ಕಾಫಿನಾಡಿನಲ್ಲಿ ಕಾಡಾನೆ ದಾಳಿಗೆ ಮತ್ತೊಂದು ಬಲಿಯಾಗಿದೆ. ಕೃಷಿ ಕಾರ್ಮಿಕ ವಸಂತ್ (45) ಎಂಬುವವರು ಕಾಡಾನೆ ದಾಳಿಗೆ ಬಲಿಯಾಗಿದ್ದಾರೆ. ಹಾಸನ ಜಿಲ್ಲೆ ಬೇಲೂರು ತಾಲ್ಲೂಕಿನ ಅರೇಹಳ್ಳಿ ಸಮೀಪದ ಮತ್ತಾವರ ಗ್ರಾಮದಲ್ಲಿ ಗುರುವಾರ ಸಂಜೆ ಈ ದುರ್ಘಟನೆ ನಡೆದಿದೆ.
ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ವಸಂತ್ ಗುರುವಾರ ಸಂಜೆ ಕೆಲಸ ಮುಗಿಸಿ ವಾಪಸ್ ಮನೆಗೆ ಬರುವ ವೇಳೆ ಕಾಡಾನೆ ದಾಳಿ ಮಾಡಿದೆ. ಸ್ಥಳೀಯರ ಪ್ರಕಾರ ಆನೆ ತನ್ನನ್ನು ಅಟ್ಟಿಸಿಕೊಂಡು ಬಂದಾಗ ವಸಂತ್ ಮರವೇರಿ ಕುಳಿತ್ತಿದ್ದು, ಆನೆ ಮರವನ್ನು ಅಲುಗಾಡಿಸಿ ಅವರನ್ನು ಕೆಳಗೆ ಬೀಳಿಸಿ ದಾಳಿ ಮಾಡಿ ಸಾಯಿಸಿದೆ ಎನ್ನಲಾಗಿದೆ.
ಮರವೇರಿ ಕುಳಿತ ವಸಂತ್ ಸಹಾಯಕ್ಕಾಗಿ ಕೂಗಿಕೊಂಡಿದ್ದಾರೆ. ಸ್ಥಳೀಯರು ಆನೆಯನ್ನು ಅಲ್ಲಿಂದ ಓಡಿಸಲು ಪ್ರಯತ್ನ ಮಾಡಿದ್ದಾರೆ. ಜನರ ಬೊಬ್ಬೆಗೆ ಕ್ಯಾರೇ ಎನ್ನದ ಆನೆ ಮರವನ್ನೇರಿ ಕುಳಿತ ವ್ಯಕ್ತಿಯನ್ನು ಕೊಂದೇ ಸ್ಥಳದಿಂದ ತೆರಳುವುದು ಎಂದು ಹಠಕ್ಕೆ ಬಿದ್ದಂತೆ ಮರವನ್ನು ಅಲುಗಾಡಿಸಿದೆ. ಮರ ಬೀಳುವ ಮಟ್ಟಕ್ಕೆ ಅಲುಗಾಡಿಸಿದ್ದರಿಂದ ಹಿಡಿತ ತಪ್ಪಿ ವಸಂತ್ ನೆಲಕ್ಕೆ ಬಿದ್ದಿದ್ದಾರೆ, ಕ್ಷಣ ಮಾತ್ರದಲ್ಲಿ ಅವರ ಮೇಲೆ ದಾಳಿ ಮಾಡಿದ ಆನೆ, ಹೊಟ್ಟೆಯ ಮೇಲೆ ಕಾಲಿಟ್ಟು ತುಳಿದು ಸಾಯಿಸಿದೆ. ಅರಣ್ಯ ಇಲಾಖೆ ಸಿಬ್ಬಂದಿ ಬರುವ ವೇಳೆಗಾಗಲೇ ಅಲ್ಲಿಂದ ಪರಾರಿ ಆಗಿದೆ. ಇನ್ನು ಗ್ರಾಮಸ್ಥರು ವಸಂತ್ ಅವರನ್ನು ರಕ್ಷಣೆ ಮಾಡಬೇಕೆನ್ನುವಷ್ಟರಲ್ಲಿ ಅವರ ಪ್ರಾಣಪಕ್ಷಿ ಹಾರಿ ಹೋಗಿತ್ತು.
ಅರೆಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳೀಯರು ಕಾಡಾನೆ ಹಾವಳಿ ನಿಯಂತ್ರಣ ಮಾಡದ ಅಧಿಕಾರಿಗಳ ವಿರುದ್ದ ಆಕ್ರೋಶ ಹೊರ ಹಾಕಿದ್ದಾರೆ.
ಕಾಫಿನಾಡಿನಲ್ಲಿ ಕಾಡಾನೆಗಳಿಗೆ ಜೀವ ಬಲಿಯಾಗುವುದು ನಿರಂತರವಾಗಿ ನಡೆಯುತ್ತಿದೆ. ಇದೇ ಅರೇಹಳ್ಳಿ ಭಾಗದ ಅಂಕಿಹಳ್ಳಿ ಎಂಬಲ್ಲಿ ಈಗ್ಗೆ ಎರಡು ತಿಂಗಳ ಹಿಂದೆ ಪಶ್ಚಿಮ ಬಂಗಾಳ ಮೂಲದ ಕಾರ್ಮಿಕರೋರ್ವರನ್ನು ಕಾಡಾನೆ ಸಾಯಿಸಿತ್ತು. ಹಾಸನ ಜಿಲ್ಲೆಯ ಸಕಲೇಶಪುರ, ಬೇಲೂರು, ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ, ಆಲ್ದೂರು ಅರಣ್ಯ ವಲಯದಲ್ಲಿ, ಕೊಡಗು ಭಾಗದಲ್ಲಿ ಕಾಡಾನೆ ಹಾವಳಿ ವಿಪರೀತವಾಗಿದೆ. ಕಳೆದ ಮೂರ್ನಾಲ್ಕು ತಿಂಗಳಲ್ಲೀ ಐದಾರು ಮಂದಿ ಕಾಡಾನೆ ದಾಳಿಗೆ ಬಲಿಯಾಗಿದ್ದಾರೆ. ಈಗ್ಗೆ ಕೆಲ ದಿನಗಳ ಹಿಂದೆ ಮೂಡಿಗೆರೆ ಸಮೀಪ ಆನೆ ಕಾರ್ಯಪಡೆ ಸಿಬ್ಬಂದಿ ಕಾರ್ತಿಕ್ ಗೌಡ ಅವರನ್ನು ಕಾಡಾನೆ ದಾಳಿ ಮಾಡಿ ಸಾಯಿಸಿತ್ತು. ಇದೀಗ ಕಾಫಿನಾಡಿನಲ್ಲಿ ಮತ್ತೊಂದು ಜೀವ ಕಾಡಾನೆಗೆ ಬಲಿಯಾಗಿದೆ.