ಮಕ್ಕಳಲ್ಲಿ ಸ್ವಂತಿಕೆ ಮತ್ತು ಸೃಜನಶೀಲತೆಯನ್ನು ಬೆಳೆಸುವ ನಿಟ್ಟಿನಲ್ಲಿ ಪೋಷಕರು ಅವರಿಗೆ ಮನೆಯಲ್ಲಿ ಕಥೆ ಹೇಳುವುದು ಹಾಡು ಹಾಡುವುದು ನೃತ್ಯ ಮಾಡುವುದು ವಾದ್ಯ ನುಡಿಸುವುದು ಆಟೋಟಗಳಲ್ಲಿ ಪಾಲ್ಗೊಳ್ಳುವುದನ್ನು ಪ್ರತಿನಿತ್ಯ ಕಲಿಸಬೇಕು ಎಂದು ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ ಅಂಬಳಿಕೆ ಹಿರಿಯಣ್ಣ ಸಲಹೆ ಮಾಡಿದರು
ನಗರದ ಕುವೆಂಪು ಕಲಾಮಂದಿರದಲ್ಲಿ ಭಾನುವಾರ ನಡೆದ ಓಣಿ ಮನೆ ಪ್ರಕಾಶನದ 25ನೇ ಸಂಭ್ರಮೋತ್ಸವ ಕಾರ್ಯಕ್ರಮದಲ್ಲಿ ಸಾಹಿತಿ ಮೇಕನ ಗದ್ದೆ ಲಕ್ಷ್ಮಣಗೌಡರು ಬರೆದಿರುವ ಪುಸ್ತಕಗಳನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು
ಬದಲಾದ ವಿದ್ಯಮಾನಗಳಿಂದಾಗಿ ನಾವೆಲ್ಲಾ ಇಂದು ಒಂದು ರೀತಿಯ ಕೃತ್ರಿಮವಾದ ಬದುಕನ್ನು ಬದುಕುತ್ತಿದ್ದೇವೆ ವಿಸ್ಮ್ರತಿಗೊಳಗಾಗಿ ನಮ್ಮ ಪರಂಪರೆಯನ್ನು ಸಾಂಪ್ರದಾಯಿಕ ವಿಜ್ಞಾನವನ್ನು ಮರೆಯುತ್ತಿದ್ದೇವೆ ನಮ್ಮ ಮಕ್ಕಳು ಪುಸ್ತಕದ ಹುಳುಗಳಾಗಿವೆ ಅಂಕ ಗಳಿಸುವ ಯಂತ್ರಗಳಾಗಿವೆ ಎಂದು ವಿಷಾದಿಸಿದರು
ತಂದೆ ತಾಯಿ ಅಜ್ಜ ಅಜ್ಜಿ ಮನೆಯಲ್ಲಿ ತಮ್ಮ ಮಕ್ಕಳಿಗೆ ಕಥೆ ಹೇಳುವುದು ಹಾಡು ಹಾಡುವುದು ನೃತ್ಯ ಮಾಡುವುದು ವಾದ್ಯ ನುಡಿಸುವುದು ಆಟೋಟಗಳಲ್ಲಿ ಪಾಲ್ಗೊಳ್ಳುವುದನ್ನು ನಿರಂತರವಾಗಿ ಕಲಿಸಿದರೆ ಮಾತ್ರ ಮಕ್ಕಳು ಸ್ವಂತಿಕೆ ಬೆಳೆಸಿಕೊಳ್ಳುತ್ತಾರೆ ಸೃಜನಶೀಲರಾಗುತ್ತಾರೆ ಮಾನಸಿಕ ದೈಹಿಕವಾಗಿ ಸದೃಢರಾಗುತ್ತಾರೆ ಎಂದು ಕಿವಿ ಮಾತು ಹೇಳಿದರು. ಮೇಕನಗದ್ದೆ ಲಕ್ಷ್ಮಣಗೌಡರು ಸಾಹಿತಿಯಾಗಿ ಸಂಶೋಧಕರಾಗಿ ಲೇಖಕರಾಗಿ ಬೆಳೆದಿರುವುದು ಮಲೆನಾಡಿಗೆ ಹೆಮ್ಮೆಯ ಸಂಗತಿಯಾಗಿದೆ ಲಕ್ಷ್ಮಣಗೌಡರು ರಾಷ್ಟ್ರಕವಿ ಕುವೆಂಪು ಮತ್ತು ಸಾಹಿತಿ ಪೂರ್ಣಚಂದ್ರ ತೇಜಸ್ವಿ ಯವರಿಂದ ಪ್ರಭಾವಿತರಾಗಿದ್ದು ತಮ್ಮ ಬರಹಗಳಲ್ಲಿ ಅದರ ಚಾಪನ್ನು ಮೂಡಿಸುತ್ತಿದ್ದಾರೆ ಎಂದು ಶ್ಲಾಘಿಸಿದರು
