ಅಕೌಂಟ್ ಲಾಕ್ ಆಗಿದೆ ಎಂದು ಹೇಳಿ ಓಟಿಪಿ ಪಡೆದು ಒಂದೂವರೆ ಲಕ್ಷಕ್ಕೆ ಪಂಗನಾಮ ಹಾಕಿರುವ ಘಟನೆ ನಡೆದಿದೆ.
ತಮ್ಮ ಬ್ಯಾಂಕ್ ಖಾತೆ ಲಾಕ್ ಆಗಿದೆ ಅದಕ್ಕಾಗಿ ಕೆವೈಸಿ ಮಾಡಬೇಕು ಎಂದು ಹೇಳಿ ಗ್ರಾಹಕರೊಬ್ಬರಿಂದ ಓಟಿಪಿ ಪಡೆದು ಹಣ ವಂಚಿಸಲಾಗಿದೆ.
ಮೂಡಿಗೆರೆ ಕೆನರಾ ಬ್ಯಾಂಕ್ ನಲ್ಲಿ ಖಾತೆ ಹೊಂದಿದ್ದ ಗ್ರಾಹಕರೊಬ್ಬರಿಗೆ ಅನಾಮಿಕ ಸಂಖ್ಯೆಯಿಂದ ಕರೆ ಬಂದಿದ್ದು ತಮ್ಮ ಬ್ಯಾಂಕ್ ನ ಖಾತೆ ಲಾಕ್ ಆಗಿದೆ ಅದನ್ನು ಆಕ್ಟಿವೇಟ್ ಮಾಡಬೇಕು ಎಂದರೆ ನಿಮ್ಮ ಇ ಕೆ ವೈ ಸಿ ಮಾಡಬೇಕು ಅದಕ್ಕಾಗಿ ನಾನು ನೀಡುವ ಸಂಖ್ಯೆಗೆ ನೀವು ಕರೆ ಮಾಡಬೇಕು ಎಂದು ಹೇಳಿ ವಂಚನೆ ಮಾಡಲಾಗಿದೆ.
ಮೂಡಿಗೆರೆ ಈ ಹಿಂದಿನ ಸಿಂಡಿಕೇಟ್ ಬ್ಯಾಂಕ್ ಈಗಿನ ಕೆನರಾ ಬ್ಯಾಂಕ್ ಶಾಖೆಯಲ್ಲಿ ಖಾತೆ ಹೊಂದಿರುವ ಮೂಡಿಗೆರೆ ಹೌಸಿಂಗ್ ಬೋರ್ಡ್ ನಿವಾಸಿ ಬಿ.ಎ. ವೀಣಾ ಎಂಬುವವರಿಗೆ ಈ ರೀತಿಯ ಮೋಸ ಮಾಡಲಾಗಿದೆ.
ನವಂಬರ್ 21 ರಂದು ಅವರ ಫೋನಿಗೆ ಬ್ಯಾಂಕ್ ಮ್ಯಾನೇಜರ್ ಎಂದು ಕರೆಯೊಂದು ಬಂದಿತ್ತು ; ನಾವು ಕೆನರಾ ಬ್ಯಾಂಕಿನಿಂದ ಮಾತನಾಡುತ್ತಿರುವುದು ನಿಮ್ಮ ಬ್ಯಾಂಕ್ ಖಾತೆ ಲಾಕ್ ಆಗಿದೆ. ಅದಕ್ಕಾಗಿ ಕೆವೈಸಿ ಅಪ್ಡೇಟ್ ಮಾಡಬೇಕು, ನಾನೊಂದು ನಂಬರ್ ಕೊಡುತ್ತೇನೆ ಅವರಿಗೆ ಕಾಲ್ ಮಾಡಿ ಅವರು ನಮ್ಮ ಬ್ಯಾಂಕ್ ಸಿಬ್ಬಂದಿ ಅವರು ನಿಮ್ಮ ಖಾತೆಯನ್ನು ಅಪ್ಡೇಟ್ ಮಾಡುತ್ತಾರೆ ಎಂದಿದ್ದಾರೆ.
ಇದನ್ನು ನಿಜವೆಂದು ನಂಬಿದ ವೀಣಾ ಅವರು ನವೆಂಬರ್ 23ರಂದು ಆ ಸಂಖ್ಯೆಗೆ ಕರೆ ಮಾಡಿದ್ದಾರೆ. ಅತ್ತಲ್ಲಿಂದ ಮಾತನಾಡಿದ ಮಹಿಳೆ ಅರ್ಧಂಬರ್ಧ ಕನ್ನಡದಲ್ಲಿ ಮಾತನಾಡಿ, ಇವರೊಂದಿಗೆ ಬ್ಯಾಂಕಿನವರಂತೆ ವರ್ತಿಸಿ ವೀಣಾ ಅವರ ಆಧಾರ್ ಕಾರ್ಡ್ ನಂಬರ್ ಪಡೆದು ಮೊಬೈಲ್ ಗೆ ಬಂದ ಓಟಿಪಿ ಯನ್ನು ಪಡೆದು ನಿಮ್ಮ ಖಾತೆ ಅಪ್ಡೇಟ್ ಆಗಿದೆ ಎಂದು ಹೇಳಿದ್ದಾರೆ.
