ರಾಷ್ಟ್ರಕವಿ ಕುವೆಂಪು ಅವರ ಆಶಯದ ಮಂತ್ರ ಮಾಂಗಲ್ಯ ಪದ್ದತಿಯಲ್ಲಿ ವೈವಾಹಿಕ ಬದುಕಿಗೆ ಕಾಲಿಟ್ಟಿರುವ ಬುಹುಭಾಷಾ ನಟಿ ಪೂಜಾ ಗಾಂಧಿ ಅವರು ತಮ್ಮ ಪತಿಯೊಂದಿಗೆ ಇತ್ತೀಚೆಗೆ ಮೂಡಿಗೆರೆ ತಾಲ್ಲೂಕಿನ ಕೊಟ್ಟಿಗೆಹಾರದ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನಕ್ಕೆ ಭೇಟಿ ನೀಡಿದ್ದರು.
ಕನ್ನಡದ ಕಂಪನ್ನು ಅರಸಿ ಕೊಟ್ಟಿಗೆಹಾರದವರೆಗೆ ಬಂದಿದ್ದ ಪೂಜಾ ಗಾಂಧಿ ಪ್ರತಿಷ್ಠಾನದ ತುಂಬಾ ಓಡಾಡಿ ಇಲ್ಲಿನ ಕಾರ್ಯಚಟುವಟಿಕೆಗಳ ಬಗ್ಗೆ ಮಾಹಿತಿ ಪಡೆದರು. ತೇಜಸ್ವಿ ಓದಿನ ಗಾಜಿನ ಮನೆಯಲ್ಲಿ ಕುಳಿತು ಕೆಲಹೊತ್ತು ಇಲ್ಲಿದ್ದ ಪುಸ್ತಕಗಳನ್ನು ಓದಿದರು. ತನ್ನ ಪತಿಯೊಂದಿಗೆ ಪ್ರತಿಷ್ಠಾನದ ಆಯಾಕಟ್ಟಿನ ಸ್ಥಳಗಳಲ್ಲಿ ಭಾವಚಿತ್ರಗಳನ್ನು ತೆಗೆಸಿಕೊಂಡರು.
ಕುವೆಂಪು ಮತ್ತು ಪೂರ್ಣಚಂದ್ರ ತೇಜಸ್ವಿಯವರ ಸಾಹಿತ್ಯ ಮತ್ತು ವಿಚಾರಗಳಿಂದ ಪ್ರಭಾವಿತರಾಗಿರುವ ಪೂಜಾ ಗಾಂಧಿ ಇತ್ತೀಚೆಗೆ ಯಾವುದೇ ಹೆಚ್ಚಿನ ಆಡಂಬರವಿಲ್ಲದೇ ಮಂತ್ರ ಮಾಂಗಲ್ಯ ಪದ್ಧತಿಯಲ್ಲಿ ತಮ್ಮ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.
ಕುವೆಂಪು ಅವರು ತಮ್ಮ ಮಗ ಪೂರ್ಣಚಂದ್ರ ತೇಜಸ್ವಿಯವರ ಮದುವೆಯನ್ನು ಮಂತ್ರಮಾಂಗಲ್ಯ ಪದ್ದತಿಯಲ್ಲಿ ನೆರವೇರಿಸಿದ್ದರು.
ಪೂಜಾ ಗಾಂಧಿ ಇತ್ತೀಚೆಗೆ ತಮ್ಮ ಬಹುಕಾಲದ ಗೆಳೆಯ ಉದ್ಯಮಿ ವಿಜಯ್ ಘೋರ್ಪಡೆಯವರನ್ನು ಮಂತ್ರಮಾಂಗಲ್ಯ ಪದ್ದತಿ ಮೂಲಕ ವಿವಾಹವಾಗಿದ್ದರು.
