ತಮ್ಮ ಮನವಿಗೆ ಸರ್ಕಾರಿ ಅಧಿಕಾರಿಗಳು ಸ್ಪಂದಿಸದ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಜಿಲ್ಲಾಧಿಕಾರಿ ಕಚೇರಿಯ ಮಹಾತ್ಮ ಗಾಂಧಿ ಪ್ರತಿಮೆಗೆ ರೈತ ಸಂಘದ ಮುಖಂಡ ಮನವಿಯನ್ನು ಸಲ್ಲಿಸಲು ಮುಂದಾದ ಅಪರೂಪದ ಘಟನೆಗೆ ಚಿಕ್ಕಮಗಳೂರ ಜಿಲ್ಲಾಧಿಕಾರಿಗಳ ಕಛೇರಿ ಸಾಕ್ಷಿಯಾಯಿತು.
ಚಿಕ್ಕಮಗಳೂರು ಜಿಲ್ಲೆಯ ಜಿಲ್ಲಾಧಿಕಾರಿ ಕಛೇರಿ ಆವರಣದ ಒಳಗೆ ಇರುವ ರಾಷ್ಟ್ರಪಿತಾ ಮಹಾತ್ಮ ಗಾಂಧಿ ಪ್ರತಿಮೆಗೆ ರಾಜ್ಯ ರೈತ ಸಂಘದ ಉಪಾಧ್ಯಕ್ಷ ಎಂ. ಮಂಜುನಾಥ್ ಗೌಡ ಮನವಿ ಸಲ್ಲಿಸಿದ್ದಾರೆ.
ಕಂದಾಯ ಇಲಾಖೆಯ ಪಹಣಿ ತಿದ್ದುಪಡಿ ಬಗ್ಗೆ ಹಲವು ಬಾರಿ ಮನವಿ ಸಲ್ಲಿಸಿದರು ಕ್ಯಾರೇ ಎನ್ನದ ಜಿಲ್ಲಾಡಳಿತದ ಬಗ್ಗೆ ಅಸಮಾಧಾನಗೊಂಡ ರೈತ ಮುಖಂಡ ಮಂಜುನಾಥ್ ಗೌಡ ಚಿಕ್ಕಮಗಳೂರು ಜಿಲ್ಲಾಧಿಕಾರಿ ಕಚೇರಿ ಒಳಗಿರುವ ರಾಷ್ಟ್ರಪಿತಾ ಮಹಾತ್ಮ ಗಾಂಧೀಜಿ ಪ್ರತಿಮೆಗೆ ಮನವಿ ಪತ್ರ ಸಲ್ಲಿಸಿದ್ದಾರೆ. ಆದರೆ ಗಾಂಧೀಜಿ ಪ್ರತಿಮೆ ಬಳಿ ತೆರಳಲು ಮಂಜುನಾಥ್ ಅವರಿಗೆ ಪೊಲೀಸರು ಅವಕಾಶ ಕೊಡದ ಕಾರಣ ಕೆಲಕಾಲ ಗೊಂದಲದ ವಾತಾವರಣ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ನಡೆಯಿತು. ಕೊನೆಗೆ ಕೆಲಕಾಲ ಗಾಂಧಿ ಪ್ರತಿಮೆ ಬಳಿ ನಿಂತು ಸಾಂಕೇತಿಕವಾಗಿ ಪ್ರತಿಭಟನೆ ಮಾಡಲು ಅನುವು ಮಾಡಿಕೊಡಲಾಯಿತು.
ಈ ವೇಳೆ ಮಾತನಾಡಿದ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಮಂಜುನಾಥ್ ಗೌಡ ಕಂದಾಯ ಸಚಿವ ಕೃಷ್ಣ ಬೈರೇಗೌಡ ಪಹಣಿ ದೋಷಮುಕ್ತ ರಾಜ್ಯ ಮಾಡುತ್ತೆವೆ ಎನ್ನುತ್ತಾರೆ ಆದರೆ ಅದು ಸಾಧ್ಯವಿಲ್ಲ, ಅಧಿಕಾರಿಗಳು ಅದಕ್ಕೆ ಬಿಡುವುದಿಲ್ಲ ಎಂದರು. ರಾಜ್ಯ ಸರ್ಕಾರದ ಜನತಾದರ್ಶನ ಒಂದು ಬೋಗಸ್ ಕಾರ್ಯಕ್ರಮ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಪ್ರತಿಭಟನೆ ನಂತರ ಹೆಚ್ಚುವರಿ ಜಿಲ್ಲಾಧಿಕಾರಿ ನಾರಾಯಣ ಕನಕರಡ್ಡಿ ಮಂಜುನಾಥ್ ಗೌಡ ಅವರಿಂದ ಮನವಿ ಸ್ವೀಕರಿಸಿ ಒಂದು ವಾರದೊಳಗೆ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು.