ಮೂಡಿಗೆರೆ ಕಳಸ ಗಡಿಭಾಗದ ಮಾಳಿಗನಾಡು ಗ್ರಾಮದ ಜನರ ಬಹುದಿನದ ಕನಸು ನನಸಾಗಿದೆ. ಗ್ರಾಮಕ್ಕೆ ಬಸ್ ಸಂಚಾರ ವ್ಯವಸ್ಥೆ ಆಗಬೇಕೆಂಬ ಇಲ್ಲಿನ ಜನರ ಬಹುಕಾಲದ ಬೇಡಿಕೆ ಕೊನೆಗೂ ಈಡೇರಿದೆ.
ಗ್ರಾಮಕ್ಕೆ ಕೆ.ಕೆ.ಬಿ.(ಶ್ರೀ ಅನ್ನಪೂರ್ಣೇಶ್ವರಿ ಟ್ರಾವೆಲ್ಸ್) ಸಂಸ್ಥೆಯ ಖಾಸಗಿ ಬಸ್ ಸಂಚಾರವನ್ನು ಆರಂಭಿಸಲಾಗಿದೆ. ಈ ಮೂಲಕ ಜನರು ತಮ್ಮ ಸಂತಸವನ್ನು ವ್ಯಕ್ತಪಡಿಸಿದ್ದಾರೆ.
ಡಿಸೆಂಬರ್ 04 ರ ಸೋಮವಾರ ಬೆಳಿಗ್ಗೆ 8 ಗಂಟೆಗೆ ನೂತನ ಬಸ್ ಸಂಚಾರಕ್ಕೆ ಚಾಲನೆ ನೀಡಲಾಯಿತು. ಬಸ್ಸಿಗೆ ಅರ್ಚಕರ ಮೂಲಕ ಪೂಜೆ ಮಾಡಿಸಿ ಬಸ್ ಸಂಚಾರಕ್ಕೆ ಚಾಲನೆ ನೀಡಲಾಯಿತು. ಬೆಳಿಗ್ಗೆ ಮಾಳಿಗನಾಡು ಗ್ರಾಮದಿಂದ ಹೊರಟು -ಕೊಟ್ಟಿಗೆಹಾರ-ಬಾಳೆಹೊನ್ನೂರು-ಶೃಂಗೇರಿ ಮಾರ್ಗವಾಗಿ ಸಂಜೆ ಮಾಳಿಗನಾಡಿಗೆ ಬಂದು ಬೆಳಿಗ್ಗೆ ಎಂದಿನಂತೆ ಬೆಳಿಗ್ಗೆ 8-15ಕ್ಕೆ ಹೊರಡುತ್ತದೆ.
ಬಸ್ ಸಂಚಾರಕ್ಕೆ ಚಾಲನೆ ನೀಡುವ ಸಂದರ್ಭದಲ್ಲಿ ಗ್ರಾಮಸ್ಥರು ಉಪಸ್ಥಿತರಿದ್ದು ತಮ್ಮ ಕೋರಿಕೆಗೆ ಸ್ಪಂದಿಸಿದ ಕೆ.ಕೆ.ಬಿ. ಟ್ರಾವೆಲ್ಸ್ ಮಾಲೀಕರು ಮತ್ತು ವ್ಯವಸ್ಥಾಪಕರಿಗೆ ತುಂಬು ಹೃದಯದ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.
ಹಾಗೆಯೇ ಸಾರ್ವಜನಿಕರು ಈ ಬಸ್ಸಿನಲ್ಲಿ ಪ್ರಯಾಣಿಸುವ ಮೂಲಕ ಬಸ್ ಸಂಚಾರ ಒದಗಿಸಿಕೊಟ್ಟ ಮಾಲೀಕರಿಗೆ ಪ್ರೋತ್ಸಾಹಿಸುವುದರ ಜೊತೆಗೆ ಬಸ್ ಸಂಚಾರ ನಿರಂತರವಾಗಿ ಮುನ್ನಡೆಯುವಂತೆ ಸಹಕರಿಸಬೇಕು ಎಂದು ಗ್ರಾಮದ ಮುಖಂಡರು ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಗ್ರಾಮದ ಸುದೀಪ್ ಎಂ. ಡಿ, ಉಮೇಶ್ ಬಿ. ಎ, ಗೋಪಾಲ ಶೆಟ್ಟಿ, ಬಸವರಾಜ್, ಯೋಗೇಶ್, ಮದು, ಸುನಿಲ್, ರಂಜಿತ್, ಪುಟ್ಟಯ್ಯ ಮುಂತಾದವರು ಉಪಸ್ಥಿತರಿದ್ದರು.
* ಸುದೀಪ್ ಎಂ.ಡಿ, ಮಾಳಿಗನಾಡು