ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಫೆಬ್ರವರಿ 11ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬೃಹತ್ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ ಎಂದು ರಾಜ್ಯ ಕಟ್ಟಡ ನಿರ್ಮಾಣ ಮತ್ತು ಅಸಂಘಟಿತ ಕಾರ್ಮಿಕರ ಒಕ್ಕೂಟದ ಚಿಕ್ಕಮಗಳೂರು ಜಿಲ್ಲಾಧ್ಯಕ್ಷ ಜಯರಾಂ ಸಜಿತ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು ಸಾಮಾನ್ಯವಾಗಿ ಬಡತನದ ಬದುಕಿನಲ್ಲಿ ಬದುಕುತ್ತ ಹೆಚ್ಚಾಗಿ ಅವಿದ್ಯಾವಂತರಾಗಿದ್ದಾರೆ ಇವರು ಕೆಲಸದಿಂದ ಕೆಲಸಕ್ಕೆ ಅಲೆದಾಡುತ್ತಾ ಕಟ್ಟಡ ನಿರ್ಮಾಣ ಕಾರ್ಯದಲ್ಲಿ ಮೇಸನ್, ಸೆಂಟ್ರಿಂಗ್, ಕಾರ್ಪೆಂಟರ್, ಫ್ಲಮಿಂಗ್, ಸೀಮೆಂಟ್ ಕಾಂಕ್ರಿಟ್ ಕೆಲಸ ಹಾಗೂ ಇನ್ನಿತರೆ ಕಟ್ಟಡ ನಿರ್ಮಾಣ ಕೆಲಸಗಳಲ್ಲಿ ತೊಡಗಿದ್ದು ಇವರಿಗೆ ಯಾವುದೇ ಭದ್ರತೆಯ ಬದುಕು ಇರುವುದಿಲ್ಲ. ಇಂತಹ ಸಂದರ್ಭದಲ್ಲಿ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ಹೆಸರು ನೊಂದಾಯಿಸಿಕೊಳ್ಳಲು ಹಾಗೂ ನವೀಕರಣ ಮಾಡಿಸಿಕೊಳ್ಳಲು ಕಾರ್ಮಿಕರ ಮಂಡಳಿಯು ಹಲವಾರು ಶರತ್ತುಗಳನ್ನು ವಿಧಿಸಿದೆ ಎಂದು ಆರೋಪಿಸಿದರು.
ಕಾರ್ಮಿಕರು ಅತಂತ್ರ ಬದುಕು ಸಾಗಿಸುತ್ತ ಕೆಲಸ ನಿರ್ವಹಿಸುವ ಸಮಯದಲ್ಲಿ ನೊಂದಣಿಗಾಗಿ ಹಾಗೂ ನವೀಕರಣಕ್ಕಾಗಿ ಕಟ್ಟಡ ಪರವಾನಿಗಿ ಪತ್ರ ಹಾಗೂ ನಕ್ಷೆ, ವೇತನ ಚೀಟಿ ಹಾಗೂ ಹಾಜರಾತಿ ಪುಸ್ತಕ ಕೇಳಿರುವುದನ್ನು ಇವರಿಗೆ ಒದಗಿಸಿಕೊಡುವುದು ಅಸಾಧ್ಯವಾಗಿದೆ ಎಂದರು.
ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು ಇಂತಹ ಜಾಗದಲ್ಲಿ ಕೆಲಸ ಮಾಡುತ್ತೇವೆಂದು ತಿಳಿಸಿದಾಗ ಅದನ್ನು ಪರಿಶೀಲಿಸಿ ಸತ್ಯ ಅಸತ್ಯತೆಯನ್ನು ತನಿಖೆ ಮಾಡುವ ಅಧಿಕಾರ ಸಂಬಂಧ ಪಟ್ಟ ಕಾರ್ಮಿಕ ನಿರೀಕ್ಷಕರಿಗೆ ಇರುತ್ತದೆ. ಇಂತಹ ಸಂದರ್ಭದಲ್ಲಿ ಈ ರೀತಿಯ ಕಾನೂನುಗಳನ್ನು ಜಾರಿಗೆ ಮಾಡಿರುವುದರಿಂದ ಸಾವಿರಾರು ಕಟ್ಟಡ ಕಾರ್ಮಿಕರಿಗೆ ಗುರುತಿನ ಚೀಟಿಯನ್ನು ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು.
