ಭೀಮಾ ಕೋರೆಗಾವ್ ವಿಜಯೋತ್ಸವ ಆಚರಣ ಸಮಿತಿ ವತಿಯಿಂದ ಮೂಡಿಗೆರೆ ಪಟ್ಟಣದ ಲಯನ್ಸ್ ವೃತ್ತದಲ್ಲಿ ಜ.5ರಂದು ಸಂಜೆ 4 ಗಂಟೆಗೆ 206ನೇ ಭೀಮಾ ಕೋರೆಗಾವ್ ವಿಜಯೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿ ಅಧ್ಯಕ್ಷ ಸುಂದ್ರೇಶ್ ಕನ್ನಾಪುರ ಹೇಳಿದರು.
ಅವರು ಶುಕ್ರವಾರ ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇತಿಹಾಸ ಮರೆತವರು ಇತಿಹಾಸ ಸೃಷ್ಟಿಸಲಾರರು ಎಂದು ಡಾ.ಬಿ.ಆರ್.ಅಂಬೇಡ್ಕರ್ ಅವರು ಹೇಳಿದ ಹಾಗೆ ಇಂದಿನ ಸ್ಥಿತಿಗತಿಗಳಿಗೆ ಇತಿಹಾಸದ ಕುರುಹುಗಳಿವೆ. ಅದನ್ನು ಹುಡುಕಬೇಕು. ಕಳೆದುಕೊಂಡಿದ್ದನ್ನು ಪುನರ್ ನಿರ್ಮಾಣ ಮಾಡಲು ಇತಿಹಾಸದ ಅರಿವು ಬೇಕು. 205 ವರ್ಷದ ಹಿಂದೆ ನ್ಮಮ ಹಿರಿಯರ ತ್ಯಾಗ, ಬಲಿದಾನ, ಶೌರ್ಯದ ಇತಿಹಾಸವೇ ಭೀಮಾ ಕೋರೆಗಾವ್ ಯುದ್ಧ. ಈ ಬಗ್ಗೆ ಯುವ ಜನಾಂಗಕ್ಕೆ ಅರಿವು ಮೂಡಿಸುವ ಸಲುವಾಗಿ ಭೀಮಾ ಕೋರೆಗಾವ್ ವಿಜಯೋತ್ಸವ ಮೂಡಿಗೆರೆ ಪಟ್ಟಣದಲ್ಲಿ ಆಚರಿಸಲಾಗುತ್ತಿದೆ ಎಂದು ಹೇಳಿದರು.
ಕಾರ್ಯದರ್ಶಿ ಸುಂದ್ರೇಶ್ ಹೊಯ್ಸಳಲು ಮಾತನಾಡಿ, ಕಾರ್ಯಕ್ರಮಕ್ಕೆ ಮೈಸೂರಿನ ನಿವೃತ್ತ ಪ್ರಾಧ್ಯಾಪಕ ಪ್ರೋ.ಮಹೇಶ್ಚಂದ್ರ ಗುರು, ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ, ಖ್ಯಾತ ವಾಗ್ಮಿ ಸುಧೀರ್ಕುಮಾರ್ ಮುರೊಳ್ಳಿ ಆಗಮಿಸಲಿದ್ದಾರೆ. ವಿದ್ಯಾರ್ಥಿಗಳು, ಮಹಿಳೆಯರು ಸೇರಿದಂತೆ ಎಲ್ಲಾ ಪ್ರಗತಿಪರ ಸಂಘಟನೆ ಮುಖಂಡರು, ಸಾರ್ವಜನಿಕರು ಸೇರಿದಂತೆ ಸುಮಾರು ಐದು ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಜನರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಹಾಗಾಗಿ ಸಮಾಜದ ಕಳಕಳಿ ಉಳ್ಳವರು ಅಧಿಕ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಮನವಿ ಮಾಡಿದರು.
ಸಮಿತಿ ಪದಾಧಿಕಾರಿಗಳಾದ ಶ್ರೀಕಾಂತ್ ಹೊರಟಿ, ಹರೀಶ್ ನವಿಲುಕೆರೆ, ಹೆಸಗಲ್ ಗ್ರಾಮದ ಭಾನುಪ್ರಕಾಶ್, ಕಿರಣ್, ಬಿದರಹಳ್ಳಿಯ ಸುಧಾಕರ್, ಪ್ರದೀಪ್, ಗಣೇಶ್ ಮೂಡಿಗೆರೆ ಉಪಸ್ಥಿತರಿದ್ದರು.