ಮಾನವ ತನ್ನ ದೇಹ ಶುದ್ಧಿಗೊಳಿಸಿಕೊಳ್ಳುವ ಜತೆಗೆ ಆತ್ಮವನ್ನು ಸ್ವಚ್ಛ ಮಾಡಿಕೊಂಡಾಗ ಉತ್ತಮ ಸಮಾಜ ನಿರ್ಮಾಣಕ್ಕೆ ಸಹಕಾರಿಯಾಗುತ್ತದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಚಿಕ್ಕಮಗಳೂರು ಜಿಲ್ಲಾ ನಿರ್ದೇಶಕ ಪ್ರಕಾಶ್ ರಾವ್ ಹೇಳಿದರು.
ಅವರು ಶುಕ್ರವಾರ ಮೂಡಿಗೆರೆ ಪಟ್ಟಣದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಸಬಾ ವಲಯಗಳ ನೂತನ ಪದಾಧಿಕಾರಿಗಳ ಪದಗ್ರಹಣ ಮತ್ತು ಸಾಮೂಹಿಕ ಸತ್ಯನಾರಾಯಣ ಸ್ವಾಮಿ ಪೂಜೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಮ್ಮದು ಸಂಸ್ಕøತಿಭರಿತವಾದ ದೇಶ. ಎಲ್ಲಾ ಆಚರಣೆಗಳಿಗೂ ಅದರದೇ ಆದ ಮಹತ್ವವಿದೆ. ಹಿಂದೂ ಧರ್ಮದಲ್ಲಿ ಆಚರಿಸುವ ಎಲ್ಲಾ ಪೂಜಾ ಕಾರ್ಯಗಳು ಒಂದೊಂದು ಶಕ್ತಿ. ಪ್ರಸ್ತುತ ಕಾಲಘಟ್ಟದಲ್ಲಿ ಸಂಸ್ಕಾರಗಳು ಮಾಯವಾಗುತ್ತಿದೆ. ಮಹಿಳೆ ಮನೆಯ ಕಣ್ಣು. ಮಕ್ಕಳಿಗೆ ಸಂಸ್ಕಾರವನ್ನು ನೀಡಿದರೆ ಸಮಾಜಕ್ಕೆ ಉತ್ತಮ ಪ್ರಜೆಯಾಗುತ್ತಾರೆ. ಸನಾತನ ಧರ್ಮದಲ್ಲಿ ಸಾವಿರಾರು ವರ್ಷಗಳ ಹಿಂದೆಯೇ ಸೂರ್ಯ ಚಂದ್ರರಿಗೆ ಗ್ರಹಣ ಆಗುವುದು, ಗೋವಿನ ಮೂತ್ರ ಸೇವನೆಯಿಂದ ಕ್ಯಾನ್ಸರ್ ದೂರವಾಗುತ್ತದೆ ಎನ್ನುವಂತ ಮೂಲ ಸತ್ಯ ನಮ್ಮ ಋಷಿ ಮುನಿಗಳು ತಿಳಿಸಿರುವುದನ್ನು ನೆನಪುಮಾಡಿಕೊಳ್ಳಬಹುದು ಎಂದರು.
ಚಿಂತಕ ಜಯರಾಮ್ ಮಾತನಾಡಿ, ಇವತ್ತು ಪೂಜೆ ಎಂಬುದು ಪ್ರದರ್ಶನವಾಗದೆ. ಎಲ್ಲರೂ ಭಕ್ತಿ ಮಾರ್ಗದಲ್ಲಿ ನಡೆಯಬೇಕಾಗಿದೆ. ಭಾರತದಲ್ಲಿ ಮಹಿಳೆಯರನ್ನು ದೈವ ಸ್ವರೂಪಿ ಅಂತ ಕರೆಯುವ ಸಂದರ್ಭದಲ್ಲಿ ಹೆಣ್ಣುಮಕ್ಕಳು ಧರಿಸುವ ವಸ್ತ್ರ ಬದಲಾಗುತ್ತಿದೆ. ಅಲ್ಲದೇ ನಶೆಯಲ್ಲಿ ಮೋಜು ಮಸ್ತಿಯಲ್ಲಿ ತೊಡಗಿಕೊಳ್ಳುತ್ತಿರುವುದು ಅಪಾಯಕಾರಿಯಾಗಿದೆ. ಯುವ ಜನತೆ ದಿಕ್ಕು ತಪ್ಪದಂತೆ ಪೋಷಕರು ನಿಗಾ ವಹಿಸುವುದು ಅಗತ್ಯವಾಗಿದೆ ಎಂದು ಹೇಳಿದರು.
ಕಾರ್ಯಕ್ರಮವನ್ನು ಮಾಜಿ ಸಚಿವೆ ಮೊಟಮ್ಮ ಉದ್ಘಾಟಿಸಿ ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸತ್ಯನಾರಾಯಣ ಪೂಜಾ ಸಮಿತಿ ಅಧ್ಯಕ್ಷ ಟಿ.ಡಿ.ಅರವಿಂದ್ ವಹಿಸಿದ್ದರು. ದೀಪಕ್ ದೊಡ್ಡಯ್ಯ. ಉದ್ಯಮಿ ಕೆ. ಮಂಚೇಗೌಡ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತಾಲ್ಲೂಕು ಅಧಿಕಾರಿ ಶಿವಾನಂದ್, ಎಚ್.ಎಂ.ಶಿವೇಗೌಡ, ದಾಮೋದರ ಮತ್ತಿತರರಿದ್ದರು.