ಬೈಕ್ ಮತ್ತು ಗ್ಯಾಸ್ ಲಾರಿ ನಡುವಿನ ಅಪಘಾತದಲ್ಲಿ ಲಾರಿಯಡಿಗೆ ಸಿಲುಕಿ ವ್ಯಕ್ತಿಯೊಬ್ಬರು ಅಪ್ಪಚ್ಚಿಯಾಗಿ ಪ್ರಾಣಕಳೆದುಕೊಂಡ ಘಟನೆ ನಡೆದಿದೆ.
ಮೂಡಿಗೆರೆ ಸಮೀಪದ ಬಿದರಹಳ್ಳಿ ಗ್ರಾಮದಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಘಟನೆ ಶನಿವಾರ ಸಂಜೆ ನಡೆದಿದೆ.
ಬಿದರಹಳ್ಳಿ ಬಸ್ ಡಿಪೋ ಸಮೀಪ ರಸ್ತೆಗೆ ಬಿದ್ದಿದ್ದ ಬೈಕ್ ಸವಾರನ ಮೇಲೆ ಲಾರಿ ಹರಿದಿದ್ದು , ಲಾರಿಯಡಿಗೆ ಬೈಕ್ ಸವಾರ ಸಿಲುಕಿದ್ದು, ಲಾರಿಯ ಚಕ್ರದಡಿಗೆ ಸಿಲುಕಿದ ವ್ಯಕ್ತಿಯ ದೇಹ ಸಂಪೂರ್ಣ ಅಪ್ಪಚ್ಚಿಯಾಗಿದ್ದು ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ.
ವ್ಯಕ್ತಿಯನ್ನು ಕೊಪ್ಪ ತಾಲ್ಲೂಕಿನ ಲೋಕನಾಥಪುರ ಗ್ರಾಮದ ವಿಶ್ವೇಂದ್ರ(43) ಎಂದು ಗುರುತಿಸಲಾಗಿದೆ. ಹಿಂಬದಿಯಲ್ಲಿ ಕುಳಿತ್ತಿದ್ದ ಮಹಿಳೆ ರಸ್ತೆಯಿಂದ ಹೊರಗೆ ಬಿದ್ದಿದ್ದು ಅವರ ಕಾಲು ಮುರಿದಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಬೈಕಿನ ಹಿಂಬದಿಯಲ್ಲಿ ಕುಳಿತ್ತಿದ್ದ ಮಹಿಳೆ ಲಕ್ಷ್ಮಿ ಹೊನ್ನಯ್ಯ ಎಂಬುವವರು ಲೋಕನಾಥಪುರ ಸಮೀಪದವರೇ ಆಗಿದ್ದು ಮೂಡಿಗೆರೆ ತಾಲ್ಲೂಕಿನ ಸಾರಗೋಡಿಗೆ ಮದುವೆಮಾಡಿಕೊಟ್ಟಿದ್ದು ಪತಿ ನಿಧನರಾದ ನಂತರ ತವರು ಮನೆಯಲ್ಲಿ ವಾಸವಾಗಿದ್ದಾರೆ ಎಂದು ತಿಳಿದುಬಂದಿದೆ.
ಅವರು ನೀಡಿರುವ ಹೇಳಿಕೆಯಂತೆ ನಿನ್ನೆ ನಾನು ಬಾಳೆಹೊನ್ನೂರು ಮೂಲಕ ಊರಿಗೆ ಹೋಗಲು ಕೊಟ್ಟಿಗೆಹಾರ ಬಳಿ ಬಸ್ಸಿಗಾಗಿ ಕಾದು ನಿಂತಿದ್ದೆ. ಬಾಳೆಹೊನ್ನೂರು ಕಡೆಗೆ ಹೋಗುವ ಬಸ್ಸುಗಳು ಇರದ ಕಾರಣ ಅದೇ ಸಂದರ್ಭದಲ್ಲಿ ಅಲ್ಲಿಗೆ ಬೈಕಿನಲ್ಲಿ ಮೂಡಿಗೆರೆ ಕಡೆಗೆ ಹೋಗಲು ಬಂದ ಪರಿಚಿತರಾದ ವಿಶ್ವೇಂದ್ರ ಅವರ ಬಳಿ ಮೂಡಿಗೆರೆಗೆ ಡ್ರಾಪ್ ಮಾಡಿ ಅಲ್ಲಿಂದ ಸಾರಗೋಡಿಗೆ ಹೋಗುತ್ತೇನೆ ಎಂದು ಹೇಳಿ ಅವರೊಂದಿಗೆ ಬೈಕಿನಲ್ಲಿ ಬರುತ್ತಿದ್ದೆ.
ಮೂಡಿಗೆರೆ ಸಮೀಪದ ಬಿದರಹಳ್ಳಿ ಸಮೀಪ ಬರುವಾಗ ರಸ್ತೆಯಲ್ಲಿ ಆಟೋ ಮತ್ತು ದನ ಒಟ್ಟಿಗೆ ಅಡ್ಡ ಬಂದಾಗ ಬೈಕ್ ರಸ್ತೆಗೆ ಮಗುಚಿ ಬಿದ್ದಿದ್ದು, ವಿಶ್ವೇಂದ್ರ ರಸ್ತೆಗೆ ಬಿದ್ದರು, ನಾನು ರಸ್ತೆಯಿಂದ ಹೊರಗೆ ಬಿದ್ದೆ. ಅದೇ ಸಂದರ್ಭದಲ್ಲಿ ಹಿಂಬದಿಯಿಂದ ಬರುತ್ತಿದ್ದ ಗ್ಯಾಸ್ ಲಾರಿ ವಿಶ್ವೇಂದ್ರ ಅವರ ಮೈಮೇಲೆ ಹರಿದು ಅವರು ಸ್ಥಳದಲ್ಲೇ ಪ್ರಾಣಬಿಟ್ಟಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ.
ಮೃತ ವಿಶ್ವೇಂದ್ರ ಕೊಪ್ಪ ತಾಲ್ಲೂಕು ಲೋಕನಾಥಪುರದ ಕೃಷ್ಣಮೂರ್ತಿ ಎಂಬುವವರ ಪುತ್ರರಾಗಿದ್ದು, ವಿವಾಹಿತರಾಗಿದ್ದು ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಮೂಡಿಗೆರೆ ಎಂ.ಜಿ.ಎಂ. ಆಸ್ಪತ್ರೆಯಲ್ಲಿ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿ ಅವರ ಸಂಬಂಧಿಕರಿಗೆ ಮೃತದೇಹ ಹಸ್ತಾಂತರಿಸಲಾಗುತ್ತದೆ.
ಮೂಡಿಗೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು. ಮೂಡಿಗೆರೆ ಠಾಣಾಧಿಕಾರಿ ಆದರ್ಶ ರವರು ಪ್ರಕರಣದ ಬಗ್ಗೆ ಮಾಹಿತಿ ಕಲೆಹಾಕಿ ತನಿಖೆ ಕೈಗೊಂಡಿದ್ದಾರೆ.