ಮೂಡಿಗೆರೆ ಪಟ್ಟಣದ ಗಂಗನಮಕ್ಕಿಯಲ್ಲಿ ಖಾಸಗಿ ವ್ಯಕ್ತಿಯೊಬ್ಬರು ಹೆದ್ದಾರಿ ಬದಿಗೆ ಅಳವಡಿಸಿದ್ದ ಬೇಲಿಯನ್ನು ತೆರವು ಗೊಳಿಸಲಾಗಿದೆ.
ಗಂಗನಮಕ್ಕಿ ಬಳಿ ಸುಮಾರು ನೂರು ಮೀಟರ್ ಉದ್ದಕ್ಕೆ ರಸ್ತೆಯಂಚಿಗೆ ಹೊಂದಿಕೊಂಡಂತೆ ಕೆಲವೇ ಅಡಿಗಳಲ್ಲಿ ಕಾಂಪೌಂಡ್ ನಿರ್ಮಿಸಲು ಖಾಸಗಿ ವ್ಯಕ್ತಿ ಕಂಬಗಳನ್ನು ನಿಲ್ಲಿಸಿದ್ದರು. ಇದರ ಬಗ್ಗೆ ಶನಿವಾರ ದರ್ಪಣ ನ್ಯೂಸ್ ನಲ್ಲಿ ವರದಿ ಪ್ರಕಟಿಸಿ ಸಾರ್ವಜನಿಕರ ಗಮನ ಸೆಳೆಯಲಾಗಿತ್ತು.
ವರದಿಯಲ್ಲಿ ಸಂಬಂಧಿಸಿದ ಅಧಿಕಾರಿಗಳು ಜನಪ್ರತಿನಿಧಿಗಳ ನಿರ್ಲಕ್ಷ್ಯವನ್ನು ಉಲ್ಲೇಖಿಸಿ ವರದಿ ಮಾಡಲಾಗಿತ್ತು. ಇದೀಗ ವರದಿ ಪ್ರಕಟವಾದ 24 ಗಂಟೆಗಳ ಒಳಗಾಗಿ ರಸ್ತೆಬದಿಗೆ ಅಳವಡಿಸಿದ್ದ ಕಂಬಗಳನ್ನು ತೆರವುಗೊಳಿಸಲಾಗಿದೆ.
ವರದಿಯನ್ನು ಗಮನಿಸಿದ ಜನಪ್ರತಿನಿಧಿಗಳು ಮತ್ತು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಸ್ಪಂದಿಸಿ ಕಾನೂನು ಬಾಹೀರವಾಗಿ ಅಳವಡಿಸುತ್ತಿದ್ದ ಬೇಲಿಯನ್ನು ತೆರವುಗೊಳಿಸುವಂತೆ ಜಾಗದ ಮಾಲೀಕರಿಗೆ ಸೂಚನೆ ನೀಡಿದ್ದು ಅದರಂತೆ ಭಾನುವಾರ ಬೆಳಿಗ್ಗೆ ಕಾಂಪೌಂಡ್ ನಿರ್ಮಿಸಲು ಅಳವಡಿಸಿದ್ದ ಸಿಮೆಂಟ್ ಕಂಬಗಳನ್ನು ತೆರವುಗೊಳಿಸಲಾಗಿದೆ. ಹೆದ್ದಾರಿ ನಿಯಮಗಳಿಗೆ ಅನುಗುಣವಾಗಿ ಕಾಂಪೌಂಡ್ ನಿರ್ಮಿಸಲು ಮುಂದಾಗಿದ್ದಾರೆ.
ಪತ್ರಿಕೆಯ ಸಕಾಲಿಕ ವರದಿಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.