ಸಿಡಿಮದ್ದು ತಯಾರಿಕ ಘಟಕದಲ್ಲಿ ಸ್ಫೋಟ ಭೀಕರ ಸ್ಫೋಟ ಸಂಭವಿಸಿದ್ದು, ಮೂರು ಮಂದಿ ಧಾರುಣವಾಗಿ ಸಾವನ್ನಪ್ಪಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ವೇಣೂರು ಸಮೀಪ ಭಾನುವಾರ ಈ ದುರಂತ ಸಂಭವಿಸಿದೆ. ವೇಣೂರು ಪೊಲೀಸ್ ಠಾಣೆ ವ್ಯಾಪ್ತಿಯ ಗೋಳಿಯಂಗಡಿ ಸಮೀಪದ ಕಡ್ತ್ಯಾರು ಎಂಬಲ್ಲಿ ಇರುವ ಪಟಾಕಿ ತಯಾರಿ ಘಟಕದಲ್ಲಿ ಭಾನುವಾರ ಸಂಜೆ ಸ್ಫೋಟ ಸಂಭವಿಸಿ ಮೂವರು ಸ್ಥಳದಲ್ಲೆ ಮೃತಪಟ್ಟಿದ್ದಾರೆ.
ಮೂಲಗಳ ಪ್ರಕಾರ ಕುಕ್ಕೇಡಿಯ ಬಶೀರ್ ಎಂಬವರ ಜಮೀನಿನಲ್ಲಿದ್ದ ಪಟಾಕಿ ತಯಾರಿಕಾ ಘಟಕದಲ್ಲಿ ಒಟ್ಟು 9 ಮಂದಿ ಕೂಲಿ ಕಾರ್ಮಿಕರು ಪಟಾಕಿ ತಯಾರಿಸುತ್ತಿದ್ದರು. ಈ ವೇಳೆ ಸ್ಫೋಟ ಸಂಭವಿಸಿದ್ದು, ದುರಂತದಲ್ಲಿ ಮೂರು ಮಂದಿ ಸಾವನ್ನಪ್ಪಿದ್ದಾರೆ. ಮೃತರನ್ನು ತ್ರಿಶೂರಿನ ವರ್ಗೀಸ್, ಹಾಸನ ಅಂಕನಾಯಕನಹಳ್ಳಿ ಚೇತನ್, ಕೇರಳದ ಸ್ವಾಮಿ ಎಂದು ಗುರುತಿಸಲಾಗಿದೆ. ಮೃತರ ಪೈಕಿ ಓರ್ವನ ಮೃತದೇಹ ದೊರೆತಿದ್ದು, ಇನ್ನಿಬ್ಬರ ದೇಹದ ಭಾಗಗಳು ಸ್ಫೋಟದ ರಭಸಕ್ಕೆ ಛಿದ್ರವಾಗಿ ಚದುರಿ ಬಿದ್ದಿವೆ.
ಸ್ಥಳಕ್ಕೆ ಬೆಳ್ತಂಗಡಿ ಅಗ್ನಿಶಾಮಕ ಸಿಬಂದಿ ತಕ್ಷಣ ಬೆಂಕಿನಂದಿಸಿ ಅರೆ ಜೀವಾವಸ್ಥೆಯಲ್ಲಿದ್ದ ವ್ಯಕ್ತಿಯನ್ನು ಆಸ್ಪತ್ರೆಗೆ ಸಾಗಿಸಿದರೂ ಆಸ್ಪತ್ರೆಯಲ್ಲಿ ಅವರು ಕೊನೆಯುಸಿರೆಳೆದರು. ಸ್ಥಳದಲ್ಲಿ ಶೆಡ್ ಸಂಪೂರ್ಣ ಧ್ವಂಸವಾಗಿದ್ದು, ಇದರ ಸದ್ದು 4 ಕಿ.ಮೀ. ದೂರಕ್ಕೆ ಕೇಳಿಸಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
‘ಸಾಲಿಡ್ ಫೈರ್ ವರ್ಕ್ಸ್’ ಎಂಬ ಈ ಪಟಾಕಿ ತಯಾರಿಕೆ ಘಟಕ 50 ವರ್ಷಗಳಿಂದ ಇದೆ. ಇಲ್ಲಿ ಪಟಾಕಿ, ಸಿಡಿಮದ್ದು ತಯಾರಿಸಿ ಹಲವಾರು ಜಾತ್ರೆ ಹಾಗೂ ಇತರ ಕಾರ್ಯಕ್ರಮಗಳಿಗೆ ಪೂರೈಸುತ್ತಿದ್ದರು ಎನ್ನಲಾಗಿದೆ.
ಘಟನಾ ಸ್ಥಳಕ್ಕೆ ದಕ್ಷಿಣ ಕನ್ನಡ ಪೊಲೀಸ್ ವರಿಷ್ಠಾಧಿಕಾರಿ ಸಿಬಿ ರಿಷ್ಯಂತ್ ಭೇಟಿ ನೀಡಿ ಸ್ಫೋಟದ ವಿವರ ಸಂಗ್ರಹಿಸಿದ್ದಾರೆ. ವೇಣೂರು ಪೊಲೀಸರು ಕೆಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎನ್ನಲಾಗಿದೆ.