ಸರ್ವೇ ಸಾಧಾರಣವಾಗಿ ವಿವಾಹವಾದ ನಂತರ ಬಹುತೇಕ ನಟನಟಿಯರು ಹನಿಮೂನ್ ಮೂಡ್ ನಲ್ಲಿ ವಿದೇಶ ಪ್ರವಾಸಿ ತಾಣಗಳನ್ನು ಅರಸಿ ಹೊರಟರೆ ಅದಕ್ಕೆ ತದ್ವಿರುದ್ಧವಾಗಿ ಪೂಜಾಗಾಂಧಿ ವಿಜಯ್ ಘೋರ್ಪಡೆ ದಂಪತಿಗಳು ಕನ್ನಡದ ಕಂಪನ್ನು ಅರಸಿ ಕರ್ನಾಟಕದ ಸಾಹಿತಿಗಳ ನೆಲೆಗಳಿಗೆ ಹೊರಟಿದ್ದಾರೆ.
ಕುವೆಂಪುವರ ಕುಪ್ಪಳ್ಳಿಯ ಕವಿಶೈಲ, ಹಿರೇಕುಡಿಗೆ ಕವಿಮನೆ, ಮಂತ್ರಮಾಂಗಲ್ಯದಿಂದ ವಿವಾಹವಾದ ಸಮಾನ ಮನಸ್ಕ ಕಡಿದಾಳು ಪ್ರಕಾಶ್ ಅವರ ಮನೆ, ಕನ್ನಡ ಪರ ಹೋರಾಟಗಾರರ ಮನೆಗಳಿಗೆ ಭೇಟಿ…. ಹೀಗೆ ಮದುವೆಯಾದ ನವಜೋಡಿ ವಿಶಿಷ್ಟ ರೀತಿಯ ನಡಾವಳಿಕೆಗಳಿಂದ ಗಮನ ಸೆಳೆಯುತ್ತಿದ್ದಾರೆ.
ಕೊಟ್ಟಿಗೆಹಾರಕ್ಕೆ ಭೇಟಿ ನೀಡಿದಾಗ ತಮ್ಮ ಅನಿಸಿಕೆ ಹಂಚಿಕೊಂಡಿರುವ ಪೂಜಾಗಾಂಧಿ ಆಧುನಿಕ ಕನ್ನಡದ ಮಾಯಾವಿ “ತೇಜಸ್ವಿ “ಯವರ ಸ್ಮರಣಾರ್ಥ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ಮಿಸಿರುವ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನಕ್ಕೆ ಭೇಟಿ ನೀಡಿರುವುದು ತುಂಬಾ ಹರ್ಷವನ್ನು ಉಂಟುಮಾಡಿದೆ.
ಇಲ್ಲಿನ ಸುಂದರ ಪರಿಸನ ನನ್ನ ಮನಸಿಗೆ ಮುದನೀಡಿದೆ. ಇಲ್ಲಿ ಇತ್ತೀಚೆಗೆ ಪ್ರಾರಂಭಿಸಿರುವ ತೇಜಸ್ವಿ ಓದಿನ ಗಾಜಿನ ಮನೆಯು ಅದ್ಭುತ ಪರಿಕಲ್ಪನೆಯಾಗಿದೆ. ಇಲ್ಲಿ ಕುಳಿತುಕೊಂಡು ಹಬೆಯಾಡುವ ಕಾಫಿ ಹೀರುತ್ತಾ ಕನ್ನಡ ಪುಸ್ತಗಳನ್ನು ಓದುವುದು ಮನಸ್ಸಿಗೆ ತುಂಬಾ ಖುಷಿ ನೀಡುತ್ತದೆ. ಓದುಗರು ಅದರಲ್ಲೂ ಯುವ ಪೀಳಿಗೆ ಇಂತಹ ಸ್ಥಳಗಳಿಗೆ ಭೇಟಿ ನೀಡಿ ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದ್ದಾರೆ.
