ಚಿಕ್ಕಮಗಳೂರು ಉಪ ವಿಭಾಗಾಧಿಕಾರಿ ಹೆಚ್.ಡಿ.ರಾಜೇಶ್ ಅವರ ವರ್ಗಾವಣೆ ರದ್ದುಗೊಳಿಸುವಂತೆ ಒತ್ತಾಯಿಸಿ ದಲಿತ್ ಜನಾಸೇನಾ ವತಿಯಿಂದ ಅಪರಾ ಜಿಲ್ಲಾಧಿಕಾರಿ ನಾರಾಯಣ ಕನಕರೆಡ್ಡಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ದಲಿತ್ ಜನ ಸೇನಾ ಜಿಲ್ಲಾ ಅಧ್ಯಕ್ಷ ಅನಿಲ್ ಆನಂದ್ ಉಪ ವಿಭಾಗಾಧಿಕಾರಿಯಾಗಿ ರಾಜೇಶ್ ಅವರು ಜಿಲ್ಲೆಗೆ ಆಗಮಿಸಿದಾಗಿನಿಂದ ಅಕ್ರಮ ಭೂ ಮಂಜೂರಾತಿ ತನಿಖೆಗೆ ವಿಶೇಷ ಆಸಕ್ತಿವಹಿಸಿ ಭೂ ಗಳ್ಳರಿಗೆ ಬಿಸಿ ಮುಟ್ಟಿಸಿ ನೂರಾರು ಎಕರೆ ಜಮೀನನ್ನು ಸರ್ಕಾರದ ವಶಕ್ಕೆ ಪಡೆಯಲು ಶ್ರಮವಹಿಸಿದ್ದ ಇವರನ್ನು ರಾತ್ರೋ ರಾತ್ರಿ ವರ್ಗಾವಣೆಗೊಳಿಸಿ ನಗರಭಿವೃದ್ಧಿ ಪ್ರಾಧಿಕಾರದ ಆಯುಕ್ತರನ್ನಾಗಿ ನೇಮಿಸಿರುವುದು ಅನುಮಾನಕ್ಕೆ ಕಾರಣವಾಗಿದೆ ಎಂದರು.
ಈ ವರ್ಗಾವಣೆ ಹಿಂದೆ ಕಾಣದ ಕೈಗಳ ಕೈವಾಡವಿರುವುದು ಮೇಲ್ನೋಟಕ್ಕೆ ಕಂಡುಬರುವ ಹಿನ್ನೆಲೆಯಲ್ಲಿ ಭೂ ಅಕ್ರಮ ಮಂಜೂರಾತಿ ತನಿಖೆ ಮುಗಿಯುವವರೆಗೂ ರಾಜೇಶ್ ಅವರನ್ನು ಉಪ ವಿಭಾಗಾಧಿಕಾರಿಯಾಗಿ ಮುಂದುವರಿಸಬೇಕೆಂದು ಒತ್ತಾಯಿಸಿದ್ದಾರೆ.
ದಲಿತ್ ಜನ ಸೇನಾ ಮಹಿಳಾ ಜಿಲ್ಲಾಧ್ಯಕ್ಷ ಸ್ವರ್ಣಗೌರಿ ಮಾತನಾಡಿ ಅಕ್ರಮ ಭೂ ಮಂಜೂರಾತಿ ತನಿಖೆಗೆ ವಿಶೇಷ ಆಸಕ್ತಿವಹಿಸಿ ಭೂಗಳ್ಳರಿಗೆ ಬಿಸಿ ಮುಟ್ಟಿಸಿ ನೂರಾರು ಎಕರೆ ಜಮೀನನ್ನು ಸರ್ಕಾರದ ವಶಕ್ಕೆ ಪಡೆಯಲು ಶ್ರಮವಹಿಸಿದ್ದ ಉಪವಿಭಾಗಾಧಿಕಾರಿ ಅವರನ್ನು ಏಕಾಏಕಿ ವರ್ಗಾವಣೆಗೊಳಿಸಿ ಸಿಡಿಎ ಆಯುಕ್ತರನ್ನಾಗಿ ನೇಮಿಸಿರುವುದು ಅನುಮಾನಕ್ಕೆ ಕಾರಣವಾಗಿದೆ ಎಂದು ಹೇಳಿದ್ದಾರೆ.
ಈ ಸಂದರ್ಭದಲ್ಲಿ ದಲಿತ್ ಜನ ಸೇನಾ ಜಿಲ್ಲಾ ಪ್ರಧಾನ ಸಂಚಾಲಕ ವೆಂಕಟೇಶ್, ಮುಖಂಡರಾದ ರಾಜಶೇಖರ್, ತಿಲಕ್, ಗಿರಿಧರ್, ಭೂದೇಶ್, ಯೋಗಿತ್ ಹಾಜರಿದ್ದರು.