ಶ್ರೀ ಕ್ಷೇತ್ರ ಧರ್ಮಸ್ಥಳ ಜನಜಾಗೃತಿ ವೇದಿಕೆಯಿಂದ ಕಳಸ ತಾಲ್ಲೂಕಿನ ಸಂಸೆ ಐಟಿಐ ಕಾಲೇಜಿನಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದ ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮೋತ್ಥಾನ ಟ್ರಸ್ಟ್ ಸದಸ್ಯ ಪ್ರಶಾಂತ್ ಚಿಪ್ರಗುತ್ತಿ ; ನಮ್ಮ ದೇಶದಲ್ಲಿ ಮಾನವ ಸಂಪನ್ಮೂಲವೂ ಮಾದಕ ವಸ್ತುಗಳು ಹಾಗೂ ಇನ್ನಿತರ ನಕಾರಾತ್ಮಕ ವಿಚಾರಗಳಿಂದ ನಶಿಸಿ ಹೋಗುತ್ತಿದೆ. ಭಾರತ ದೇಶ ಮಾನವ ಸಂಪನ್ಮೂಲವನ್ನು ಕಳೆದುಕೊಂಡರೆ ದೇಶ ಬಡವಾಗುತ್ತದೆ ಮತ್ತು ದುರ್ಬಲವಾಗುತ್ತದೆ. ಆದರೆ ಮಾನವ ಸಂಪನ್ಮೂಲ ಖಾತೆ ಇದರ ಬಗ್ಗೆ ಯಾವುದೇ ರೀತಿಯ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳದೆ ಇರುವುದು ವಿಷಾದನೀಯ. ಈ ಕೂಡಲೇ ಮಾನವ ಸಂಪನ್ಮೂಲವನ್ನು ಉಳಿಸಲು ಮಾದಕ ವಸ್ತುಗಳನ್ನ ದೇಶದಲ್ಲಿ ನಿಷೇಧಿಸಬೇಕಾಗಿ ಆಗ್ರಹ ಪಡಿಸಿದರು.
ಅಧ್ಯಕ್ಷತೆ ವಹಿಸಿದ ಕಾಲೇಜಿನ ಮುಖ್ಯೋಪಾಧ್ಯಾಯರಾದ ಸತೀಶ್ ರವರು ಅಂತರಾಷ್ಟ್ರೀಯ ಷಡ್ಯಂತ್ರದಿಂದ ನಮ್ಮ ದೇಶದ ಒಳಗಡೆ ಯುವಕರಿಗೆ ಮಾದಕ ವಸ್ತುಗಳನ್ನು ಸರಬರಾಜು ಮಾಡಲಾಗುತ್ತಿದೆ. ನಮ್ಮ ದೇಶವನ್ನು ದುರ್ಬಲಗೊಳಿಸುವ ಹುನ್ನಾರ ಇದರಲ್ಲಿ ಅಡಗಿದೆ. ಇದು ದೇಶಕ್ಕೆ ಆತಂಕಕಾರಿ ವಿಷಯ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಗ್ರಾಮಾಭಿವೃದ್ಧಿ ಯೋಜನೆಯ ಸುದರ್ಶನ್, ಸುರೇಶ್, ಕೀರ್ತಿ ಜೈನ್ , ಸುಜಯ, ಮಹೇಶ್ ಉಪಸ್ಥಿತರಿದ್ದರು.