ಮಂಗಳವಾರ ಸಂಜೆ ಮೂಡಿಗೆರೆ ಬಸ್ ನಿಲ್ದಾಣದಲ್ಲಿ ಯುವಕರ ನಡುವೆ ನಡೆದಿರುವ ಗಲಾಟೆ ಪ್ರಕರಣದಲ್ಲಿ ಎರಡೂ ಕಡೆಯಿಂದ ದೂರು ದಾಖಲಿಸಲಾಗಿದೆ.
ಅನ್ಯಕೋಮಿನ ಯುವಕರ ನಡುವೆ ನಡೆದಿದ್ದ ಗಲಾಟೆಯಿಂದ ಪಟ್ಟಣದಲ್ಲಿ ಕೆಲ ಕಾಲ ಬಿಗುವಿನ ವಾತಾವರಣ ಸೃಷ್ಟಿಯಾಗಿತ್ತು. ತಕ್ಷಣ ಎಚ್ಚೆತ್ತುಕೊಂಡ ಪೊಲೀಸರು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದು, ಮೂಡಿಗೆರೆ ಪಟ್ಟಣದಲ್ಲಿ ಹೆಚ್ಚುವರಿ ಪೊಲೀಸ್ ನಿಯೋಜಿಸಲಾಗಿದೆ.
ಮಂಗಳವಾರ ಮೂಡಿಗೆರೆ ಬಸ್ ನಿಲ್ದಾಣದಲ್ಲಿ ಹಿಂದೂ ಹುಡುಗಿಯರಿಗೆ ಬಣಕಲ್ ಮೂಲದ ಮುಸ್ಲಿಂ ಯುವಕ ಮುನಾಜ್ ಎಂಬಾತ ಚಾಕಲೇಟ್ ನೀಡಿದ್ದ ಎಂಬ ವಿಚಾರವಾಗಿ ಎರಡು ಕೋಮಿನ ಯುವಕರ ನಡುವೆ ಗಲಾಟೆ ನಡೆದಿತ್ತು. ಬಸ್ ನಿಲ್ದಾಣ ಆವರಣದಲ್ಲಿಯೇ ಯುವಕರು ಪರಸ್ಪರ ಹೊಡೆದಾಡಿಕೊಂಡಿದ್ದರು. ಕಾರಿನಲ್ಲಿ ಬಂದ ಯುವಕರ ಗುಂಪೊಂದು ಮುನಾಜ್ ನ ಮೇಲೆ ಹಲ್ಲೆ ನಡೆಸಿದ್ದರು ಎಂದು ಆರೋಪಿಸಲಾಗಿತ್ತು. ತಕ್ಷಣ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಯುವಕರ ಗುಂಪು ಚದುರಿ ಹೋಗಿತ್ತು. ಈ ಬಗ್ಗೆ ಸಿ.ಸಿ.ಕ್ಯಾಮರದಲ್ಲಿಯೂ ಗಲಾಟೆ ದೃಶ್ಯ ದಾಖಲಾಗಿತ್ತು. ಆ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.
ಬಸ್ ಸ್ಟ್ಯಾಂಡ್ ನಲ್ಲಿ ಬಸ್ಸಿಗಾಗಿ ಕಾದು ನಿಂತಿದ್ದ ನನ್ನ ಮೇಲೆ ಯುವಕರ ಗುಂಪೊಂದು ಅನಾವಶ್ಯಕವಾಗಿ ಹಲ್ಲೆ ಮಾಡಿದ್ದಾರೆ ಎಂದು ಮುನಾಜ್ ಮೂಡಿಗೆರೆ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರತಿಯಾಗಿ ಮೂಡಿಗೆರೆ ಪಟ್ಟಣದ ಅನಿಲ್ ಪೂಜಾರಿ ಪ್ರತಿದೂರು ನೀಡಿದ್ದು, ಬಸ್ ಸ್ಟ್ಯಾಂಡ್ ನಲ್ಲಿ ಕಾಲೇಜು ವಿದ್ಯಾರ್ಥಿನಿಯರಿಗೆ ಚಾಕಲೇಟ್ ನೀಡುತ್ತಿದ್ದುದನ್ನು ಪ್ರಶ್ನಿಸಿ ಬುದ್ಧಿ ಹೇಳಿದುದ್ದಕ್ಕೆ ನನ್ನ ಮೇಲೆ ಮುನಾಜ್ ಮತ್ತು ಇತರ ಇಬ್ಬರು ಯುವಕರು ಹಲ್ಲೆ ನಡೆಸಿದ್ದಾರೆ ಎಂದು ದೂರು ನೀಡಿದ್ದಾರೆ.
ಪ್ರಕರಣ ಕೋಮು ಬಣ್ಣ ಪಡೆಯುವ ಮುನ್ನ ಪೊಲೀಸರು ಎಚ್ಚೆತ್ತುಕೊಂಡು ಮುಂಜಾಗ್ರತ ಕ್ರಮ ಜರುಗಿಸಿದ್ದಾರೆ. ಈ ಸಂಬಂಧ ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಐ.ಪಿ.ಸಿ. ಸೆಕ್ಷನ್ 143, 144, 148, 149, 324, 325, 504, 506 ರ ಅಡಿ ಪ್ರಕರಣ ದಾಖಲಿಸಲಾಗಿದೆ. ಪಟ್ಟಣಕ್ಕೆ ಹೆಚ್ಚವರಿ ಪೊಲೀಸ್ ವ್ಯಾನ್ ತರಿಸಿ ಬಸ್ ಸ್ಟ್ಯಾಂಡ್ ಸಮೀಪ ನಿಯೋಜಿಸಲಾಗಿದೆ.
ಬಸ್ ಸ್ಟ್ಯಾಂಡ್ ಬಳಿ ಪಡ್ಡೆ ಹುಡುಗರ ಹಾವಳಿ
ಮೂಡಿಗೆರೆ ಬಸ್ ಸ್ಟ್ಯಾಂಡ್ ಸಮೀಪ ಪಡ್ಡೆ ಹುಡುಗರ ಹಾವಳಿ ಹೆಜ್ಜಾಗಿದ್ದು ಇಂತಹ ಘಟನೆ ನಡೆಯಲು ಕಾರಣವಾಗಿದೆ ಎನ್ನಲಾಗುತ್ತಿದೆ. ಕೆಲವು ಯುವಕರು ಬಸ್ ಸ್ಟ್ಯಾಂಡ್ ಒಳಗೆ ಮತ್ತು ಹೊರಗೆ ಅನಾವಶ್ಯಕವಾಗಿ ತಿರುಗಾಡುತ್ತಾ ಕಿರಿ ಕಿರಿ ಮಾಡುತ್ತಿರುವ ಬಗ್ಗೆ ಸಾರ್ವಜನಿಕರಿಂದ ಆರೋಪಗಳು ಕೇಳಿಬರುತ್ತಿವೆ. ಬಸ್ ಸ್ಟ್ಯಾಂಡ್ ಸುತ್ತಮುತ್ತ ಅನಾವಶ್ಯಕವಾಗಿ ತಿರುಗಾಡುವ ಪಡ್ಡೆಹುಡುಗರ ಹಾವಳಿ ಹೆಚ್ಚಾಗುತ್ತಿದ್ದು, ಈ ಬಗ್ಗೆ ಪೊಲೀಸ್ ಇಲಾಖೆ ಬಿಗಿ ಕ್ರಮ ಜರುಗಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.