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಆಶಾಕಿರಣ ಅಂಧ ಮಕ್ಕಳ ಶಾಲೆಯ ಅಧ್ಯಕ್ಷ ಡಾ ಜೆಪಿ ಕೃಷ್ಣೇಗೌಡ ಪುಸ್ತಕಗಳನ್ನು ಓದುವುದರಿಂದ ಮಸ್ತಕ ಬೆಳೆಯುತ್ತದೆ ನಮ್ಮ ಜ್ಞಾನ ವೃದ್ಧಿಸುತ್ತದೆ ಎಂದರು
ಸಾಹಿತಿ ಮೇಕನ ಗದ್ದೆ ಲಕ್ಷ್ಮಣಗೌಡರು ಬರೆದಿರುವ ಏಳು ಪುಸ್ತಕಗಳನ್ನು ಸಮಾರಂಭದಲ್ಲಿ ಲೋಕಾರ್ಪಣೆ ಮಾಡಲಾಯಿತು ವಿವಿಧ ಸಂಘ ಸಂಸ್ಥೆಗಳ ಮುಖಂಡರು ಅಭಿಮಾನಿಗಳು ಲಕ್ಷ್ಮಣ ಗೌಡರನ್ನು ಸನ್ಮಾನಿಸಿ ಅಭಿನಂದಿಸಿದರು
ಸನ್ಮಾನ ಸ್ವೀಕರಿಸಿ ಮಾತನಾಡಿದ ಮೇಕನ ಗದ್ದೆ ಲಕ್ಷ್ಮಣಗೌಡ ತಾವು ಸಾಹಿತಿಯಾಗಿ ಲೇಖಕರಾಗಿ ಸಂಶೋಧಕರಾಗಿ ಬೆಳೆಯಲು ಬೆನ್ನೆಲುಬಾಗಿ ನಿಂತು ಪ್ರೋತ್ಸಾಹಿಸಿ ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸಿದರು
ಓಣಿ ಮನೆ ಪ್ರಕಾಶನದ ಮಹಾ ಪೋಷಕ ಎಂ ಬಿ ಲಕ್ಷ್ಮಣ ಅಧ್ಯಕ್ಷತೆ ವಹಿಸಿದ್ದರು ಅಂತರಾಷ್ಟ್ರೀಯ ಕನ್ನಡ ಸಂಘಟನೆಗಳ ಒಕ್ಕೂಟದ ಸಂಚಾಲಕ ವಿಎಂ ಕುಮಾರಸ್ವಾಮಿ, ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಡ್ಡಿಕೆರೆ ಗೋಪಾಲ್, ಜಿಲ್ಲಾ ಕ ಸಾ ಪ ಅಧ್ಯಕ್ಷ ಸೂರಿ ಶ್ರೀನಿವಾಸ್ ಸಾಹಿತಿ ಡಾ ಎಂ ಪಿ ಮಂಜಪ್ಪ ಶೆಟ್ಟಿ ಮಸಗಲಿ ಸಾಹಿತಿ ಭಾಷಾಂತರಕಾರ ಡಾ ಡಿ.ಎಸ್ ಜಯಪ್ಪಗೌಡ, ನಿವೃತ್ತ ಶಾಸನ ತಜ್ಞ ಹೆಚ್ಎಂ ನಾಗರಾಜ ರಾವ್, ತಾಲೂಕು ಕಸಾಪ ಅಧ್ಯಕ್ಷ ಬಿಸಲೇಹಳ್ಳಿ ಸೋಮಶೇಖರ್, ಇಂಜಿನಿಯರ್ ಅರವಿಂದ ಗೌಡ, ಆಶಾಕಿರಣ ಅಂದ ಮಕ್ಕಳ ಶಾಲೆಯ ಪ್ರಾಂಶುಪಾಲ ಲಕ್ಷ್ಮೇ ಗೌಡ ಉಪಸ್ಥಿತರಿದ್ದರು.
ಲೋಕಾರ್ಪಣೆಯಾದ ಲಕ್ಷ್ಮಣಗೌಡರ ಕೃತಿಗಳು
- ಸ್ವಾತಂತ್ರ ಹೋರಾಟಗಾರ ಮಾಕೋನಹಳ್ಳಿ ದೊಡ್ಡಪ್ಪಗೌಡರು
- ಕತೆ ಹೇಳುತ್ತಿವೆ ಕಲ್ಲುಗಳು
- ನಮ್ಮ ನಡುವೆ ಕಳೆದು ಹೋದ ಕಥೆಗಳು
- ಕಲಿಯೋಣ ಬಾರಾ
- ಬಾಯರುಚಿ ಬಣ್ಣದ ಉಡುಗೆ
- ಬೆಳದಿಂಗಳ ಬಾಲೆ
- ಊರುಬಗೆ ಸಾವಿರ (ಮರುಮುದ್ರಣ)