ಕ್ರೀಡಾ ಕ್ಷೇತ್ರದಲ್ಲಿ ಅಂತರಾಷ್ಟ್ರೀಯ ಸಾಧನೆ ಮಾಡಿದ, ಇತ್ತೀಚೆಗೆ ಚೀನಾದಲ್ಲಿ ನಡೆದ ಏಷ್ಯನ್ ಪ್ಯಾರಾ ಒಲಿಂಪಿಕ್ ನಲ್ಲಿ 1500 ಮೀಟರ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗಳಿಸಿದ ಅಂಧ ಕ್ರೀಡಾಪಟು ರಕ್ಷಿತಾರಾಜುಗೆ ಹುಟ್ಟೂರಿನಲ್ಲಿ ಭವ್ಯ ಸ್ವಾಗತ ಕೋರಿ ಸನ್ಮಾನಿಸಲಾಯಿತು.
ಮೂಡಿಗೆರೆ ತಾಲ್ಲೂಕಿನ ಬಾಳೂರಿನ ಗುಡ್ನಳ್ಳಿಯ ರಕ್ಷಿತಾ ಅವರಿಗೆ ಬಾಳೂರು ನಾಗರೀಕ ವೇದಿಕೆ, ಬಾಳೂರು ಗ್ರಾಮ ಪಂಚಾಯಿತಿ ಹಾಗು ಗ್ರಾಮಸ್ಥರ ವತಿಯಿಂದ ಭವ್ಯ ಸ್ವಾಗತದೊಂದಿಗೆ ಸನ್ಮಾನಿಸಲಾಯಿತು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ವಿಧಾನ ಪರಿಷತ್ ಉಪಸಭಾಪತಿ ಎಂ.ಕೆ. ಪ್ರಾಣೇಶ್ ಅವರು ಮಾತನಾಡಿ : ಗುರಿ ಮುಟ್ಟಲು ಗುರುವಿನ ಪಾತ್ರ ಮುಖ್ಯವಾಗಿದ್ದು ಅದನ್ನು ರಕ್ಷಿತಾ ಅವರ ಕೋಚ್ ರಾಹುಲ್ ಬಾಲಕೃಷ್ಣ ಅವರ ಪರಿಶ್ರಮದಿಂದ ಇವೆಲ್ಲವೂ ಸಹಕಾರಿಯಾಗಿದೆ. ಅದರಲ್ಲೂ ಜನರ ಪ್ರೋತ್ಸಾಹದ ಸನ್ಮಾನ, ಆರ್ಥಿಕ ಸಹಕಾರ, ಮಾರ್ಗದರ್ಶನ ದೊರೆತರೆ ಕ್ರೀಡಾಪ್ರತಿಭೆಗಳಿಗೆ ಸಾಧನೆ ಮಾಡಲು ಮತ್ತಷ್ಟು ಪ್ರೋತ್ಸಾಹ ದೊರೆತಂತಾಗುತ್ತದೆ. ನಾವು ಸಮಾಜದಲ್ಲಿ ಜೀವಿಸುವಾಗ ಸ್ವಾರ್ಥತೆಯಿಂದ ಬದುಕದೇ ನಿಸ್ವಾರ್ಥತೆಯಿಂದ ಛಲದಿಂದ ಬದುಕಬೇಕು’ ಎಂದರು.
ಮಾಜಿ ಸಚಿವೆ ಮೋಟಮ್ಮ ಮಾತನಾಡಿ ‘ಗ್ರಾಮೀಣ ಪ್ರತಿಭೆಯೋರ್ವರು ಅಂತರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಪದಕ ಪಡೆದು ಸಾಧನೆ ಮಾಡಿರುವುದು ಸುಲಭದ ಮಾತಲ್ಲ. ದೇಶಕ್ಕೆ ಕೀರ್ತಿ ತಂದ ಗ್ರಾಮೀಣ ಪ್ರತಿಭೆಯ ಸಾಧನೆ ಮಲೆನಾಡಿಗೆ ಹೆಮ್ಮೆ ತಂದಂತಾಗಿದೆ. ಎಲ್ಲರಲ್ಲೂ ಪ್ರತಿಭೆ ಇರುತ್ತದೆ, ಅದಕ್ಕೆ ಪ್ರೋತ್ಸಾಹ ಎಂಬ ನೀರೆರೆದರೆ ಮಾತ್ರ ಅವರೂ ಸಾಧನೆ ಮಾಡಲು ಜೀವನದಲ್ಲಿ ಗುರಿ ಮುಟ್ಟಲು ಸಾಧ್ಯವಾಗುತ್ತದೆ. ಎಲ್ಲರಿಗೂ ರಕ್ಷಿತಾ ಅವರ ಸಾಧನೆ ಮಾದರಿಯಾಗಿದೆ. ನಮ್ಮಲ್ಲಿ ಎಲ್ಲವೂ ಸರಿ ಇದ್ದರೂ ಸಾಧಿಸಲು ಹಿಂಜರಿಯುತ್ತೇವೆ. ಹಿಂಜರಿಕೆಯ ಮನೋಭಾವ ಬಿಟ್ಟು ಅಂಧತ್ವ ಹೊಂದಿದ ರಕ್ಷಿತಾರ ಆತ್ಮವಿಶ್ವಾಸ ಮೈಗೂಡಿಸಿ ತಂದೆತಾಯಿ ಇಲ್ಲದ ಅಬಲೆಯಾದರೂ ಮಾತನಾಡಲು ಬರದ ಅಜ್ಜಿ ಲಲಿತಮ್ಮ ಅವರ ಪ್ರೋತ್ಸಾಹ ರಕ್ಷಿತಾಳನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಗೆಲ್ಲಲು ಸಹಕಾರಿಯಾಗಿದೆ. ಪೋಷಕರು ಇವರ ಮಾರ್ಗದರ್ಶನ ತಮ್ಮಲ್ಲಿ ಅಳವಡಿಸಿಕೊಂಡು ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸ ಬೇಕು’ಎಂದರು.
