ಹೆಲ್ಮೆಟ್ ಹಾಕಿಲ್ಲ ಎಂದು ಚಿಕ್ಕಮಗಳೂರು ನಗರ ಪೊಲೀಸರು ವಕೀಲರ ಮೇಲೆ ಮನಸ್ಸೋ ಇಚ್ಛೆ ಹಲ್ಲೆ ನಡೆಸಿದ್ದಾರೆಂಬ ಆರೋಪದಡಿ ಚಿಕ್ಕಮಗಳೂರು ಎಸ್ಪಿ ವಿಕ್ರಂ ಅಮಟೆ ಅವರು ಚಿಕ್ಕಮಗಳೂರು ನಗರ ಠಾಣೆಯ ಆರು ಜನ ಪೊಲೀಸರನ್ನ ಅಮಾನತು ಮಾಡಿದ್ದಾರೆ.
ನಗರ ಠಾಣೆ ಪಿಎಸ್ಐ ಮೋಹನ್ ಪೂಜಾರಿ , ಓರ್ವ ಎ.ಎಸ್.ಐ. ಓರ್ವ ಹೆಡ್ ಕಾನ್ಸಟೇಬಲ್ ಸೇರಿದಂತೆ ಮೂವರು ಪೇದೆಗಳನ್ನ ಅಮಾನತು ಮಾಡಿದ್ದಾರೆ.
ಗುರುವಾರ ರಾತ್ರಿ 7-30 ರ ವೇಳೆಗೆ ನಗರದ ಮಾರ್ಕೆಟ್ ರಸ್ತೆಯಲ್ಲಿ ನಗರ ಠಾಣೆ ಮುಂಭಾಗ ವಕೀಲ ಪ್ರೀತಂ ಎಂಬುವವರು ಹೆಲ್ಮೆಟ್ ಹಾಕದೆ ಬೈಕಿನಲ್ಲಿ ಹೋಗುತ್ತಿದ್ದರು. ಆಗ ವಕೀಲ ಪ್ರೀತಂ ಅವರನ್ನು ಪ್ರಶ್ನಿಸಿದ ಪೊಲೀಸರು ಹಾಗೂ ಪ್ರೀತಂ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಚಲಿಸುತ್ತಿದ್ದಾಗ ಬೈಕಿನ ಕೀ ಏಕೆ ತೆಗೆಯುತ್ತೀರಾ, ಕೀ ತೆಗೆದಾಗ ಅಪಘಾತವಾದರೆ ಯಾರು ಜವಾಬ್ದಾರಿ ಎಂದು ಪ್ರಶ್ನಿಸಿದ ವಕೀಲ ದಂಡ ಕಟ್ಟುತ್ತೇನೆ ಎಂದು ಪೊಲೀಸರ ಜೊತೆ ಮಾತಿನ ಚಕಮಕಿ ನಡೆಸಿದ್ದಾರೆ.
