ಹೆರಿಗೆ ನೋವು ತೀವ್ರವಾಗಿ ಅಂಬುಲೆನ್ಸ್ ನಲ್ಲೆ ಮಗುವಿಗೆ ಜನನ ನೀಡಿದ ಘಟನೆ ನಡೆದಿದೆ.
ಮೂಡಿಗೆರೆ ತಾಲ್ಲೂಕಿನ ಬೆಳಗೋಡು ಗ್ರಾಮದಿಂದ ಮೂಡಿಗೆರೆ ಎಂ.ಜಿ.ಎಂ. ಆಸ್ಪತ್ರೆಗೆ ಗರ್ಭಿಣಿ ಮಹಿಳೆಯನ್ನು ಕರೆತರುವಾಗ ಗುರುವಾರ ಈ ಘಟನೆ ನಡೆದಿದೆ.
ಆಸ್ಪತ್ರೆಗೆ ಇನ್ನು ದೂರ ಇರುವಾಗಲೇ ಮಹಿಳೆಗೆ ಹೆರಿಗೆ ನೋವು ತೀವ್ರವಾಗಿದ್ದರಿಂದ ರಸ್ತೆಬದಿಯಲ್ಲೇ ಅಂಬುಲೆನ್ಸ್ ನಿಲ್ಲಿಸಿ ವಾಹನದಲ್ಲಿ ಶುಶ್ರೂಷಕಿ ಸಹಜ ಹೆರಿಗೆ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬೆಳಗೋಡು ಗ್ರಾಮದ ಮಣಿಕಂಠ ಎಂಬುವವರ ಪತ್ನಿ ಪವಿತ್ರ ಅವರನ್ನು 108 ಅಂಬುಲೆನ್ಸ್ ಮೂಲಕ ಎಂ.ಜಿ.ಎಂ. ಆಸ್ಪತ್ರೆಗೆ ಕರೆತರಲಾಗುತ್ತಿತ್ತು. ಈ ಸಂದರ್ಭದಲ್ಲಿ ಅವರಿಗೆ ಹೆರಿಗೆ ನೋವು ತೀವ್ರಗೊಂಡಿತು. ಸಮಯಪ್ರಜ್ಞೆ ಮೆರೆದ ಅಂಬುಲೆನ್ಸ್ ಚಾಲಕ ಗಂಗಾಧರನಾಯ್ಕ ಮತ್ತು ಶುಶ್ರೂಷಕಿ ಮಂಜುಳಾ ತಕ್ಷಣ ಅಂಬುಲೆನ್ಸ್ ಅನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿ ಸಹಜ ಹೆರಿಗೆ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪವಿತ್ರ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ನಂತರ ತಾಯಿ ಮಗುವನ್ನು ಎಂ.ಜಿ.ಎಂ. ಆಸ್ಪತ್ರೆಗೆ ಕರೆತಂದು ದಾಖಲಿಸಲಾಗಿದೆ. ತಾಯಿ ಮಗು ಆರೋಗ್ಯವಾಗಿದ್ದಾರೆ.
ಸಿಬ್ಬಂದಿಯ ಕಾರ್ಯಕ್ಕೆ ಸಾರ್ವಜನಿಕರು ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.