದ ವಿನೋದ್ ರಾಜ್ ಅರಸ್ ನನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಸೋಮವಾರ ರಾತ್ರಿ ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಚಿಕ್ಕಮಗಳೂರಿನ ಬೈಕ್ ಶೋರೂಂ ಒಂದರಲ್ಲಿ ಕೆಲಸ ಮಾಡುತ್ತಿದ್ದ ಯುವತಿಯನ್ನು ಎರಡು ವರ್ಷಗಳ ಕಾಲ ಪ್ರೀತಿಸಿದ್ದ ವಿನೋದ್ ರಾಜ್ 2023ರ ಡಿ.10 ರಂದು ಮದುವೆಯಾಗಿದ್ದರು. ಆದರೆ ಕೆಲ ದಿನಗಳಲ್ಲಿ ತವರು ಮನೆಗೆ ಹೋದವಳು ತಾನು ಗಂಡನ ಮನೆಗೆ ಹೋಗುವುದಿಲ್ಲ ಎಂದು ವರತಾ ತೆಗೆದಿದ್ದರು. ಈ ವಿಚಾರವಾಗಿ ಪ್ರಕರಣ ಚಿಕ್ಕಮಗಳೂರು ಮಹಿಳಾ ಪೊಲೀಸ್ ಠಾಣಾ ಮೆಟ್ಟೀಲೇರಿತ್ತು.
ಪ್ರೀತಿಸಿ ಮದುವೆಯಾಗಿದ್ದ ಪತ್ನಿ ಮನೆಬಿಟ್ಟು ಹೋದಳು ಎಂದು, ಜೊತೆಗೆ ಪೊಲೀಸ್ ಠಾಣೆಯಲ್ಲಿ ತನ್ನ ವಿರುದ್ಧ ದೂರು ನೀಡಿದ್ದರಿಂದ ಮಾನಸಿಕವಾಗಿ ಕುಗ್ಗಿ ಹೋಗಿದ್ದ ವಿನೋದ್ ರಾಜ್ ಸಾವಿಗೆ ಶರಣಾಗಿದ್ದಾರೆ. ಇದೀಗ ಬೆಳೆದು ನಿಂತಿದ್ದ ಮಗ ತನ್ನ ಬದುಕನ್ನು ಅಂತ್ಯಗೊಳಿಸಿಕೊಂಡಿರುವುದು ಅವರ ಪೋಷಕರನ್ನು ಕಂಗಾಲಾಗಿಸಿದೆ. ತನ್ನ ಮಗನ ಸಾವಿಗೆ ನ್ಯಾಯ ಒದಗಿಸಿಕೊಡಿ ಎಂದು ಪೋಷಕರು, ಬಂಧುಗಳು, ಸ್ನೇಹಿತರು ಒತ್ತಾಯಿಸಿದ್ದಾರೆ.
ಮೃತ ವಿನೋದ್ ರಾಜ್ ಅರಸ್ ಕಬ್ಬಡ್ಡಿಯಲ್ಲಿ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಅನೇಕ ಪಂದ್ಯಾವಳಿಗಳಲ್ಲಿ ಭಾಗವಹಿಸಿ ಹೆಸರು ಮಾಡಿದ್ದರು. ಇದೀಗ ವೈವಾಹಿಕ ಬದುಕಿನ ವೈಪಲ್ಯದಿಂದ ನೋಂದು ಸಾವಿಗೆ ಶರಣಾಗಿದ್ದಾರೆ. ಅವರು ತಂದೆ ತಾಯಿ ಹಾಗೂ ಓರ್ವ ಸಹೋದರಿಯನ್ನು ಅಗಲಿದ್ದಾರೆ.