ಚಿಕ್ಕಮಗಳೂರು ನಗರದ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯಲ್ಲಿ ಅವ್ಯವಹಾರ ನಡೆದಿದ್ದು ಈ ಸಂಬಂಧ ಐವರನ್ನು ಅಮಾನತು ಮಾಡಲಾಗಿದೆ.
ಈ ಕುರಿತು ಬ್ಯಾಂಕಿನ ಕೇಂದ್ರ ಶಾಖೆ ಜಾಹೀರಾತು ಮೂಲಕ ಅಧಿಕೃತ ಪ್ರಕಟಣೆಯನ್ನು ಹೊರಡಿಸಿದೆ.
ಹಣ ವರ್ಗಾವಣೆ, ಚಿನ್ನದ ಮೇಲಿನ ಸಾಲ ಸೇರಿದಂತೆ ಇತರ ಬಾಬುಗಳಲ್ಲಿ ಅಂದಾಜು 25 ಲಕ್ಷ ರೂ. ಗಳಿಗೂ ಅಧಿಕ ಹಣವನ್ನು ಈ ಐವರು ದುರುಪಯೋಗಪಡಿಸಿಕೊಂಡಿದ್ದಾರೆ ಎನ್ನಲಾಗಿದೆ.
ಬ್ಯಾಂಕಿನಲ್ಲಿ ನಡೆಯುತ್ತಿರುವ ಅವ್ಯವಹಾರಗಳಿಗೆ ಸಂಬಂಧಿಸಿದಂತೆ ಕೇಂದ್ರ ಕಚೇರಿಗೆ ಬಂದ ದೂರನ್ನು ಆಧರಿಸಿ ಪರಿಶೀಲಿಸಿದಾಗ ಹಣ ದುರ್ಬಳಕೆ ಮಾಡಿಕೊಂಡಿರುವುದು ಮೇಲ್ನೋಟಕ್ಕೆ ಸಾಬೀತು ಆಗಿದೆ ಎಂದು ತಿಳಿದುಬಂದಿದೆ.
ಈ ಹಿನ್ನೆಲೆಯಲ್ಲಿ ಬ್ಯಾಂಕಿನ ವ್ಯವಸ್ಥಾಪಕ ಬಿ.ಕೆ ಪ್ರಶಾಂತ್, ಸಹಾಯಕ ವ್ಯವಸ್ಥಾಪಕಿ ಎಂ.ಪಿ .ವರ್ಷಾ, ಮಾಜಿ ಶಾಖಾ ವ್ಯವಸ್ಥಾಪಕ ಸಂದೀಪ್ ಕೊಲ್ಲೂರಿ, ಮುಖ್ಯ ಕ್ಯಾಶಿಯರ್ ಜೆ. ಸಿ. ಕಾರ್ತಿಕ್ ಹಾಗೂ ವಿಶೇಷ ಸಹಾಯಕ ಜೆ .ಪಿ. ನಾರಾಯಣಸ್ವಾಮಿ ಇವರನ್ನು ಅಮಾನತು ಮಾಡಲಾಗಿದೆ.
ಇವರೊಂದಿಗೆ ಗ್ರಾಹಕರು ಯಾವುದೇ ರೀತಿಯ ವ್ಯವಹಾರ ನಡೆಸದಂತೆ ಸೂಚನೆ ನೀಡಿದ್ದು, ಒಂದೊಮ್ಮೆ ವ್ಯವಹಾರ ನಡೆಸಿದಲ್ಲಿ ಬ್ಯಾಂಕ್ ಹೊಣೆಯಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಬ್ಯಾಂಕಿನಲ್ಲಿ ನಡೆದಿರುವ ಹಣ ದುರುಪಯೋಗ ಸಂಬಂಧ ವಿಶೇಷ ಆಡಿಟ್ ತಂಡ ಆಗಮಿಸಿ ಬ್ಯಾಂಕಿನ ಎಲ್ಲಾ ವ್ಯವಹಾರಗಳನ್ನು ತಪಾಸಣೆಗೆ ಒಳಪಡಿಸಿದೆ.
ಬ್ಯಾಂಕಿನಲ್ಲಿ ಹಣ ದುರ್ಬಳಕೆ ಹಾಗೂ ಸಿಬ್ಬಂದಿ ಅಮಾನತು ಹಿನ್ನೆಲೆಯಲ್ಲಿ ಗ್ರಾಹಕರಲ್ಲಿ ತಳಮಳ ಉಂಟಾಗಿದ್ದು, ಠೇವಣಿ ಹಾಗೂ ಚಿನ್ನಾಭರಣ ಹಿಂತೆಗೆದುಕೊಳ್ಳಲು ಮುಂದಾಗಿದ್ದಾರೆ.
ಈ ಪ್ರಕರಣ ಬ್ಯಾಂಕಿನ ದಿನನಿತ್ಯದ ವ್ಯವಹಾರದ ಮೇಲೆ ಯಾವುದೇ ರೀತಿಯ ಪರಿಣಾಮವನ್ನು ಬೀರುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಅಧಿಕಾರಿಗಳು ಗ್ರಾಹಕರು ಆತಂಕಕ್ಕೆ ಒಳಗಾಗಬೇಕಾಗಿಲ್ಲ ಎಂದು ಮನವಿ ಮಾಡಿದ್ದಾರೆ.