ಚಿಕ್ಕಮಗಳೂರಿನಲ್ಲಿ ವಕೀಲರೊಬ್ಬರ ಮೇಲೆ ಪೊಲೀಸ್ ಠಾಣೆಯಲ್ಲಿ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಉಚ್ಚ ನ್ಯಾಯಾಲಯ ಸ್ವಯಂಪ್ರೇರಿತ ಅರ್ಜಿ ವಿಚಾರಣೆಗೆ ಶುಕ್ರವಾರ ದಾಖಲು ಮಾಡಿಕೊಂಡಿದೆ.
‘‘ವಿಷಯದ ಗಂಭೀರತೆಯನ್ನು ಅರಿತು ಹೈಕೋರ್ಟ್ ಸ್ವಯಂಪ್ರೇರಿತವಾಗಿ ವಿಚಾರಣೆ ಆರಂಭಿಸಿದೆ. ಚಿಕ್ಕಮಗಳೂರು ಟೌನ್ ಪೊಲೀಸ್ ಠಾಣೆಯ ಆರು ಮಂದಿ ಪೊಲೀಸ್ ಅಧಿಕಾರಿಗಳು ಕರ್ತವ್ಯಲೋಪ ಎಸಗಿರುವ ಹಿನ್ನೆಲೆಯಲ್ಲಿ ಒಬ್ಬರು ಒಬ್ಬರು ಸಬ್ಇನ್ಸ್ಪೆಕ್ಟರ್, ಒಬ್ಬರು ಎ.ಎಸ್ಸೈ, ನಾಲ್ವರು ಪೊಲೀಸ್ ಪೇದೆಗಳು ಸೇರಿ ಆರು ಮಂದಿಯನ್ನು ಡಿಸೆಂಬರ್ 1 ರ ಕಚೇರಿ ಆದೇಶದ ಮೂಲಕ ಅಮಾನತುಗೊಳಿಸಲಾಗಿದೆ ಎಂದು ಅಡ್ವೊಕೇಟ್ ಜನರಲ್ ಅವರು ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದಾರೆ.
ಘಟನೆಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ನಾಗರೀಕ ಸಮಾಜದಲ್ಲಿ ಇಂತಹ ಘಟನೆಗಳು ನಡೆಯಬಾರದು, ಹೆಲ್ಮೆಟ್ ಹಾಕದ ಕಾರಣಕ್ಕೆ ಈ ರೀತಿ ಹಲ್ಲೆ ನಡೆಸಬಹುದಾ ? ಎಂದು ಪ್ರಶ್ನಿಸಿದೆ.
ನ್ಯಾಯಾಲಯದ ವಿಚಾರಣೆಯಿಂದ ದೂರವಿಡುವಂತಹ ತೀವ್ರ ಕ್ರಮಗಳನ್ನು ತೆಗೆದುಕೊಳ್ಳದಂತೆ ನ್ಯಾಯಾಲಯವು ವಕೀಲರನ್ನು ಕೇಳಿದೆ. ಗುರುವಾರ ರಾತ್ರಿ ಚಿಕ್ಕಮಗಳೂರು ಮಾರ್ಕೇಟ್ ರಸ್ತೆಯಲ್ಲಿ ಹೆಲ್ಮೆಟ್ ಇಲ್ಲದೆ ಬೈಕ್ ಚಲಾಯಿಸಿದ್ದಕ್ಕಾಗಿ ಪೊಲೀಸರು ತಡೆದು ನಂತರ ಠಾಣೆಯಲ್ಲಿ ಪ್ರೀತಂ ಮೇಲೆ ಪೊಲೀಸರು ಹಲ್ಲೆ ಮಾಡಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದೆ.
ಅಡ್ವೊಕೇಟ್ ಜನರಲ್ ಅವರು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಅವರ ಪೀಠದ ಮುಂದೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಪೊಲೀಸರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಇಲಾಖೆಯು ಈ ವಿಷಯದಲ್ಲಿ ಕೈಗೊಂಡ ಕ್ರಮಗಳ ವಿವರ ನೀಡುವ ಮೆಮೊವನ್ನು ಸಲ್ಲಿಸಿದರು.
ಘಟನೆಯ ನಂತರ ಚಿಕ್ಕಮಗಳೂರಿನಲ್ಲಿ ಠಿಕಾಣಿ ಹೂಡಿರುವ ವಕೀಲರ ಸಂಘದ ಬೆಂಗಳೂರು ಅಧ್ಯಕ್ಷ ವಿವೇಕ್ ಸುಬ್ಬಾ ರೆಡ್ಡಿ, ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗಿದ್ದರು.
ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳ ಸಹಕಾರವನ್ನು ನ್ಯಾಯಾಲಯ ಅವರಿಗೆ ತಿಳಿಸಿದೆ. ಚಿಕ್ಕಮಗಳೂರಿನ ವಕೀಲರ ಸಂಘದೊಂದಿಗೆ ಮಾಹಿತಿ ಹಂಚಿಕೊಳ್ಳುವುದಾಗಿ ಹಾಗೂ ಅಲ್ಲಿನ ವಕೀಲರು ಎಂದಿನಂತೆ ನ್ಯಾಯಾಲಯಕ್ಕೆ ಹಾಜರಾಗುವಂತೆ ತಿಳಿಸುವುದಾಗಿ ರೆಡ್ಡಿ ನ್ಯಾಯಾಲಯಕ್ಕೆ ಭರವಸೆ ನೀಡಿದರು.
ಇತ್ತ ಚಿಕ್ಕಮಗಳೂರಿನಲ್ಲಿ ವಕೀಲರ ಸಂಘ ತೀವ್ರ ಪ್ರತಿಭಟನೆ ನಡೆಸಿದ್ದು, ತಪ್ಪಿತಸ್ಥ ಪೊಲೀಸರನ್ನು ಬಂಧಿಸುವಂತೆ ಆಗ್ರಹಿಸಿದೆ.
ಚಿಕ್ಕಮಗಳೂರು ; ಲಾಯರ್ ಮೇಲೆ ಹಲ್ಲೆ ; ನಗರ ಠಾಣೆ ಎಸೈ ಮೋಹನ್ ಪೂಜಾರಿ ಸೇರಿ 6 ಪೊಲೀಸರ ಅಮಾನತು