ಚಿಕ್ಕಮಗಳೂರಿನಲ್ಲಿ ವಕೀಲ ಪ್ರೀತಂ ಎಂಬುವವರ ಮೇಲೆ ಪೊಲೀಸರು ನಡೆಸಿರುವ ಹಲ್ಲೆ ಪ್ರಕರಣವನ್ನು ಮೂಡಿಗೆರೆ ಅಡ್ವೋಕೇಟ್ ಅಸೋಷಿಯೇಷನ್ ತೀವ್ರವಾಗಿ ಖಂಡಿಸಿದೆ. ವಕೀಲರ ಮೇಲಿನ ಹಲ್ಲೆಯನ್ನು ಖಂಡಿಸಿ ಮೂಡಿಗೆರೆ ಅಡ್ವೋಕೇಟ್ ಅಸೋಸಿಯೇಷನ್ ವತಿಯಿಂದ ಮೂಡಿಗೆರೆ ತಾಲೂಕು ಕಚೇರಿ ಮುಂಭಾಗದಲ್ಲಿ ಸೇರಿ ಪ್ರತಿಭಟನೆ ನಡೆಸಿದರು. ನಂತರ ತಪ್ಪಿತಸ್ಥ ಪೊಲೀಸರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ತಹಸೀಲ್ದಾರ್ ತಿಪ್ಪೆಸ್ವಾಮಿ ಅವರ ಮೂಲಕ ಸರ್ಕಾರಕ್ಕೆ ತಮ್ಮ ಮನವಿ ಸಲ್ಲಿಸಿದರು.
ವಕೀಲ ಪ್ರೀತಮ್ ಮೇಲೆ ಪೊಲೀಸರು ನಡೆಸಿರುವ ಮಾರಣಾಂತಿಕ ಹಲ್ಲೆ ಖಂಡನೀಯ. ಹಲ್ಲೆ ಮಾಡಿರುವ ಪೊಲೀಸರ ಮೇಲೆ ಕಾನೂನು ಅಡಿಯಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ರಾಜ್ಯ ಸರಕಾರ ಮತ್ತು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳಿಗೆ ಗಮನಕ್ಕೆ ತರುವ ಮೂಲಕ ನೊಂದ ವಕೀಲರಿಗೆ ಸೂಕ್ತ ಪರಿಹಾರ ಹಾಗೂ ರಕ್ಷಣೆ ನೀಡಬೇಕೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಹೆಲ್ಮೆಟ್ ಇಲ್ಲದೆ ಬೈಕ್ ಚಲಾಯಿಸುತ್ತಿದ್ದರು ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಪ್ರೀತಂ ಮತ್ತು ಪೊಲೀಸರ ನಡುವೆ ಮಾತಿನ ಚಕಾಮಕಿ ನಡೆದಿತ್ತು. ನಂತರ ಪ್ರೀತಮ್ ಅವರನ್ನು ಪೊಲೀಸ್ ಠಾಣೆಗೆ ಕರೆದೊಯ್ದು ಅಲ್ಲಿ ಪೊಲೀಸರು ಪ್ರೀತಂ ಅವರ ಮೇಲೆ ತೀವ್ರವಾಗಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿತ್ತು. ಪ್ರೀತಮ್ ಅವರ ಬೆನ್ನು ಹೊಟ್ಟೆ ಕೈ ಭಾಗಕ್ಕೆ ತೀವ್ರ ಗಾಯಗಳಾಗಿದ್ದು ಅವರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ನಿನ್ನೆ ಈ ಬಗ್ಗೆ ಚಿಕ್ಕಮಗಳೂರು ವಕೀಲರ ಸಂಘ ತೀವ್ರ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ನಗರ ಠಾಣೆ ಪಿ.ಎಸ್.ಐ. ಮೋಹನ್ ಪೂಜಾರಿ ಸೇರಿದಂತೆ ಒಟ್ಟು ಆರು ಮಂದಿ ಪೊಲೀಸರನ್ನು ಅಮಾನತ್ತು ಮಾಡಲಾಗಿತ್ತು.
ಇದೀಗ ವಕೀಲರ ಮೇಲಿನ ಹಲ್ಲೆಯನ್ನು ಮೂಡಿಗೆರೆ ವಕೀಲರ ಸಂಘವು ಖಂಡಿಸಿದ್ದು, ಇದರ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದೆ.
ಈ ಸಂದರ್ಭದಲ್ಲಿ ಮೂಡಿಗೆರೆ ವಕೀಲರ ಸಂಘದ ಅಧ್ಯಕ್ಷ ಡಿ.ಸಿದ್ದಯ್ಯ, ಉಪಾಧ್ಯಕ್ಷ ಬಿ.ಟಿ.ನಟರಾಜ್, ಪ್ರಧಾನ ಕಾರ್ಯದರ್ಶಿ ಎಚ್.ಜಿ.ಆದರ್ಶ, ಕಾರ್ಯದರ್ಶಿ ಎಂ.ಎಸ್.ಗೋಪಾಲಗೌಡ, ಹಿರಿಯ ವಕೀಲರಾದ ಎಂ.ವಿ. ಜಯರಾಜ್, ಜಗದೀಶ್, ಡಿ.ಕೆ.ಪ್ರಸನ್ನಕುಮಾರ್, ಮೋಹಿತ್, ಚಂದ್ರಶೇಖರ್, ದೇವರಾಜ್, ಸಂತೋಷ್, ಚಂದ್ರು, ರಘು ಮತ್ತಿತರರಿದ್ದರು.