ಗಣರಾಜ್ಯೋತ್ಸವದ ಅಂಗವಾಗಿ ಚಿಕ್ಕಮಗಳೂರು ತೋಟಗಾರಿಕೆ ಇಲಾಖೆಯ ಆವರಣದಲ್ಲಿ ಆಯೋಜಿಸಿರುವ ಫಲಪುಷ್ಪ ಪ್ರದರ್ಶನ ಸಾರ್ವಜನಿಕರ ಗಮನ ಸೆಳೆದಿದೆ.
ತೋಟಗಾರಿಕೆ ಇಲಾಖೆ ಕಾಂಪೌಂಡ್ ದಾಟಿದ ಕೂಡಲೇ ಪುಷ್ಪ ಲೋಕವೇ ತೆರೆದುಕೊಳ್ಳುತ್ತದೆ. ವಿದೇಶದಿಂದ ಸಸಿ ತರಿಸಿ ಇಲ್ಲಿ ಬೆಳೆಸಿರುವ ಗಿಡ್ಡ ತಳಿಯ ಚೆಂಡು ಹೂವುಗಳನ್ನು ನಿರಂತರ ನೋಡುತ್ತಲೇ ಇರಬೇಕೆನಿಸುತ್ತದೆ. ಈ ಬಾರಿ ದಸರಾ ಮಹೋತ್ಸವದಲ್ಲಿ ಪ್ರಥಮ ಸ್ಥಾನ ಪಡೆದ ಬೆಟ್ಟದಿಂದ ಬಟ್ಟಲಿಗೆ ಸಾಕ್ಷ್ಯಾಚಿತ್ರವನ್ನು ಇಲ್ಲಿ ಪುನಾ ಸ್ಥಾಪಿಸಿದ್ದು ದ್ವಾರದಲ್ಲೇ ಜನರನ್ನು ಕೈಬೀಸಿ ಕರೆಯುತ್ತಿದೆ.
ಹಂಪಿಯ ಕಲ್ಲಿನ ರಥವನ್ನು ಬಹಳ ಸುಂದರವಾಗಿ ಚಿತ್ರಿಸಲಾಗಿದೆ. ಸಹಸ್ರಾರು ಬಣ್ಣಬಣ್ಣದ ಸೇವಂತಿ ಹೂವುಗಳನ್ನು ಬಳಸಿ ಸುಂದರ ಶಾಲಾ ಕಟ್ಟಡವನ್ನು ನಿರ್ಮಿಸಿದ್ದು ಹೂವಿನಿಂದಲೇ ಅಆಇಈ ವರ್ಣಮಾಲೆ ಪೋಣಿಸಿ ಚೆಲುವಿನ ಚಿತ್ತಾರ ಮೂಡಿಸಲಾಗಿದೆ.
ಬೋದಿವೃಕ್ಷದ ಕೆಳಗೆ ಬುದ್ದ ಧ್ಯಾನಸಕ್ತನಾಗಿರುವ ಉದ್ಯಾನವನ ವಿವಿಧ ಬಣ್ಣದ ಹೂವುಗಳಿಂದ ಅಲಂಕೃತಗೊಂಡಿದೆ. ಕರ್ನಾಟಕದ ಭೂಪಟ ಚಿತ್ರದೊಂದಿಗೆ ರಾಷ್ಟ್ರಕವಿ ಕುವೆಂಪು ಅವರ ಪ್ರತಿಮೆ, ಕಾಡಿನಲ್ಲಿರುವಂತೆ ಭಾಸವಾಗುವ ಬೇಡರ ಕಣ್ಣಪ್ಪನ ಪ್ರತಿಮೆಗಳು ಚಿತ್ತಾಕರ್ಷಕವಾಗಿವೆ.