ನಾಗರೀಕರ ವೇದಿಕೆಯ ಅಧ್ಯಕ್ಷ ಸೋಮೇಶ್ ಮರ್ಕಲ್ ಮಾತನಾಡಿ ಅಂಗವಿಕಲೆ ರಕ್ಷಿತಾರಾಜು ಅವರ ಚಿನ್ನದ ಸಾಧನೆ ದೇಶಕ್ಕೆ ಮಾದರಿಯಾಗಿದೆ. ಅದರಲ್ಲೂ ಕಾಫಿನಾಡಿನ ಪ್ರತಿಭೆ ಚಿನ್ನದ ಪದಕ ಪಡೆದಿರುವುದು ಬಾಳೂರು ಗ್ರಾಮವನ್ನು ದೇಶದಲ್ಲೇ ಗುರುತಿಸುವಂತೆ ಮಾಡಿದೆ.ಇದು ನಮ್ಮ ಭಾಗ್ಯವಾಗಿದೆ’ ಎಂದರು.
ಕಾರ್ಯಕ್ರಮದಲ್ಲಿ ಬಾಳೂರು, ಗ್ರಾ.ಪಂ.ಅಧ್ಯಕ್ಷ ಬಿ.ಬಿ.ಮಂಜುನಾಥ್, ಸತೀಶ್ ಬಾಳೂರು, ಪಿಎಸ್ ಐ ವಿ.ಶ್ರೀನಾಥ್ ರೆಡ್ಡಿ, ಕೆ.ಸಿ.ಮಹೇಂದ್ರ, ಮನೋಜ್ ಮಾತನಾಡಿದರು. ಚಿನ್ನ ಪಡೆದ ಪ್ರತಿಭೆಗಳಾದ ರಕ್ಷಿತಾರಾಜು, ಕೋಚ್ ರಾಹುಲ್, ರಾಧಾವೆಂಕಟೇಶ್ ಅವರನ್ನು ಗಣ್ಯರು ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ಸ್ಥಳೀಯ ವಾಟೇಕಾನ್,ಬಾಳೂರು ಹೊರಟ್ಟಿ ಸರ್ಕಾರಿ ಶಾಲೆಗಳ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಿದ ಸ್ಥಳೀಯ ಕ್ರೀಡಾಪಟುಗಳಾದ ಧೀಮಂತ್, ಹರ್ಷ, ತರುಣ್, ಅಪ್ಸರ, ಅರ್ಪಿತ, ಅಂಕಿತ, ಹೃತ್ವರಿ ತೋಷ, ನಿಶ್ಮಿತಾ, ಶಿಕ್ಷಕಿಯರಾದ ಸಿಂತಿಯಾ ಪಾಯ್ಸ್, ಮಾರ್ಗರೇಟ್ ಡಿಸೋಜ ಅವರನ್ನು ಶಾಲು ಹೊದಿಸಿ ಸನ್ಮಾನಿಸಿ ಸ್ಮರಣಿಕೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ಬಾಳೂರು ಹಾಗೂ ಸುತ್ತಮುತ್ತಲಿನ ವಿವಿಧ ಸಂಘಸಂಸ್ಥೆಗಳ ಪದಾಧಿಕಾರಿಗಳು, ಗ್ರಾಮದ ಹಿರಿಯರು, ಗ್ರಾಮ ಪಂಚಾಯಿತಿ ಸದಸ್ಯರು ಉಪಸ್ಥಿತರಿದ್ದರು.