ಠಾಣೆ ಎದುರೇ ಘಟನೆ ನಡೆದಿದ್ದರಿಂದ ಪೊಲೀಸರು ಪ್ರೀತಂರನ್ನು ಠಾಣೆಗೆ ಕರೆದೊಯ್ದು ಮನಸ್ಸೋ ಇಚ್ಛೆ ಹಲ್ಲೆ ಮಾಡಿದ್ದಾರೆಂದು ಅವರು ಆರೋಪಿಸಿದ್ದಾರೆ. ವಕೀಲ ಪ್ರೀತಂ ಎದೆ ಹಾಗೂ ಬೆನ್ನಿಗೆ ಗಂಭೀರ ಗಾಯವಾಗಿದ್ದು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ವಿಷಯ ತಿಳಿದು ಆಸ್ಪತ್ರೆಗೆ ಹೋಗಿ ಆತನನ್ನ ನೋಡಿಕೊಂಡು ಠಾಣೆಗೆ ಬಂದ ವಕೀಲರ ಸಂಘ ಇಡೀ ರಾತ್ರಿ ಪೊಲೀಸ್ ಠಾಣೆ ಮುಂದೆ ಬೀಡುಬಿಟ್ಟಿತ್ತು. ವಕೀಲರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ ಪೊಲೀಸರುನ್ನು ಅರೆಸ್ಟ್ ಮಾಡಿ ಎಂದು ಆಗ್ರಹಿಸಿತ್ತು. ಆದರೆ, ಪೊಲೀಸರು ವಿಚಾರಣೆಗೊಳಪಡಿಸುತ್ತೇವೆ ಎಂದಾಗ ವಕೀಲರು ವಿಚಾರಣೆ ಬೇಡ ಕೇಸ್ ದಾಖಲಿಸಿ ಎಂದು ಬಂಧಿಸಿ ಎಂದು ಆಗ್ರಹಿಸಿದ್ದರು. ಪ್ರೀತಂ ಮೇಲೆ ಹಲ್ಲೆ ಮಾಡಿದ ಪೇದೆಯನ್ನ ಆಸ್ಪತ್ರೆಯಲ್ಲಿ ರಿಪೋರ್ಟ್ ತೆಗೆದುಕೊಳ್ಳು ಕಳಿಸಿದ್ದಾರೆ. ಇದು ವಕೀಲರ ಆಕ್ರೋಶಕ್ಕೆ ಕಾರಣವಾಗಿತ್ತು. 307 ಕೇಸ್ ದಾಖಲಾಗಿದೆ. ಆರೋಪಿಗಳು ಠಾಣೆಯ ಒಳಗೆ ಇದ್ದಾರೆ, ಬಂಧಿಸಿ ಎಂದು ಪಟ್ಟು ಹಿಡಿದಿದ್ದರು. ಸುಮಾರು ಆರು ಗಂಟೆಗಳ ವಕೀಲರ ಹೋರಾಟದ ಫಲವಾಗಿ ಎಸ್ಪಿ ಆರು ಜನ ಪೊಲೀಸರನ್ನ ಅಮಾನತು ಮಾಡಿ ವಿಚಾರಣೆಗೆ ಡಿ.ವೈ.ಎಸ್.ಪಿ. ನೇತೃತ್ವದ ತಂಡ ರಚಿಸಿದ್ದಾರೆ.
ಆದರೆ ಆರು ಜನ ಪೊಲೀಸರು ಅರೆಸ್ಟ್ ಆಗುವವರೆಗೂ ಹೋರಾಟ ನಿಲ್ಲಿಸುವುದಿಲ್ಲ ಎಂದು ಎಚ್ಚರಿಕೆ ನೀಡಿರೋ ವಕೀಲರ ಸಂಘ ಹೋರಾಟವನ್ನ ಮುಂದುವರೆಸಲು ಮುಂದಾಗಿದ್ದಾರೆ. ಇದೀಗ ಈ ಪ್ರಕರಣ ಗಂಭೀರ ಸ್ವರೂಪ ಪಡೆಯುತ್ತಿದೆ. ವಕೀಲರು ರಾಜ್ಯದಾದ್ಯಂತ ಪ್ರತಿಭಟನೆ ನಡೆಸುವ ಮುನ್ಸೂಚನೆ ನೀಡಿದ್ದಾರೆ.
ಕೆಲ ಸಮಯದಿಂದ ರಾಜ್ಯದಲ್ಲಿ ತಣ್ಣಗಾಗಿದ್ದ ಪೊಲೀಸ್ ಮತ್ತು ವಕೀಲರ ನಡುವಿನ ಮುಸುಕಿನ ಗುದ್ದಾಟ ಇದೀಗ ಈ ಪ್ರಕರಣದಿಂದ ಮತ್ತೆ ಭುಗಿಲೆದ್ದಿದೆ. ವಕೀಲರ ಮೇಲೆ ತೀವ್ರ ಹಲ್ಲೆ ನಡೆಸಿರುವ ಪ್ರಕರಣವು ವಕೀಲರನ್ನು ಕೆರಳಿಸಿದೆ.