ಪಂಜಾಬ್ ಮೂಲದ ಪೂಜಾಗಾಂಧಿ ಮುಂಗಾರು ಮಳೆ ಚಿತ್ರದ ಮೂಲಕ ಕನ್ನಡ ಚಿತ್ರರಸಿಕರ ಮನಸೆಳೆದು ‘ಮಳೆಹುಡುಗಿ’ ಎಂದೇ ಪ್ರೀತಿಯಿಂದ ಕರೆಸಿಕೊಳ್ಳುತ್ತಿದ್ದಾರೆ. ಇದೀಗ ಕನ್ನಡವನ್ನು ಸ್ಪಷ್ಟವಾಗಿ ಓದಲು, ಬರೆಯಲು ಮತ್ತು ಮಾತನಾಡಲು ಕಲಿತಿರುವ ಪೂಜಾ ಗಾಂಧಿ ಕನ್ನಡದ ಬಗ್ಗೆ ವಿಶಿಷ್ಟ ಕಾಳಜಿ ತೋರುತ್ತಿದ್ದಾರೆ. ಕನ್ನಡಿಗರಿಗೆ ವಿಶಿಷ್ಟ ಗುರುತಿನ ಪತ್ರ ನೀಡುವ ಕೆಲಸ ಆಗಬೇಕು ಎಂದು ಸರ್ಕಾರಕ್ಕೆ ಅಹವಾಲು ಸಲ್ಲಿಸಿದ್ದಾರೆ.
ಪೂಜಾಗಾಂಧಿಯವರು ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸಕ್ರಿಯರಾಗಿದ್ದು ಅಲ್ಲಿ ಕನ್ನಡ ಕಾರ್ಯಚಟುವಟಿಕೆಗಳನ್ನು ಪ್ರೋತ್ಸಾಹಿಸುವ ಕೆಲಸ ಮಾಡುತ್ತಿದ್ದಾರೆ.
ಪೂಜಾಗಾಂಧಿಯವರ ಫೇಸ್ಬುಕ್ ಪೋಸ್ಟ್ ಗಳಿಗೆ ಪ್ರತಿಕ್ರಿಯೆ ಹಲವು ಉತ್ತಮ ಪ್ರತಿಕ್ರಿಯೆ ಬರುತ್ತಿವೆ. : ಮದುವೆ ಅದ ಕೂಡಲೇ ಹನಿಮೂನ್ ಅಂತ ದೇಶಾಂತರ ಹೋಗಿ ಬಿಡ್ತಾರೆ ಆದರೆ ನಿಮ್ಮ ಕನ್ನಡ ಪ್ರೇಮ ನೀವು ಹೋಗುತ್ತಿರುವ ಸ್ಥಳ ಗಳು ನಿಜವು ಶ್ಲಾಘನಿಯ ಒಳ್ಳೆಯದಾಗಲಿ ಪೂಜಾ ನಿಮ್ಮ ದಾಂಪತ್ಯ ಜೀವನಕ್ಕೆ ಎಂದು ಒಬ್ಬರು ಶುಭ ಹಾರೈಸಿದ್ದರೆ, ಕರ್ನಾಟಕದಲ್ಲಿದ್ದು ಕನ್ನಡ ಮಾತಾಡದ, ಕನ್ನಡ ಕಲಿಯದ, ಕರ್ನಾಟಕದಲ್ಲೇ ಹುಟ್ಟಿ ಇಲ್ಲಿನ ಭಾಷೆ, ಸಂಸ್ಕೃತಿ, ಸಾಹಿತ್ಯದ ಬಗ್ಗೆ ನಿರ್ಲಕ್ಷ್ಯ ಅಸಡ್ಡೆ ಹೊಂದಿರುವ ಎಷ್ಟೊಂದು ಜನರಿಗೆ ನೀವು ಮಾದರಿ ಮೇಡಂ. ತುಂಬು ಪ್ರೀತಿ ನಿಮಗೆ ಎಂದು ಮತ್ತೊಬ್ಬರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.