ಅಯೋಧ್ಯೆಯಲ್ಲಿ ಜನವರಿ 22ರಂದು ರಾಮ ಮಂದಿರ ಉದ್ಘಾಟನೆ, ಪ್ರತಿಷ್ಠಾಪನೆ ಪ್ರಯುಕ್ತ ಮೂಡಿಗೆರೆ ತಾಲ್ಲೂಕಿನ ಕೊಟ್ಟಿಗೆಹಾರದ ಸೀತಾರಾಮ ದೇವಸ್ಥಾನದಲ್ಲಿ ರಾಮದೇವರ ಪ್ರತಿಷ್ಠಾಪನೆ ಹಾಗೂ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸೀತಾರಾಮ ದೇವಸ್ಥಾನದ ಅಧ್ಯಕ್ಷ ಟಿ.ಎಂ.ಗಜೇಂದ್ರ ಗೌಡ ತಿಳಿಸಿದ್ದಾರೆ.
ಈ ಬಗ್ಗೆ ಕೊಟ್ಟಿಗೆಹಾರದಲ್ಲಿ ಹೇಳಿಕೆ ನೀಡಿರುವ ಅವರು ಆಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಇರುವುದರಿಂದ ಸರ್ವರಿಗೂ ಅಯೋಧ್ಯೆಗೆ ಹೋಗಲು ಸಾಧ್ಯವಾಗದೇ ಇರುವುದರಿಂದ ರಾಮ ಭಕ್ತರು ಎಲ್ಲರೂ ಒಗ್ಗಟ್ಟಿನಿಂದ ಸ್ಥಳೀಯ ಸೀತಾರಾಮ ದೇವಸ್ಥಾನದಲ್ಲಿ ರಾಮ ಜಪ, ಅನ್ನದಾನ,ಹೋಮ ಹವನಗಳನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ. ಈ ಅನ್ನದಾನ ಮತ್ತಿತರ ಪೂಜಾ ಕಾರ್ಯಕ್ಕೆ ಜನವರಿ 19, 20 ರ ಒಳಗಾಗಿ ಹೊರೆಕಾಣಿಕೆ ಹಾಗೂ ಅನ್ನದಾನಕ್ಕೆ ನೀಡುವ ಅಕ್ಕಿ ಮತ್ತಿತರ ವಸ್ತುಗಳನ್ನು ನೀಡಿ ಅಯೋಧ್ಯೆಯಲ್ಲಿ ನಡೆಯುವ ರಾಮನ ಪ್ರತಿಷ್ಠಾಪನೆಯ ಕಾರ್ಯ ಇಲ್ಲಿಯೂ ಸಂಭ್ರಮದಿಂದ ನಡೆಸಲು ಸಹಕರಿಸಬೇಕು ಎಂದರು.
ರಾಮಮಂದಿರ ಉದ್ಘಾಟನೆ ಹಾಗೂ ಪ್ರತಿಷ್ಠಾಪನೆಯ ದಿನದಂದು ಭಕ್ತರೆಲ್ಲರೂ ತಮ್ಮ ಮನೆಯ ಮುಂದೆ ದೀಪ ಬೆಳಗಿಸಿ ರಾಮನ ಕೃಪೆಗೆ ಪಾತ್ರರಾಗಬೇಕು ಮತ್ತು ಅಂದು ಹೆಚ್ಚಿನ ಸಂಖ್ಯೆಯಲ್ಲಿ ಕೊಟ್ಟಿಗೆಹಾರ ಸೀತಾರಾಮ ದೇವಸ್ಥಾನದಲ್ಲಿ ನಡೆಯುವ ಪೂಜಾ ಕಾರ್ಯಕ್ಕೆ ಸರ್ವರೂ ಭಾಗವಹಿಸಬೇಕು ಎಂದರು.
ಈ ಸಂದರ್ಭದಲ್ಲಿ ಟಿ.ಎಂ.ನರೇಂದ್ರ, ಸಂಜಯಗೌಡ, ಟಿ.ಎಂ.ಆದರ್ಶ್, ವಿಕ್ರಮ್ ಗೌಡ, ಅಶೋಕ ಮಲ್ಲಂದೂರು, ವಿನಯ್ ಮತ್ತಿತರರು ಇದ್ದರು.