ರಾಮ ಮಂದಿರ ಉದ್ಘಾಟನೆ ಹತ್ತಿರ ಬಂದಂತೆ ರಾಜ್ಯದಲ್ಲಿ ಅನಿರೀಕ್ಷಿತವಾಗಿ ಅಧಿಕಾರ ಹಿಡಿದಿರುವ ಮದದಿಂದಾಗಿ ಕಾಂಗ್ರೆಸ್ ಪಕ್ಷದ ನಾಯಕರಿಗೆ ಶ್ರೀರಾಮನನ್ನು ಪೂಜಿಸುವ ಹಿಂದೂ ಧರ್ಮಿಯರ ಮೇಲೆ ಪ್ರತಿಕಾರ ತೀರಿಸಿಕೊಳ್ಳಲು ಹೊರಟಿರುವುದು ನಿಜಕ್ಕೂ ದೇಶದ ದುರಂತ ಎಂದು ಬಿಜೆಪಿ ತಾಲೂಕು ಅಧ್ಯಕ್ಷ ಜೆ.ಎಸ್.ರಘು ತಿಳಿಸಿದ್ದಾರೆ.
ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶ್ರೀರಾಮನ ಹೆಸರು ಹೇಳುವ ಸಾಮಾನ್ಯ ಹಿಂದುಗಳನ್ನು ಬೆದರಿಸಲಾಗುತ್ತಿದೆ. ಅಲ್ಲಲ್ಲಿ ಕರ ಸೇವಕರ ಮೇಲೆ ಕೇಸುಗಳನ್ನು ದಾಖಲಿಸಲಾಗುತ್ತಿದೆ. ಅಯೋದ್ಯೆಯಲ್ಲಿ ರಾಮ ದೇವಸ್ಥಾನ ಉದ್ಘಾಟನೆ ಸಂದರ್ಭದಲ್ಲಿ ಮನೆ ಮನೆಗೆ ತೆರಳಿ ಮಂತ್ರಾಕ್ಷತೆ ಹಂಚುತ್ತಿರುವರ ಮೇಲು ಬೆದರಿಕೆ ಹಾಕಲಾಗುತ್ತಿದೆ. ಇದು ಜಿಲ್ಲೆ ಸೇರಿದಂತೆ ರಾಜ್ಯದಲ್ಲಿ ನಡೆಯುತ್ತಿದ್ದು, ನಮ್ಮದೆ ತೆರಿಗೆ ಹಣದಲ್ಲಿ ಅಲ್ಪಸಂಖ್ಯಾತರಿಗೆ ವಿಶೇಷ ಅನುಧಾನ ನೀಡಲಾಗುತ್ತಿದೆ.
ಒಂದೆಡೆ ಮುಖ್ಯಮಂತ್ರಿಯೆ ತನ್ನ ಹೆಸರಿನಲ್ಲೇ ರಾಮ ಇದೆ ಎನ್ನುತ್ತಿದ್ದರೆ, ಅವರ ಪುತ್ರ ಯತೀಂದ್ರ ಅವರು ಹಿಂದೂ ದೇಶವಾದರೆ ನಾವು ದಿವಾಳಿಯಾಗುತ್ತೇವೆಂದು ಹೇಳುತ್ತಾ ಸಮಸ್ತ ಹಿಂದೂಗಳಿಗೆ ಅವಮಾನ ಮಾಡುತ್ತಿದ್ದಾರೆ. ಇದನ್ನು ಕಾಂಗ್ರೆಸ್ನ ಯಾವ ನಾಯಕರೂ ಖಂಡಿಸದಿರುವುದು ದುರಂತ.
ಶಾಂತಿ, ಸಹಬಾಳ್ವೆ ಮತ್ತು ಪ್ರೀತಿಯನ್ನು ಹೇಳಿ ಕೊಟ್ಟಿರುವ ಸನಾತನ ಧರ್ಮವನ್ನು ಕೇವಲ ಅಧಿಕಾರಕ್ಕಾಗಿ ತೆಗಳಲು ಹೊರಟಿರುವುದು ನಿಜಕ್ಕೂ ಇವರ ನೈತಿಕ ದಿವಾಳಿಯನ್ನು ತೋರಿಸುತ್ತಿದೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ನಿಮಗೆ ಸಾಮಾನ್ಯ ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ತಿಳಿಸಿದ್ದಾರೆ