ಈ ಕಾರಣದಿಂದ ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿಗೆ ಕಾರ್ಮಿಕರ ನೊಂದಣಿ ನವೀಕರಣಕ್ಕಾಗಿ ನಿಯಮಗಳನ್ನು ಸರಳಿಕರಣಗೊಳಿಸಲು ಸೂಕ್ತ ಆದೇಶವನ್ನು ನೀಡಬೇಕೆಂದು ವಿನಂತಿಸಿದರು.
ನೋಂದಣಿಯಾಗಿರುವ ಕಟ್ಟಡ ಕಾರ್ಮಿಕರಿಗೆ ೫ ಲಕ್ಷಗಳ ವಸತಿ ಸೌಲಭ್ಯವನ್ನು ಕಾರ್ಮಿಕ ಇಲಾಖೆಯಿಂದ ಕೂಡಲೆ ಘೋ?ಣೆ ಆಗಬೇಕು. ನೋಂದಣಿಯಾಗಿರುವ ಕಟ್ಟಡ ಕಾರ್ಮಿಕರಿಗೆ ಉಚಿತ ಬಸ್ ಪಾಸ್, ಕಾರ್ಮಿಕ ಇಲಾಖೆಯಿಂದ ಕೂಡಲೆ ನೀಡಲು ಆದೇಶ ಹೊರಡಿಸಬೇಕು. ಕರ್ನಾಟಕ ರಾಜ್ಯದ್ಯಂತ ಜಿಲ್ಲೆ ಮತ್ತು ತಾಲ್ಲೂಕುಗಳಲ್ಲಿ ಕಾರ್ಮಿಕರ ಕಲ್ಯಾಣ ಮಂಟಪ ಮತ್ತು ಕಾರ್ಮಿಕ ಸಮುದಾಯ ಭವನ ನಿರ್ಮಾಣವಾಗಬೇಕು ಎಂದು ಒತ್ತಾಯಿಸಿದರು.
ಕಾರ್ಮಿಕರಿಗೆ 2013 ರಿಂದ ಸತತವಾಗಿ ಕನಿಷ್ಟ ವೇತನ ನೀಡಬೇಕಾಗಿ ಕೇಳಿದರು ಕೂಡ ಇದುವರೆಗೂ ಬೇಡಿಕೆ ಈಡೇರಿಸಲಿಲ್ಲ. ಹಾಗಾಗಿ ಕನಿಷ್ಟ ವೇತನ ಒಳಪಡುವ ಕಾರ್ಮಿಕರಿಗೆ 35,000 ರೂಪಾಯಿಗಳನ್ನು ನಿಗಧಿಪಡಿಸಬೇಕು. ಕಾರ್ಮಿಕ ಮಕ್ಕಳಿಗೆ ವಿದ್ಯಾಭ್ಯಾಸಕ್ಕಾಗಿ ನೀಡುತ್ತಿರುವ ಸೌಲಭ್ಯವನ್ನು 2019-20 ನೇ ಸಾಲಿನಲ್ಲಿ ನಿಗಧಿಯಾಗಿದೆಯೋ ಅದೇ ಸೌಲಭ್ಯವನ್ನು 2023-24ನೇ ಸಾಲಿನಲ್ಲೂ ಕೂಡಲೇ ನೀಡಬೇಕು ಎಂದು ಆಗ್ರಹಿಸಿದರು.
ನೊಂದಣಿಯಾಗಿರುವ ಕಾರ್ಮಿಕರಿಗೆ ಚಿಕಿತ್ಸೆಗಾಗಿ ಯಾವುದೇ ಖಾಸಗಿ ಆಸ್ಪತ್ರೆಯಲ್ಲಿ ಕಾರ್ಮಿಕರು ಚಿಕಿತ್ಸೆ ಹಾಗೂ ಆಪರೇ?ನ್ಗೆ ಒಳಪಟ್ಟಲ್ಲಿ 5 ವರ್ಷದವರೆಗೆ ಮರುಪಾವತಿ ನೀಡಬೇಕಾಗಿ ಅನುಕೂಲ ಮಾಡಿಕೊಡಬೇಕು ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಒಕ್ಕೂಟದ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಪ್ರೇಮ ಇದ್ದರು.