ಹರ್ಪೀಸ್ ಅಥವಾ ಸರ್ಪಸುತ್ತು ರೋಗದ ಔಷಧಿಗೆ ನಮ್ಮ ಚಿಕ್ಕಮಗಳೂರು ಮೂಲದ ಸಿದ್ದರಗಿರಿ ಓ.ಎಲ್. ಚಂದ್ರೇಗೌಡ ಮತ್ತು ಡಾ. ಶಿವಪ್ರಸಾದ್ ಎಸ್.ಆರ್. ಇವರು ಪೇಟೆಂಟ್ ಪಡೆದಿರುತ್ತಾರೆ.
ಚಿಕ್ಕಮಗಳೂರು ತಾಲ್ಲೂಕು ಸಿದ್ದರಗಿರಿ ಎಸ್ಟೇಟ್ ಮಾಲೀಕರಾದ ಓ.ಎಲ್. ಚಂದ್ರೇಗೌಡರು(ಔಷನ ಚಂದ್ರೇಗೌಡರು) ಬಹಳ ವರ್ಷಗಳಿಂದ ಹರ್ಪೀಸ್ ಖಾಯಿಲೆಗೆ ಗಿಡಮೂಲಿಗೆ ಔಷಧಿ ನೀಡುತ್ತಾ ಬರುತ್ತಿದ್ದಾರೆ. ಇದು ಆ ರೋಗ ಗುಣಪಡಿಸಲು ಉತ್ತಮ ಫಲಿತಾಂಶ ನೀಡುತ್ತಾ ಬಂದಿದೆ. ಇವರಿಂದ ಸಾವಿರಾರು ಮಂದಿ ಔಷಧಿ ಪಡೆದು ಹರ್ಪೀಸ್ ರೋಗದಿಂದ ಗುಣಮುಖರಾಗಿದ್ದಾರೆ. ಇದು ಅವರಿಗೆ ಅವರ ಹಿರಿಯರಿಂದ ಬಳುವಳಿಯಾಗಿ ಬಂದಿರುವ ಜ್ಞಾನವಾಗಿದೆ. ಇವರು ನೀಡುವ ಗಿಡಮೂಲಿಕೆ ಔಷಧಿಯನ್ನು ಚರ್ಮಕ್ಕೆ ಲೇಪನ ಮಾಡಿದರೆ ಅದು ಹರ್ಪೀಸ್ ರೋಗಕ್ಕೆ ಕಾರಣವಾಗಿರುವ ವೈರಸ್ ಅನ್ನು ನಿಷ್ಕ್ರೀಯಗೊಳಿಸಿ ಚರ್ಮರೋಗವನ್ನು ಗುಣಪಡಿಸುತ್ತದೆ.
ಇದೀಗ ಇವರು ನೀಡುವ ಔಷಧಿಯು ಇಂಟಲಾಕ್ಚುವಲ್ ಪ್ರಾಪರ್ಟಿ ಆಫ್ ಇಂಡಿಯಾ ಅವರಿಂದ ಪೇಟೆಂಟ್ (ಹಕ್ಕುಸ್ವಾಮ್ಯ) ಪಡೆದಿರುತ್ತದೆ. ಮುಂದಿನ 20 ವರ್ಷಗಳ ಅವಧಿಗೆ ಈ ಪೇಟೆಂಟ್ ಅವರಿಗೆ ಲಭಿಸಿದೆ.
ಈ ನಿಟ್ಟಿನಲ್ಲಿ ಓ.ಎಲ್. ಚಂದ್ರೇಗೌಡರೊಂದಿಗೆ ಸಂಶೋಧನೆಯಲ್ಲಿ ಕೃಷಿ ವಿಜ್ಞಾನಿ ಡಾ. ಶಿವಪ್ರಸಾದ್ ಎಸ್.ಆರ್. ಅವರು ಕೈಜೋಡಿಸಿದ್ದರು. ಗಿಡಮೂಲಿಕೆಗೆ ಪೇಟೆಂಟ್ ಪಡೆಯುವಲ್ಲಿ ಇವರು ತಾಂತ್ರಿಕ ಸಲಹೆಗಳನ್ನು ನೀಡಿದ್ದರು.
ಅಟಲಾಂಟಿಯಾ ವೈಟಿ(Atalantia wightii) ಎಂಬ ವೈಜ್ಞಾನಿಕ ಹೆಸರಿನ ಸಸ್ಯದಿಂದ ತಯಾರಿಸಿದ ಔಷಧಕ್ಕೆ ಈ ಪೇಟೆಂಟ್ ದೊರಕಿದೆ. ಇದು ಹರ್ಪೀಸ್ ಖಾಯಿಲೆಗೆ ಉತ್ತಮ ಔಷಧವಾಗಿದೆ. ಯಾವುದೇ ಅಡ್ಡಪರಿಣಾಮವಿಲ್ಲದೇ ಹರ್ಪೀಸ್ ಎಂಬ ಚರ್ಮರೋಗವನ್ನು ಗುಣಪಡಿಸುತ್ತದೆ.