ಅಗಲಿದ ಹಿರಿಯ ಚೇತನ ಡಿ.ಬಿ. ಚಂದ್ರೇಗೌಡ ಅವರಿಗೆ ಭಾರತೀಯ ಜನತಾ ಪಕ್ಷದ ವತಿಯಿಂದ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಪಕ್ಷದ ಮೂಡಿಗೆರೆ ಮಂಡಲ ಅಧ್ಯಕ್ಷ ಜೆ.ಎಸ್. ರಘು ಅವರ ನೇತೃತ್ವದಲ್ಲಿ ಮೂಡಿಗೆರೆ ಅಡ್ಯಂತಾಯ ರಂಗಮಂದಿರದಲ್ಲಿ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಡಿ.ಬಿ.ಸಿ.ಯವರ ಪಾರ್ಥೀವ ಶರೀರದ ಮೇಲೆ ಬಿ.ಜೆ.ಪಿ. ಬಾವುಟ ಹೊದಿಸಿ ಪಕ್ಷದ ಪರವಾಗಿ ಗೌರವ ಸೂಚಿಸಿದರು.
ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ, ಮುಖಂಡರಾದ ಹಳಸೆ ಶಿವಣ್ಣ, ಡಿ.ಬಿ. ಜಯಪ್ರಕಾಶ್, ದೀಪಕ್ ದೊಡ್ಡಯ್ಯ, ಎಂ.ಕೆ. ಚಂದ್ರೇಶ್, ಜಿ.ಕೆ. ದಿವಾಕರ್, ಹೆಚ್.ಡಿ. ರಾಮೇಗೌಡ, ಮಹೇಂದ್ರ ಡಿ.ಬಿ., ವಿ.ಕೆ. ಚಂದ್ರೇಗೌಡ, ಭರತ್ ಕನ್ನೇಹಳ್ಳಿ, ನಯನ ತಳವಾರ, ಜಯಪಾಲ್ ಬಿದರಹಳ್ಳಿ, ಬ್ರಿಜೇಶ್ ಕಡಿದಾಳ್, ಉತ್ತಮ್ ಕುಮಾರ್, ಶಿವಾನಂದ ತಾದವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಜೆ.ಎಸ್. ರಘು ಡಿ.ಬಿ.ಸಿಯವರು ನಮ್ಮ ನಡುವಿನ ಹಿರಿಯ ರಾಜಕಾರಣಿಯಾಗಿದ್ದರು. ಅವರು 2008 ರಿಂದ ಬಿ.ಜೆ.ಪಿ. ಪಕ್ಷದಲ್ಲಿ ತೊಡಗಿಸಿಕೊಂಡಿದ್ದರು. ಪಕ್ಷದ ಸಂಸದರಾಗಿ ಬೆಂಗಳೂರು ಉತ್ತರ ಕ್ಷೇತ್ರದಿಂದ ಆಯ್ಕೆಯಾಗಿದ್ದರು. ಮೂಡಿಗೆರೆ ಭಾಗದಲ್ಲಿ ಬಿ.ಜೆ.ಪಿ. ಕಾರ್ಯಕ್ರಮಗಳಿಗೆ ಸದಾ ಪ್ರೋತ್ಸಾಹ ಬೆಂಬಲ ವ್ಯಕ್ತಪಡಿಸುತ್ತಿದ್ದರು. ಅವರು ಓರ್ವ ಸರಳ ಸಜ್ಜನ ರಾಜಕಾರಣಿಯಾಗಿದ್ದರು. ಅವರ ಅಗಲಿಕೆ ಅತೀವ ನೋವು ತಂದಿದೆ ಎಂದರು.
ದೀಪಕ್ ದೊಡ್ಡಯ್ಯನವರು ಮಾತನಾಡಿ ಡಿ.ಬಿ.ಚಂದ್ರೇಗೌಡರ ರಾಜಕೀಯ ಬದುಕನ್ನು ವಿದ್ಯಾರ್ಥಿ ದೆಸೆಯಿಂದ ಗಮನಿಸುತ್ತಾ ಬಂದಿದ್ದೇವೆ. ಅವರು ಅನೇಕ ಯುವಕರಿಗೆ ಸ್ಪೂರ್ತಿಯಾಗಿದ್ದರು. ಎಲ್ಲಾ ಪಕ್ಷದವರ ಪ್ರೀತಿ ವಿಶ್ವಾಸ ಗಳಿಸಿದ್ದರು. ಭಾರತದ ಸಂವಿಧಾನ ಮತ್ತು ಸಂಸದೀಯ ನಡಾವಳಿಕೆಗಳ ಬಗ್ಗೆ ಆಳವಾದ ಜ್ಞಾನ ಹೊಂದಿದ್ದರು. ಅವರು ಮಾತುಗಳು ಅತ್ಯಂತ ಮೌಲ್ಯಯುತವಾಗಿರುತ್ತಿದ್ದವು. ಅವರ ಅಗಲಿಕೆಯಿಂದ ರಾಜ್ಯ ಓರ್ವ ಮುತ್ಸದ್ದಿಯನ್ನು ಕಳೆದುಕೊಂಡಂತಾಗಿದೆ ಎಂದರು.