ಮೀನುಗಾರಿಕೆ ಇಲಾಖೆಯಿಂದ ವಿವಿಧ ತಳಿಯ ಬಣ್ಣದ ಮೀನುಗಳನ್ನು ಅಕ್ವೇರಿಯಂನಲ್ಲಿಟ್ಟಿದ್ದು, ನೋಡುಗರಿಗೆ ಮುದ ನೀಡುತ್ತಿವೆ. ಕಲ್ಲಂಗಡಿ ಹಣ್ಣಿನಲ್ಲಿ ಕಲಾವಿದರು ಕೈಚಳಕ ತೋರಿಸಿದ್ದು ವಿವಿಧ ಗಣ್ಯರ ಭಾವಚಿತ್ರಗಳು ಮೂಡಿಬಂದಿವೆ. ಅಂಥೋರಿಯಂ ಸೇರಿದಂತೆ ವಿವಿಧ ಜಾತಿಯ ಅಲಂಕಾರಿಕಾ ಗಿಡಗಳನ್ನು ಪ್ರದರ್ಶನಕ್ಕಿಡಲಾಗಿದೆ. ರೈತ ಬೆವರು ಸುರಿಸಿ ದುಡಿದರೂ ಕಷ್ಟ ತಪ್ಪಲಿಲ್ಲ ಎಂಬುದನ್ನು ಬಿಂಬಿಸುವಂತೆ ಬಿಸಿಲಿನಲ್ಲಿ ರೈತನೊಬ್ಬ ಬೆವರು ಸುರಿಸಿಕೊಂಡು ತರಕಾರಿ ಮಾರುತ್ತಿರುವ ದೃಶ್ಯ ಮನೋಜ್ಞವಾಗಿದೆ.
ವಿವಿಧ ಬಗೆಯ ಹೈಬ್ರಿಡ್ ತಳಿಯ ಗೆಡ್ಡೆ, ಗೆಣಸು, ತರಕಾರಿಗಳು, ಸೊಪ್ಪು ಮತ್ತಿತರೆ ಕಾಯಿ ಪಲ್ಲೆಗಳು ಪ್ರದರ್ಶನದಲ್ಲಿದ್ದು ಅವುಗಳ ಗಾತ್ರ ಮತ್ತು ತೂಕ ನೋಡಿದರೆ ಅಚ್ಚರಿ ಮೂಡಿಸುವಂತಿವೆ. ವಿವಿಧ ಇಲಾಖೆಗಳ ವಸ್ತು ಪ್ರದರ್ಶನ ಜತೆಗೆ ವಿವಿಧ ಸ್ತ್ರೀಶಕ್ತಿ ಸಂಘಗಳು ತಯಾರಿಸಿ ಮಾರಾಟಕ್ಕೆ ಇಟ್ಟಿರುವ ಅಪರೂಪದ ವಸ್ತುಗಳು ಇಲ್ಲಿ ಲಭ್ಯವಿದೆ.
ಒಟ್ಟಾರೆ ಜಂಜಾಟದ ಬದುಕಿನಲ್ಲಿ ತುಸು ಶಾಂತಿ ನೆಮ್ಮದಿ ಬೇಕು ಎನಿಸಿದಲ್ಲಿ ಫಲಪುಷ್ಪ ಪ್ರದರ್ಶನಕ್ಕೆ ಭೇಟಿ ನೀಡಿದಲ್ಲಿ ಮನಸ್ಸು ಹಗುರವಾಗುವುದರಲ್ಲಿ ಸಂದೇಹವಿಲ್ಲ.
ಇಂಧನ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಜೆ.ಜಾರ್ಜ್ ಫಲಪುಷ್ಪ ಪ್ರದರ್ಶನವನ್ನು ಉದ್ಘಾಟಿಸಿದರು. ಶಾಸಕರಾದ ಎಚ್.ಡಿ.ತಮ್ಮಯ್ಯ, ಟಿ.ಡಿ.ರಾಜೇಗೌಡ,ನಗರಸಭೆ ಅಧ್ಯಕ್ಷ ವರಸಿದ್ದಿವೇಣುಗೋಪಾಲ್, ಡಿಸಿ ಸಿ.ಎನ್.ಮೀನಾನಾಗರಾಜ್, ಎಸ್ಪಿ ವಿಕ್ರಂ ಅಮಟೆ, ಜಿಪಂ ಸಿಇಒ ಡಾ.ಗೋಪಾಲಕೃಷ್ಣ ಮತ್ತಿತರರಿದರು.