ಬೈಕ್ ಅಪಘಾತದಲ್ಲಿ ಯುವಕನೋರ್ವ ತನ್ನ ಪ್ರಾಣ ಕಳೆದುಕೊಂಡಿದ್ದಾರೆ. ಚಿಕ್ಕಮಗಳೂರು ತಾಲ್ಲೂಕು ಅಂಬಳೆ ನಾಡಕಛೇರಿಯಲ್ಲಿ ಕಂಪ್ಯೂಟರ್ ಆಪರೇಟರ್ ಆಗಿದ್ದ ಚೇತನ್ ಕುಮಾರ್ ಬೈಕ್ ಅಪಘಾತದಲ್ಲಿ ಅಸುನೀಗಿದ್ದಾರೆ. ಅಂಬಳೆ ಹೋಬಳಿ ಹರಿಹರದಹಳ್ಳಿ ಗ್ರಾಮದ ಚೇತನ್ ಕುಮಾರ್ ಭಾನುವಾರ ರಾತ್ರಿ ಚಿಕ್ಕಮಗಳೂರಿನಿಂದ ಊರಿಗೆ ಬರುತ್ತಿದ್ದಾಗ ಬೈಕ್ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.
ಮೃತ ಚೇತನ್ ಕುಮಾರ್ ಅವರ ಪತ್ನಿ ಮಾನಸ ಅವರು ಈ ಬಗ್ಗೆ ಚಿಕ್ಕಮಗಳೂರು ಗ್ರಾಮಾಂತರ ಠಾಣೆಗೆ ನೀಡಿರುವ ದೂರಿನಲ್ಲಿ ; ದಿನಾಂಕ;05/11/2023 ರಂದು ರಾತ್ರಿ ಸಮಯದಲ್ಲಿ ತನ್ನ ಪತಿ ಚೇತನ್ ಕುಮಾರ ಚಿಕ್ಕಮಗಳೂರಿನಿಂದ ಊರಿಗೆ ಬರಲು ಹರಿಹರದಹಳ್ಳಿ – ಚಿಕ್ಕಮಗಳೂರು ರಸ್ತೆಯ ವಿದ್ಯಾ ಕಾಫಿ ಕ್ಯೂರೀಂಗ್ ಬಳಿ ಕೆಎ-18- ಇಕೆ-8946 ಬೈಕಿನಲ್ಲಿ ಬರುತ್ತಿರುವಾಗ ಎದುರುಗಡೆ ಬಂದ ವಾಹನದ ಬೆಳಕು ಬಿದ್ದಿದ್ದರಿಂದ ರಸ್ತೆ ಕಾಣದೆ ರಸ್ತೆಯ ಬದಿಗೆ ಬೈಕನ್ನು ಚಾಲನೆ ಮಾಡಿಕೊಂಡು ಹೋಗುವಾಗ ಬೈಕ್ ಸ್ಕಿಡ್ ಅಗಿ ಬಿದಿದ್ದರಿಂದ ಎದುರುಗಡೆಯಿಂದ ಬಂದ ವಾಹನ ಅಜಾಗರೂಕತೆ ಮತ್ತು ಅತಿವೇಗದಲ್ಲಿ ಡಿಕ್ಕಿ ಹೊಡೆದು ಹೋದ ಪರಿಣಾಮ ಚೇತನ್ ಕುಮಾರ ತಲೆಗೆ ಗಂಭೀರ ಗಾಯವಾಗಿ ಮೃತಪಟ್ಟಿರುತ್ತಾರೆ ಎಂದು ದೂರು ನೀಡಿರುತ್ತಾರೆ.
ಮೃತ ಚೇತನ್ ಕುಮಾರ್ ಅವರ ಪತ್ನಿ ನೀಡಿದ ದೂರಿನ ಮೇರೆಗೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ತನಿಖೆ ಕೈಗೊಂಡಿರುತ್ತಾರೆ.
ಅಂಬಳೆ ನಾಡಕಛೇರಿಯಲ್ಲಿ ಕಂಪ್ಯೂಟರ್ ಆಪರೇಟರ್ ಆಗಿ ಸೇವೆ ಸಲ್ಲಿಸುತ್ತಿದ್ದ ಚೇತನ್ ಕುಮಾರ್ ಅವರ ಅಕಾಲಿಕ ಸಾವನ್ನಪ್ಪಿದ್ದು, ಸ್ನೇಹಜೀವಿಯಾಗಿದ್ದ ಅವರ ನಿಧನಕ್ಕೆ ಗ್ರಾಮಸ್ಥರು, ಸ್ನೇಹಿತರು ಕಂಬಿನಿ ಮಿಡಿದಿದ್ದಾರೆ.