ಅದಾಗಿ ಕ್ಷಣದಲ್ಲಿಯೇ ವೀಣಾ ಅವರ ಖಾತೆಯಿಂದ 1 ಲಕ್ಷದ 56 ಸಾವಿರ ಹಣ ಬೇರೆ ಅನಾಮಿಕ ಖಾತೆಗೆ ವರ್ಗಾವಣೆ ಆಗಿದೆ. ಕೇವಲ 60 ಪೈಸೆ ಹಣವನ್ನು ಉಳಿಸಿ ಉಳಿದೆಲ್ಲ ಹಣವನ್ನು ಡ್ರಾ ಮಾಡಿದ್ದಾರೆ. ಇದರಿಂದ ಗಾಬರಿಗೊಂಡು ತಕ್ಷಣ ಅವರು ಆ ನಂಬರಿಗೆ ಪುನಃ ಕರೆ ಮಾಡಿದರೆ, ಹೌದಾ ನೋಡ್ತೀವಿ ಅಕೌಂಟ್ ಚೆಕ್ ಮಾಡಿ ಸರಿಮಾಡುತ್ತೇವೆ ಎಂದು ಕರೆ ಕಟ್ ಮಾಡಿದ್ದಾರೆ. ಆ ಮೇಲೆ ಪೋನ್ ರಿಸೀವ್ ಮಾಡಿಲ್ಲ.
ತಕ್ಷಣ ಅವರು ಬ್ಯಾಂಕ್ ಶಾಖೆಗೆ ತೆರಳಿ ವಿಚಾರಿಸಿದಾಗ ತಾವು ಮೋಸಹೋಗಿರುವುದು ಅರಿವಾಗಿದೆ. ಈ ಬಗ್ಗೆ ಬ್ಯಾಂಕ್ ಮತ್ತು ಪೊಲೀಸ್ ಠಾಣೆ, ಸೈಬರ್ ಕ್ರೈಂ ಗೆ ದೂರು ನೀಡಿದ್ದಾರೆ. ಆದರೆ ವಂಚಕರನ್ನು ಅಷ್ಟು ಸುಲಭವಾಗಿ ಹಿಡಿಯಲು ಸಾಧ್ಯವಿಲ್ಲ. ಯಾವುದೋ ರಾಜ್ಯ ಮತ್ತು ದೇಶದಲ್ಲಿ ಕುಳಿತು ಇಂತಹ ಮೋಸದ ಬಲೆ ಹೆಣೆದಿರುತ್ತಾರೆ.
ಮರುಕಳಿಸುತ್ತಿರುವ ಪ್ರಕರಣಗಳು
ಈ ರೀತಿಯ ಮೋಸದ ಪ್ರಕರಣಗಳು ಪದೇ ಪದೇ ನಡೆಯುತ್ತಿದ್ದು, ಇತ್ತೀಚಿನ ದಿನಗಳಲ್ಲಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ಇಂತಹ ಅನೇಕ ಪ್ರಕರಣಗಳು ನಡೆದಿದೆ. ಮಾಧ್ಯಮಗಳಲ್ಲು ಸುದ್ದಿಯಾಗುತ್ತಿವೆ. ಆದರೂ ಸಹ ಜನರು ಎಚ್ಚೆತ್ತು ಕೊಂಡಿಲ್ಲ.
ಯಾವುದೇ ಕಾರಣಕ್ಕೂ ನಾವು ಬ್ಯಾಂಕಿನವರು ಎಂದು ಹೇಳಿಕೊಂಡು ಬರುವ ಕರೆಯನ್ನು ನಂಬಬಾರದು ಹಾಗೆಯೇ ಯಾರಿಗೂ ಸಹ ಓಟಿಪಿ ನೀಡಬಾರದು. ಇಂತಹ ವಂಚಕರಿಂದ ಜನರು ತಮ್ಮನ್ನು ರಕ್ಷಿಸಿಕೊಳ್ಳಬೇಕು ಹೀಗೆ ಯಾವುದೇ ಸಂದೇಶ ಅಥವಾ ಕರೆಗಳು ಬಂದರೆ ನೇರವಾಗಿ ಬ್ಯಾಂಕ್ ಶಾಖೆಯನ್ನು ಸಂಪರ್ಕಿಸಬೇಕು.