ಮಾಜಿ ಯೋಧರೊಬ್ಬರು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಡಿಕೇರಿಯಲ್ಲಿ ನಡೆದಿದೆ. ಡೆತ್ ನೋಟ್ ಬರೆದಿಟ್ಟು ಎರಡು ದಿನದ ಹಿಂದೆ ಮನೆಯಿಂದ ನಾಪತ್ತೆಯಾಗಿದ್ದ ಮಡಿಕೇರಿ ನಗರದ ಉಕ್ಕಡ ನಿವಾಸಿ ಸಂದೇಶ್ (38 ವರ್ಷ) ಮೃತದೇಹ ನಿನ್ನೆ ರಾತ್ರಿ ಸಮೀಪದ ಪಂಪಿನಕೆರೆಯಲ್ಲಿ ಪತ್ತೆಯಾಗಿದೆ.
ಮನೆಯಿಂದ ನಾಪತ್ತೆಯಾಗಿದ್ದ ಸಂದೇಶ್ ಅವರ ಹುಡುಕಾಟ ನಡೆಸುತ್ತಿದ್ದಾಗ ಪಂಪಿನಕೆರೆ ದಡದಲ್ಲಿ ಅವರ ಚಪ್ಪಲಿ ಮತ್ತು ವಾಚ್ ಕಂಡು ಬಂದಿದ್ದ ಹಿನ್ನಲೆಯಲ್ಲಿ ಅಗ್ನಿಶಾಮಕ ದಳ ಮತ್ತು ಪೊಲೀಸರು ಕೆರೆಯಲ್ಲಿ ಹುಡುಕಾಟ ನಡೆಸಿದ್ದರು. ಆದರೆ ಕೆರೆ ತುಂಬಾ ಆಳವಾಗಿದ್ದ ಕಾರಣ ಮಂಗಳೂರಿನಿಂದ ವಿಶೇಷ ಮುಳುಗುತಜ್ಞರ ತಂಡ ವನ್ನು ಕರೆಸಿ ಹುಡುಕಾಟ ನಡೆಸಲಾಗಿತ್ತು. ನಿನ್ನೆ ರಾತ್ರಿ ಸುಮಾರು 8-30 ಸಮಯದಲ್ಲಿ ಸಂದೇಶ್ ಅವರ ಮೃತದೇಹ ಕೆರೆಯ ಆಳದಲ್ಲಿ ಪತ್ತೆಯಾಗಿದೆ.
ಹನಿಟ್ರ್ಯಾಪ್ ಗೆ ಬಲಿಯಾಗಿರುವ ಸಂದೇಹ
ಸಂದೇಶ್ ಅವರು ಮನೆಯಿಂದ ನಾಪತ್ತೆಯಾಗುವ ಮುನ್ನ ಡೆತ್ ನೋಟ್ ಬರೆದಿಟ್ಟು ತೆರಳಿದ್ದರು. ಆ ಪತ್ರದಲ್ಲಿ ಮಹಿಳೆಯೊಬ್ಬರ ಹೆಸರು ಉಲ್ಲೇಖಿಸಿ ಅವರು ನನ್ನನ್ನು ಹನಿಟ್ರ್ಯಾಪ್ ಮಾಡಿ ಬ್ಲಾಕ್ ಮೇಲ್ ಮಾಡುತ್ತಿದ್ದರು ಎಂದು ಬರೆದಿದ್ದಾರೆ ಎನ್ನಲಾಗಿದೆ. ಜೊತೆಗೆ ಆಕೆಯ ತಾಯಿ, ತಂಗಿ ಮತ್ತು ಪರಿಚಯಸ್ಥರು ಕೂಡ ಬ್ಲಾಕ್ ಮೇಲ್ ಮಾಡುತ್ತಿದ್ದರು ಎಂದು ಆರೋಪಿಸಿದ್ದಾರೆ. ಮಾತ್ರವಲ್ಲದೇ ಓರ್ವ ಪೊಲೀಸ್ ಸಿಬ್ಬಂದಿ ಮತ್ತು ರೆಸಾರ್ಟ್ ಮಾಲೀಕರೊಬ್ಬರ ಹೆಸರನ್ನು ಪತ್ರದಲ್ಲಿ ಉಲ್ಲೇಖಿಸಿದ್ದಾರೆ ಎನ್ನಲಾಗಿದೆ. ಹಾಗಾಗಿ ಸಂದೇಶ್ ಹನಿಟ್ರಾಪ್ ಗೆ ಒಳಗಾಗಿ ಮರ್ಯಾದೆಗೆ ಅಂಜಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಮೇಲ್ನೋಟಕ್ಕೆ ತಿಳಿದುಬರುತ್ತಿದೆ.
ಸಂದೇಶ್ ಅವರ ಪತ್ನಿ ನೀಡಿರುವ ದೂರನ್ನು ಆದರಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಪ್ರಕರಣದ ತನಿಖೆಗೆ ವಿಶೇಷ ಪೊಲೀಸ್ ತಂಡ ರಚಿಸಿದ್ದಾರೆ.
ದೇಶ ಸೇವೆ ಮಾಡಿ ವಿಶ್ರಾಂತ ಜೀವನ ನಡೆಸುತ್ತಿದ್ದ ಹೆಮ್ಮೆಯ ಯೋಧರೊಬ್ಬರು ಹನಿಟ್ರ್ಯಾಪ್ ಬಲೆಗೆ ಬಿದ್ದು ತನ್ನ ಜೀವ ಕಳೆದುಕೊಂಡಿದ್ದಾರೆ. ಪತ್ನಿ ಮತ್ತು ಮಕ್ಕಳು ತಬ್ಬಲಿಯಾಗಿದ್ದಾರೆ.