ಹುಟ್ಟಿದ ಮಾರನೇ ದಿನವೇ ನವಜಾತ ಶಿಶುವನ್ನು ಮಾರಾಟ ಮಾಡಿರುವ ಘಟನೆಗೆ ಸಂಬಂಧಿಸಿದಂತೆ ಮಗುವಿನ ತಾಯಿ ಸೇರಿದಂತೆ ಐದು ಜನರನ್ನು ಬಂಧಿಸಲಾಗಿದೆ.
ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನಲ್ಲೀ ಈ ಘಟನೆ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದ್ದು, ಇದೀಗ ಪ್ರಕರಣ ದಾಖಲಿಸಿ ಐದು ಜನರನ್ನು ಅರೆಸ್ಟ್ ಮಾಡಲಾಗಿದೆ.
ಸಕಲೇಶಪುರದ ಬ್ಯಾಕರಹಳ್ಳಿಯಲ್ಲಿ ಒಂದು ದಿನದ ಗುಂಡು ಮಗುವನ್ನ ಮಾರಾಟ ಮಾಡಿದ ಆರೋಪದಡಿ ತಾಯಿ ಗಿರಿಜಾ, ಆಶಾ ಕಾರ್ಯಕರ್ತೆ ಸುಮಿತ್ರಾ, ಮಗು ಖರೀದಿಸಿದ ಮಹಿಳೆ ಉಷಾ, ಶ್ರೀಕಾಂತ್, ಸುಬ್ರಮಣ್ಯ ಎಂಬುವರನ್ನು ಬಂಧಿಸಲಾಗಿದೆ.
2023ರ ನವೆಂಬರ್ 15ರಂದು ಗಿರಿಜಾ ಗಂಡು ಮಗುವಿಗೆ ಜನ್ಮ ನೀಡಿದ್ದರು. ಆದರೆ ತಮಗೆ ಈಗಾಗಲೇ ಇಬ್ಬರು ಮಕ್ಕಳಿರುವುದರಿಂದ ನವೆಂಬರ್ 16ರಂದು ಆಶಾ ಕಾರ್ಯಕರ್ತೆ ಸುಮಿತ್ರಾ ಮೂಲಕ ಚಿಕ್ಕಮಗಳೂರು ಮೂಲದ ಉಷಾ ಎಂಬುವರಿಗೆ ಮಗು ಮಾರಾಟ ಮಾಡಿದ್ದರು.
ಈ ಪ್ರಕರಣವನ್ನು ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಕಾಂತರಾಜ್ ಬಯಲಿಗೆಳೆದಿದ್ದು ಈ ಸಂಬಂಧ ಪ್ರಕರಣ ದಾಖಲಿಸಲಾಗಿದೆ.
ಸುಬ್ರಮಣ್ಯ ಎಂಬುವವರ ತೋಟದಲ್ಲಿ ಕಾರ್ಮಿಕಳಾಗಿ ಕೆಲಸ ಮಾಡುತ್ತಿದ್ದ ಗಿರಿಜಾ ಮಗುವನ್ನು ಮಾರಾಟ ಮಾಡಲು ತೋಟದ ಮಾಲೀಕರು ಮತ್ತು ಅವರ ಪುತ್ರ ಶ್ರೀಕಾಂತ್ ಎಂಬುವವರು ಸಾಥ್ ನೀಡಿದ್ದಾರೆ.
ಈ ಪ್ರಕರಣದಲ್ಲಿ ತಾಯಿ ಮಗುವಿನ ಆರೈಕೆ ಮಾಡಬೇಕಾದ ಆಶಾ ಕಾರ್ಯಕರ್ತೆಯ ಶಾಮೀಲಾಗಿದ್ದು, ಈ ರೀತಿ ಇನ್ನಷ್ಟು ಕೃತ್ಯಗಳನ್ನು ಎಸಗಿರುವ ಸಾಧ್ಯತೆ ಇದೆ ಎನ್ನಲಾಗಿದೆ.