ಜೀವವಿಮಾ ಪ್ರತಿನಿಧಿಗಳು ಪರೋಕ್ಷವಾಗಿ ಸಮಾಜ ಸೇವೆಯಲ್ಲಿ ನಿರತರಾಗಿದ್ದಾರೆ. ಜನರಲ್ಲಿ ವಿಮೆಯ ಬಗ್ಗೆ ಜಾಗೃತಿ ಮೂಡಿಸುವುದರ ಜೊತೆಗೆ ಉಳಿತಾಯ ಮನೋಭಾವನೆಗೆ ಪ್ರೇರಣೆ ನೀಡುತ್ತಿದ್ದಾರೆ. ವಿಮಾ ಪ್ರತಿನಿಧಿಗಳು ಸಂಘಟಿತರಾಗಿ ತಮಗೆ ಬರಬೇಕಾದ ನ್ಯಾಯಯುತ ಸವಲತ್ತುಗಳನ್ನು ಪಡೆಯಬೇಕು ಎಂದು ಉಡುಪಿ ಡಿವಿಷನ್ ಅಖಿಲ ಭಾರತ ಜೀವವಿಮಾ ಪ್ರತಿನಿಧಿಗಳ ಫೆಡರೇಷನ್ ಅಧ್ಯಕ್ಷ ವಿಶ್ವನಾಥ ಗಟ್ಟಿ ಹೇಳಿದರು.
ಅವರು ಶನಿವಾರ ಮೂಡಿಗೆರೆ ಜೇಸಿ ಭವನದಲ್ಲಿ ಅಯೋಜಿಸಿದ್ದ ಅಖಿಲ ಭಾರತ ಜೀವವಿಮಾ ಪ್ರತಿನಿಧಿಗಳ ಉಡುಪಿ ಡಿವಿಷನಲ್ ಕೌನ್ಸಲಿಂಗ್ ಪದಗ್ರಹಣ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ಜೀವವಿಮೆ ಎಂಬುದು ಆಪತ್ಕಾಲದಲ್ಲಿ ಜನರ ನೆರವಿಗೆ ಬರುತ್ತದೆ. ಸಣ್ಣ ಉಳಿತಾಯದ ಮೂಲಕ ಭವಿಷ್ಯದ ಆರ್ಥಿಕ ಭದ್ರತೆಗೆ ಬುನಾದಿಯಾಗಿದೆ. ಭಾರತೀಯ ಜೀವವಿಮಾ ನಿಗಮವು ದಶಕಗಳಿಂದ ದೇಶದ ಜನರ ನಡುವೆ ವಿಮಾ ಜಾಗೃತಿಯನ್ನು ಮೂಡಿಸುತ್ತಿದೆ. ವಿಮಾ ಪ್ರತಿನಿಧಿಗಳು ತಮ್ಮ ಸೇವಾ ಮನೋಭಾವನೆಯಿಂದ ಜನರಲ್ಲಿ ವಿಮೆಯ ಮಹತ್ವವನ್ನು ಪಸರಿಸುತ್ತಿದ್ದಾರೆ. ವಿಮಾ ಪ್ರತಿನಿಧಿಗಳಿಗೆ ನಿಗಮದಿಂದ ಬಹಳಷ್ಟು ಸವಲತ್ತು ದೊರಕಿಸಿಕೊಡುವಲ್ಲಿ ವಿಮಾ ಪ್ರತಿನಿಧಿಗಳ ಕೌನ್ಸಲಿಂಗ್ ಕಾರ್ಯನಿರ್ವಹಿಸುತ್ತಿದೆ ಎಂದರು.
ಕೌನ್ಸಲಿಂಗ್ ಪ್ರಧಾನ ಕಾರ್ಯದರ್ಶಿ ಸುಬ್ರಮಣ್ಯ ಮಾತನಾಡಿ ಜೀವವಿಮಾ ಪ್ರತಿನಿಧಿಗಳಿಗೆ ಗುಂಪುವಿಮೆ ಮೊತ್ತವನ್ನು ಹನ್ನೆರಡು ಲಕ್ಷಕ್ಕೆ ಹೆಚ್ಚಿಸಲಾಗಿದೆ. ಗ್ರಾಚ್ಯುಟಿಯನ್ನು ಐದು ಲಕ್ಷಕ್ಕೆ ಏರಿಸಲಾಗಿದೆ. ವಿಮಾ ಪ್ರತಿನಿಧಿ ಆಗುವ ಮೂಲಕ ಉತ್ತಮ ಭವಿಷ್ಯವನ್ನುರೂಪಿಸಿಕೊಳ್ಳಲು ಅವಕಾಶವಿದೆ ಎಂದರು.
ಮೂಡಿಗೆರೆ ಜೀವವಿಮಾ ಪ್ರತಿನಿಧಿಗಳ ಅಸೋಷಿಯೇಷನ್ ಅಧ್ಯಕ್ಷ ಕೆ.ಪಿ. ಶಿವಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ; ಜನರ ಜೀವನದ ಭದ್ರತೆಗೆ ಶ್ರಮಿಸುವ ಜೀವವಿಮಾ ಪ್ರತಿನಿಧಿಗಳ ಭವಿಷ್ಯದ ಭದ್ರತೆಗೆ ವಿಮಾ ಕಂಪನಿಗಳು ನೀಡುತ್ತಿರುವ ಸೌಲಭ್ಯಗಳು ಸಮರ್ಪಕವಾಗಿ ತಲುಪುವಂತೆ ನಿಗಮಗಳು ನೋಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ವಿಮಾ ಏಜೆಂಟರ ಸಂಘಟನೆಗಳು ಉತ್ತಮ ಕಾರ್ಯನಿರ್ವಹಿಸುತ್ತಿವೆ ಎಂದರು.
ಪದಗ್ರಹಣ ಸಮಾರಂಭದಲ್ಲಿ ನಿರ್ಗಮಿತ ಅಧ್ಯಕ್ಷೆ ವಂದನಾ ಅವರು ನೂತನ ಅಧ್ಯಕ್ಷ ವಿಶ್ವನಾಥ ಗಟ್ಟಿಯವರಿಗೆ ಅಧಿಕಾರ ಹಸ್ತಾಂತರಿಸಿದರು.
ಫೆಡರೇಷನ್ ಡಿವಿಷನಲ್ ಉಪಾಧ್ಯಕ್ಷ ಮುರಳೀಧರ್, ಖಜಾಂಚಿ ಶಾಂತ ಜಯಕುಮಾರ್, ಮೂಡಿಗೆರೆ ಜೀವ ವಿಮಾ ಪ್ರತಿನಿಧಿಗಳ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಎಲ್. ನಾಗರಾಜು, ಖಜಾಂಚಿ ಕೆ.ಹೆಚ್. ಚಂದ್ರಶೇಖರ್, ಉಪಾಧ್ಯಕ್ಷ ಹೆಚ್.ಜಿ. ಉತ್ತಮಕುಮಾರ್, ನಿಕಟಪೂರ್ವ ಅಧ್ಯಕ್ಷ ಹೆಚ್.ಎಸ್. ಪ್ರಕಾಶ್, ಸ್ಥಾಪಕ ಅಧ್ಯಕ್ಷ ಬಿ.ಎಲ್. ಉಪೇಂದ್ರ, ಹಿರಿಯ ವಿಮಾ ಪ್ರತಿನಿಧಿಗಳಾದ ಗೋಪಾಲಗೌಡ ಮುಂತಾದವರು ಉಪಸ್ಥಿತರಿದ್ದರು.
ಮೂಡಿಗೆರೆ, ಮಂಗಳೂರು, ಉಡುಪಿ, ಕಡೂರು, ಚಿಕ್ಕಮಗಳೂರು ಬ್ರಹ್ಮಾವರ, ಕುಂದಾಪುರ, ತರೀಕೆರೆ, ಕೊಪ್ಪ ಶಾಖೆಯ ವಿಮಾ ಪ್ರತಿನಿಧಿಗಳ ಸಂಘದ ಪದಾಧಿಕಾರಿಗಳು, ವಿಮಾ ಪ್ರತಿನಿಧಿಗಳು ಭಾಗವಹಿಸಿದ್ದರು.