ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಚಿಕ್ಕಮಗಳೂರು ಜಿಲ್ಲಾಸ್ಪತ್ರೆಯಿಂದ ಎಸ್ಕೇಪ್ ಆಗಿದ್ದ ರೌಡಿ ಶೀಟರ್ ಆರೋಪಿ ಎಂ ಕೆ ಪೂರ್ಣೇಶ್ ಇಂದು ಬೆಳಿಗ್ಗೆ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಹಲವು ಪ್ರಕರಣಗಳಲ್ಲಿ ಆರೋಪಿಯಾಗಿದ್ದ ರೌಡಿಶೀಟರ್ ಪೂರ್ಣೇಶ್ ಕಳೆದ ನವೆಂಬರ್ ನಲ್ಲಿ ಬಾಳೆಹೊನ್ನೂರು ಠಾಣಾ ವ್ಯಾಪ್ತಿಯ ತನ್ನ ಮನೆಯಲ್ಲಿರೋ ಖಚಿತ ಮಾಹಿತಿ ಮೇರೆಗೆ ಬಂಧಿಸಲು ಹೋದಾಗ ಪೊಲೀಸರ ಮೇಲೆ ದಾಳಿ ಮಾಡಲು ಮುಂದಾದಾಗ, ಆತನ ಕಾಲಿಗೆ ಪೊಲೀಸರು ಗುಂಡು ಹಾರಿಸಿ ಅರೆಸ್ಟ್ ಮಾಡಿದ್ದರು. ಈ ಘಟನೆಯಲ್ಲಿ ಪೂರ್ಣೇಶ್ ಬಲಗಾಲಿಗೆ ಗುಂಡು ತಗಲಿದ್ದು ಚಿಕ್ಕಮಗಳೂರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಮೊನ್ನೆ ಚಿಕ್ಕಮಗಳೂರು ನಗರದ ಮಲ್ಲೇಗೌಡ ಆಸ್ಪತ್ರೆಯಿಂದ ಬೆಳ್ಳಂಬೆಳಗ್ಗೆ ಪೂರ್ಣೇಶ್ ಎಸ್ಕೇಪ್ ಆಗಿದ್ದ.
ಎಸ್ಕೇಪ್ ಆಗಿದ್ದ ಆರೋಪಿ ಪೂರ್ಣೇಶ್ ಪತ್ತೆಗಾಗಿ ಪೊಲೀಸರು ತೀವ್ರ ಶೋಧ ನಡೆಸಿ ಮತ್ತೆ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಮಂಗಳವಾರ ಬೆಳಗಿನ ಜಾವ ಬಾಳೆಹೊನ್ನೂರು ಠಾಣಾ ವ್ಯಾಪ್ತಿಯ ಮಾಗಲ ಬ್ರಿಡ್ಜ್ ಕಡೆಯಿಂದ ಮಾಗಲ ಬಸ್ ನಿಲ್ದಾಣದ ಕಡೆ ಬರುತ್ತಿರುವಾಗ ಆತ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಇನ್ನು ಈ ಕಾರ್ಯಾಚಾರಣೆಯಲ್ಲಿ ಬಾಳೆಹೊನ್ನೂರು ಠಾಣೆ ಪಿಎಸೈ ದಿಲೀಪ್ ಕುಮಾರ್, ಜಯಪುರ ಠಾಣೆ ಪಿಎಸೈ ಗುರು ಎ ಸಜ್ಜನ್ ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು.