ಮಳಲೂರು ಏತ ನೀರಾವರಿ ಯೋಜನೆ ನೆನೆಗುದಿಗೆ ಬಿದ್ದಿರುವುದನ್ನು ವಿರೋಧಿಸಿ ಮುಂಬರುವ ಲೋಕಸಭಾ ಚುನಾವಣೆ ಬಹಿಷ್ಕರಿಸುವುದಾಗಿ ಮತ್ತು ಶಾಸಕಿ ನಯನ ಮೋಟಮ್ಮ ಮನೆಯೆದುರು ಧರಣಿ ನಡೆಸುವುದಾಗಿ ಕರ್ನಾಟಕ ರೈತ ಸಂಘ ಎಚ್ಚರಿಸಿದೆ.
ಎರಡೂವರೆ ದಶಕ ಕಳೆದರೂ ಇನ್ನೂ ಮುಗಿಯದ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಮಳಲೂರು ಏತ ನೀರಾವರಿ ಕಾಮಗಾರಿ ಪೂರ್ಣಗೊಂಡಿಲ್ಲ. ಇದು ಮಳಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಮೀನುಗಳಿಗೆ ನೀರು ಒದಗಿಸೋ ಮಹತ್ವಾಕಾಂಕ್ಷೆ ಯೋಜನೆ . 1998ರಲ್ಲಿ ಈ ಯೋಜನೆಗೆ ಚಾಲನೆ ಸಿಕ್ಕಿದೆ. ಸುಮಾರು 1480 ಎಕರೆ ಪ್ರದೇಶಕ್ಕೆ ನೀರೋದಗಿಸುವ ಈ ಏತ ನೀರಾವರಿ ಯೋಜನೆಯ ಮೊದಲ ಹಂತದಲ್ಲಿ ಜಾಕ್ವೆಲ್, ಇಂಟೆಕ್ವೆಲ್, ಪೈಪ್ಗಳ ಅಳವಡಿಕೆ ಮಾಡಲಾಗಿತ್ತು. 2ನೇ ಹಂತದಲ್ಲಿ ಪಂಪ್ ಅಳವಡಿಕೆ, ವಿದ್ಯುತ್ ಕಾಮಗಾರಿ ಕೂಡ ನಡೆದಿದೆ. ಈ ಯೋಜನೆಗಾಗಿ ಇಲ್ಲಿನ ರೈತರು ಕೃಷಿ ಜಮೀನುಗಳನ್ನ ನೀಡಿದ್ದಾರೆ. ಆದ್ರೆ, ಕೆಲ ರೈತರಿಗೆ ಸರ್ಕಾರದಿಂದ ಇನ್ನೂ ಪರಿಹಾರ ಬಂದಿಲ್ಲ.
ಇದರ ಜೊತೆಗೆ ಮಳಲೂರು, ಕಂಬಿಹಳ್ಳಿ, ತಡರೂರು, ಕದ್ರಿಮಿದ್ರಿ ಗ್ರಾಮದ 19 ಎಕರೆ 7 ಗುಂಟೆ ಭೂಮಿಯನ್ನ ಜಿಲ್ಲಾಡಳಿತ ಸ್ವಾಧೀನ ಪಡಿಸಿಕೊಂಡಿದೆ. ಆದ್ರೆ, ಸರ್ಕಾರ ಬಹುತೇಕ ರೈತರಿಗೆ ಭೂಮಿ ನೀಡಿದ್ರು ಪರಿಹಾರ ನೀಡಿಲ್ಲ. ಪರಿಹಾರಕ್ಕಾಗಿ ರೈತರು ಕಾವೇರಿ ನಿಗಮದ ಕಚೇರಿಗೆ ಅಲೆದು ಸುಸ್ತಾಗಿದ್ದಾರೆ ವಿನಃ ಪರಿಹಾರ ಮಾತ್ರ ಬಂದಿಲ್ಲ. ಇದರ ಜೊತೆಗೆ ಯೋಜನೆಗಾಗಿ ಕೋಟ್ಯಾಂತರ ರೂಪಾಯಿ ಹಣ ವ್ಯಯ ಮಾಡಲಾಗಿದೆ. ಆದ್ರೆ, ಪಂಪ್ ಹೌಸ್ ಹಾಗೂ ಮೋಟರ್ ಗಳ ಸುತ್ತ ಗಿಡ ಬೆಳೆದು ತುಕ್ಕು ಹಿಡಿಯುತ್ತಿದೆ. ಸಾವಿರಾರು ಎಕರೆ ಭೂಮಿಯನ್ನ ಹಸಿರಾಗಿಸುವ ಈ ಯೋಜನೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ನೆನೆಗುದಿಗೆ ಬಿದ್ದಿದೆ. ಈ ಭಾಗದ ರೈತರಿಗೆ ಅನ್ನ ನೀಡಿ ಆದಾಯ ಹೆಚ್ಚಿಸುವ ಈ ಯೋಜನೆ ಇನ್ನೆಷ್ಟು ಶಾಸಕರು ಹಾಗೂ ಸರ್ಕಾರವನ್ನ ಕಾಣಬೇಕೋ ಗೊತ್ತಿಲ್ಲ ಎಂದು ರೈತರು ಆಕ್ರೋಶ ಹೊರಹಾಕಿದ್ದಾರೆ.
ಒಂದು ತಿಂಗಳು ಗಡುವು: ಕಳೆದ 25 ವರ್ಷಗಳಿಂದ 7 ಶಾಸಕರು ಆಯ್ಕೆ ಆಗಿದ್ದಾರೆ, ಪ್ರಸ್ತುತ ಗೆದ್ದಿರುವ ಮೂಡಿಗೆರೆ ಕ್ಷೇತ್ರದ ಶಾಸಕಿ ನಯನ ಮೋಟಮ್ಮ ಅವರು ಸಹ ಮಳಲೂರು ಏತ ನೀರಾವರಿ ಯೋಜನೆ ಪೂರ್ಣಗೊಳಿಸುವ ಭರವಸೆ ನೀಡಿ ಮತ ಕೇಳಿದ್ದಾರೆ. ಆದರೆ ಅವರು ಅಧಿಕಾರಕ್ಕೆ ಬಂದು ವರ್ಷವಾಗುತ್ತಾ ಬಂದರೂ ಯೋಜನೆಯ ಕಾಮಗಾರಿ ಮಾತ್ರ ಅಲ್ಲೇ ನಿಂತಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಬೇಸರ ವ್ಯಕ್ತಪಡಿಸಿದೆ.
ಒಂದು ತಿಂಗಳು ಗಡುವು ನೀಡಿರುವ ರೈತ ಮುಖಂಡರು ಅಷ್ಟರೊಳಗೆ ಬಾಕಿ ಕಾಮಗಾರಿ ಕೈಗೆತ್ತಿಕೊಳ್ಳದಿದ್ದರೆ ಮೂಡಿಗೆರೆ ಶಾಸಕಿ ನಯನ ಮೋಟಮ್ಮ ಮನೆ ಮುಂದೆ ಅನಿರ್ದಿಷ್ಟವಾಗಿ ಚಳುವಳಿ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.
ಮುಂಬರುವ ಲೋಕಸಭಾ ಚುನಾವಣೆಗೆ ಮತ ಕೇಳಲು ಬಂದರೆ ಚೀಮಾರಿ ಹಾಕುತ್ತೇವೆ ಮತದಾನ ಬಹಿಷ್ಕಾರ ಹಾಕುತ್ತೇವೆ ಎಂದು ರೈತ ಸಂಘದ ರಾಜ್ಯ ಪದಾಧಿಕಾರಿ ಕೃಷ್ಣೇಗೌಡ ಎಚ್ಚರಿಕೆ ನೀಡಿದ್ದಾರೆ. ಮಳಲೂರು ಏತ ನೀರಾವರಿ ಕಾಮಗಾರಿ ಜಾರಿಯಿಂದ ಭೂಮಿ ಕಳೆದುಕೊಂಡವರಿಗೆ ಇನ್ನೂ ಪರಿಹಾರ ಕೊಟ್ಟಿಲ್ಲ, ಜಮೀನು ಹದಗೆಟ್ಟು ಹೋಗಿದೆ, ಮಾನವೀಯತೆ ಇಲ್ಲದ ರಾಜಕಾರಣಿಗಳು ನಮ್ಮ ಮಕ್ಕಳು ನಗರಕ್ಕೆ ಹೋಗಿ ಹೊಟೆಲ್ ಗಳಲ್ಲಿ ಲೋಟ ತೊಳೆಯುವಂತೆ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಳಲೂರು ಗ್ರಾಮದ ಏತ ನೀರಾವರಿ ಯೋಜನೆಗಾಗಿ ರೈತರು ತಮ್ಮ ಕೃಷಿ ಭೂಮಿಯನ್ನ ಸರ್ಕಾರಕ್ಕೆ ನೀಡಿದ್ದರು. ರೈತರು ಭೂಮಿ ನೀಡಿ ಸುಮಾರು ಒಂದು ದಶಕವೇ ಕಳೆದಿದೆ. ಆದರೆ, ಅರ್ಧಂಬರ್ಧ ರೈತರಿಗೆ ಪರಿಹಾರ ನೀಡಿದ ಸರ್ಕಾರ ಬಹುತೇಕರಿಗೆ ಪರಿಹಾರ ನೀಡಿಲ್ಲ. ಬದಲಿ ಭೂಮಿಯೂ ಇಲ್ಲ. ಹಾಗಾಗಿ, ಕಳೆದೊಂದು ದಶಕದಿಂದ ಪರಿಹಾರಕ್ಕಾಗಿ ಕಚೇರಿಗಳಿಗೆ ಅಲೆದು ಸುಸ್ತಾದ ರೈತರು 2023ರ ಜನವರಿಯಲ್ಲಿ ದಯಾಮರಣಕ್ಕೆ ರಾಷ್ಟ್ರಪತಿಗೆ ಪತ್ರ ಬರೆದಿದ್ದರು.